ಐಐಟಿ ಸಿಬ್ಬಂದಿ ನೇಮಕಾತಿ; ಕೋಟಾ ರದ್ದುಗೊಳಿಸಲು ಸಮಿತಿ ಸೂಚನೆ
ನವದೆಹಲಿ, ಡಿಸೆಂಬರ್ 16: ಐಐಟಿಯಲ್ಲಿ ಮೀಸಲಾತಿ ನೀತಿ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ರೂಪಿಸಿದ್ದ ಕೇಂದ್ರ ಶಿಕ್ಷಣ ಸಚಿವಾಲಯದ ಸಮಿತಿಯು, ಐಐಟಿ ಸಿಬ್ಬಂದಿ ನೇಮಕಾತಿಯಲ್ಲಿ ಕೋಟಾಗಳನ್ನು ರದ್ದುಗೊಳಿಸುವಂತೆ ಶಿಫಾರಸ್ಸು ಮಾಡಿದೆ. ಮೀಸಲಾತಿ ನೀತಿಗಳ ಅನುಸರಣೆಯಿಂದ ವಿನಾಯಿತಿ ಪಡೆಯುವಂತೆ ಸೂಚಿಸಿದೆ.
ಐಐಟಿಯು ಶೈಕ್ಷಣಿಕ ಉನ್ನತಿ ಸಾಧಿಸಲು ಹಾಗೂ ಮೀಸಲಾತಿ ವರ್ಗದಿಂದ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳ ಕೊರತೆಯನ್ನು ಮೂಲವಾಗಿಟ್ಟುಕೊಂಡು ಸಮಿತಿಯು ಈ ಶಿಫಾರಸ್ಸು ನೀಡಿದೆ.
ಒಬಿಸಿಗೆ ಮೆಡಿಕಲ್ ಸೀಟಲ್ಲಿ 50% ಮೀಸಲಾತಿ ಕೋರಿದ್ದ ಅರ್ಜಿಗೆ ತಡೆ
ಈ ವರದಿಯಲ್ಲಿ, ಮಾಹಿತಿ ಹಕ್ಕು ಕಾಯ್ದೆ ಮೂಲಕ ಕಾರ್ಯಕರ್ತರೊಬ್ಬರು ನೀಡಿರುವ ಅರ್ಜಿಯ ಪ್ರಕಾರ, 2019ರ ಕೇಂದ್ರ ಶಿಕ್ಷಣ ಸಂಸ್ಥೆಗಳ ಕಾಯ್ದೆ (ಸಿಸಿಐ) ಅಡಿಯಲ್ಲಿ ಮೀಸಲಾತಿ ನೀತಿಗಳಿಂದ ವಿನಾಯಿತಿ ಪಡೆದಿರುವ ಅತ್ಯುತ್ತಮ ಸಂಸ್ಥೆಗಳ ಪಟ್ಟಿಯಲ್ಲಿ ಐಐಟಿಯನ್ನು ಸೇರಿಸಬೇಕೆಂದು ಸಮಿತಿಯು ಸಲಹೆ ನೀಡಿದೆ.
ಪ್ರಸ್ತುತ ಹೋಮಿ ಬಾಬಾ ನ್ಯಾಷನಲ್ ಇನ್ ಸ್ಟಿಟ್ಯೂಟ್ ಹಾಗೂ ಅದರ ಘಟಕಗಳು, ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಸ್ಪೇಸ್ ಫಿಸಿಕ್ಸ್ ಲ್ಯಾಬೊರೇಟರಿ, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ ಸೇರಿದಂತೆ ಎಂಟು ಸಂಸ್ಥೆಗಳು ವಿನಾಯಿತಿ ಪಡೆದಿವೆ.
ಸಂಸತ್ತಿನ ಕಾಯ್ದೆ ಅಡಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಐಐಟಿಯನ್ನು ಮೀಸಲಾತಿ ವಿನಾಯಿತಿ ಪಡೆಯಲು ಸಿಇಐ ಕಾಯ್ದೆ 2019ರ ಅಡಿಯಲ್ಲಿ ಪಟ್ಟಿ ಮಾಡಬಹುದಾಗಿದೆ ಎಂದು ವರದಿ ತಿಳಿಸಿದೆ.
