ಸ್ಮೃತಿ ಇರಾನಿ ಸೀರೆ ಖರೀದಿ ವಿವಾದ: ಜವಳಿ ಖಾತೆಯ ಸ್ಪಷ್ಟೀಕರಣ
ನವದೆಹಲಿ, ಆಗಸ್ಟ್ 31: ಲಕ್ಷ ಲಕ್ಷ ರೂಪಾಯಿ ಮೌಲ್ಯದ ಸೀರೆ ಖರೀದಿಸಿ, ಅದರ ಬಿಲ್ ಪಾವತಿಸಲು ಸಚಿವಾಲಯಕ್ಕೆ ಸಚಿವೆ ಸ್ಮೃತಿ ಇರಾನಿ ಸೂಚಿಸಿದ್ದರು ಎನ್ನುವ ವರದಿಯ ಬಗ್ಗೆ ಜವಳಿ ಖಾತೆ ಸ್ಪಷ್ಟೀಕರಣ ನೀಡಿದೆ.
ಮಾಧ್ಯಮದಲ್ಲಿ ಬಂದಿರುವ ವರದಿ, ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ವರದಿ ಆಧಾರ ರಹಿತ. ಸ್ಮೃತಿ ಇರಾನಿಯವರಿಂದ ಯಾವುದೇ ಬಿಲ್ ಪಾವತಿಸಲು ಸಚಿವಾಲಯಕ್ಕೆ ಬಂದಿಲ್ಲ ಎಂದು ಇಲಾಖೆಯ ಎಡಿಜಿ ಘನಶ್ಯಾಮ ಗೋಯಲ್ ಸ್ಪಷ್ಟನೆ ನೀಡಿದ್ದಾರೆ. (ಸಚಿವೆ ಸ್ಮೃತಿ ಇರಾನಿಗೆ ಶಾಕ್)
ಕಾಟೇಜ್ ವೀಕ್ಷಣೆಯ ವೇಳೆ ಸ್ಮೃತಿ ಇರಾನಿ ಸೀರೆ ಮತ್ತು ಗಣೇಶನ ವಿಗ್ರಹವನ್ನು ಖರೀದಿಸಿದ್ದರು ಎಂದು ಇಂಡಿಯಾ ಸಂವಾದ್ ಅಂತರ್ಜಾಲ ವರದಿ ಮಾಡಿತ್ತು. ಈಗ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕೂಡಾ ಈ ವರದಿ ಸುಳ್ಳು ಎಂದು ಪತ್ರಿಕಾ ಹೇಳಿಕೆ ನೀಡಿದೆ.
ಸೆಂಟ್ರಲ್ ಕಾಟೇಜಿನ ಎಂಡಿ ಪ್ರಮೋದ್ ನಾಗ್ಪಾಲ್ ಪತ್ರಿಕಾ ಹೇಳಿಕೆಯನ್ನು ನೀಡಿದ್ದು, ಸ್ವಂತ ಬಳಕೆಗಾಗಿ ಸೀರೆ ಅಥವಾ ವಿಗ್ರಹವನ್ನು ಸಚಿವೆ ಸ್ಮೃತಿ ಇರಾನಿ ಖರೀದಿಸಿಲ್ಲ ಎಂದು ಹೇಳಿದ್ದಾರೆ.
ಜವಳಿ ಇಲಾಖೆಯ ಸುಪರ್ದಿಗೆ ಬರುವ ಕಾಟೇಜ್ ನಲ್ಲಿ ಸ್ಮೃತಿ ಇರಾನಿ ಎಂಟು ಲಕ್ಷ ರೂಪಾಯಿ ಮೌಲ್ಯದ ಸೀರೆ ಮತ್ತು ಗಣೇಶನ ವಿಗ್ರಹವನ್ನು ಖರೀದಿಸಿ, ಬಿಲ್ ಪಾವತಿಗೆ ಇಲಾಖೆಯ ಕಾರ್ಯದರ್ಶಿ ರಶ್ಮಿ ವರ್ಮಾಗೆ ಕಳುಹಿಸಿದ್ದರು ಎಂದು ಇಂಡಿಯಾ ಸಂವಾದ್ ವರದಿ ಮಾಡಿತ್ತು.
ರಶ್ಮಿ ವರ್ಮಾ ಬಿಲ್ಲನ್ನು ಪಾವತಿಸದೇ ಕ್ಯಾಬಿನೆಟ್ ಸೆಕ್ರೆಟರಿಗೆ ಕಳುಹಿಸಿಕೊಟ್ಟಿದ್ದರು. ಈ ವಿಚಾರದಲ್ಲಿ ರಶ್ಮಿ ವರ್ಮಾ ಮತ್ತು ಸ್ಮೃತಿ ಇರಾನಿ ನಡುವೆ ಜಟಾಪಟಿ ನಡೆದಿತ್ತು ಎಂದೂ ಇಂಡಿಯಾ ಸಂವಾದ್ ತನ್ನ ಲೇಖನದಲ್ಲಿ ಹೇಳಿತ್ತು.