ಐಐಟಿ ಸಂಸ್ಥೆಯು ಉತ್ಕೃಷ್ಟತೆ, ಸಂಶೋಧನೆ, ಬೋಧನೆ ವಿಷಯದಲ್ಲಿ ವಿಶ್ವದ ಇತರ ಉನ್ನತ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ನಿರ್ದಿಷ್ಟ ಕೋಟಾಗಳನ್ನು ರದ್ದುಪಡಿಸಿದರೆ ಉದ್ದೇಶ ಈಡೇರಬಹುದು ಎಂದು ಸಮಿತಿಯು ವಾದಿಸಿದೆ.
2020ರ ಏಪ್ರಿಲ್ ನಲ್ಲಿ ಈ ಸಮಿತಿಯನ್ನು ರಚಿಸಲಾಗಿದ್ದು, ಐಐಟಿ ದೆಹಲಿಯ ನಿರ್ದೇಶಕ ವಿ.ರಾಮ್ ಗೋಪಾಲ್ ರಾವ್ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಐಐಟಿ ಕಾನ್ಪುರದ ನಿರ್ದೇಶಕರು, ಐಐಟಿ ಬಾಂಬೆ ಮತ್ತು ಐಐಟಿ ಮದ್ರಾಸ್ ರೆಜಿಸ್ಟ್ರಾರ್ ಗಳು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಪ್ರತಿನಿಧಿಗಳು, ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಸಮಿತಿ ಒಳಗೊಂಡಿದೆ.
ನೇಮಕಾತಿಯಷ್ಟೇ ಅಲ್ಲದೇ ಪ್ರವೇಶಾತಿಗೂ ಮೀಸಲಾತಿ ನೀತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕ್ರಮಗಳನ್ನು ಸೂಚಿಸಲಾಗಿತ್ತು. ಸಮಿತಿಯು ಮೇ ತಿಂಗಳಿನಲ್ಲಿ ಎರಡು ಬಾರಿ ಸಭೆ ಸೇರಿದ್ದು, ಜೂನ್ 17ರಂದು ವರದಿಯನ್ನು ಸಲ್ಲಿಸಿತ್ತು.
ಸಂಸ್ಥೆಯ ಗುಣಮಟ್ಟದಿಂದಾಗಿ ಐಐಟಿಯಿಂದ ಸಿಬ್ಬಂದಿ ನಿರೀಕ್ಷೆಗಳು ಹೆಚ್ಚಿವೆ. ಐಐಟಿಯಲ್ಲಿ ನೇಮಕಗೊಳ್ಳುತ್ತಿರುವ ಸಿಬ್ಬಂದಿಯು ಕನಿಷ್ಠ ಪಿಎಚ್ ಡಿ ಪಡೆದವರಾಗಿರುತ್ತಾರೆ. ಉನ್ನತ ಮಟ್ಟದ ಶೈಕ್ಷಣಿಕ ದಾಖಲೆ, ಸಂಶೋಧನಾ ಸಾಧನೆಗಳ ಹಿನ್ನೆಲೆಯವರೇ ಇದ್ದಾರೆ ಎಂದು ಸಮಿತಿ ತಿಳಿಸಿದೆ.
ಮೀಸಲಾತಿಯಿಂದ ಸಂಪೂರ್ಣ ವಿನಾಯಿತಿ ನೀಡಲು ಆಗದಿದ್ದರೆ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ ಸೇರಿದಂತೆ ಎಲ್ಲಾ ವರ್ಗಗಳಿಗೆ ಮೀಸಲಾತಿ ನೀತಿಯ ಅನುಷ್ಠಾನವನ್ನು ಕೇವಲ ಸಹಾಯಕ ಪ್ರಾಧ್ಯಾಪಕ ಗ್ರೇಡ್ 1 ಹಾಗೂ ಗ್ರೇಡ್ 2ಗೆ ಸೀಮಿತಗೊಳಸಬೇಕು ಎಂದು ಶಿಫಾರಸು ಮಾಡಿದೆ.