ರಾಹುಲ್ ಗಾಂಧಿ ಗಂಗಾನದಿಗೆ ಹಾರಲು ಸಜ್ಜಾಗಲಿ: ಉಮಾ ವಾಕ್ ಪ್ರಹಾರ
ರಾಹುಲ್ ವಾರಣಾಸಿಗೆ ಬರಲಿ, ನಾನೂ ಬರುತ್ತೇನೆ. ಗಂಗಾ ಶುದ್ದೀಕರಣದ ಕೆಲಸ ನಡೆಯುತ್ತಿದ್ದ ಪಕ್ಷದಲ್ಲಿ ಅವರು ಗಂಗಾನದಿಗೆ ಹಾರಲಿ. ಒಂದು ವೇಳೆ ನಾನು ಸುಳ್ಳು ಹೇಳುತ್ತಿದ್ದೇನೆಂದಾದರೆ ನಾನು ಗಂಗಾನದಿಗೆ ಹಾರಲು ಸಿದ್ದ - ಉಮಾ ಭಾರತಿ.
ನವದೆಹಲಿ, ಮಾ 4 (ಪಿಟಿಐ) : ಉತ್ತರಪ್ರದೇಶ ಚುನಾವಣೆಯ ಫಲಿತಾಂಶದ ನಂತರ ಗಂಗಾ ನದಿಗೆ ಹಾರಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಜ್ಜಾಗಲಿ ಎಂದು ಕೇಂದ್ರ ಜಲಸಂಪನ್ಮೂಲ ಮತ್ತು ಗಂಗಾ ಶುದ್ದೀಕರಣ ಖಾತೆಯ ಸಚಿವೆ ಉಮಾ ಭಾರತಿ, ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಗಂಗಾನದಿ ಶುದ್ದೀಕರಣ ಎಂದು ಪ್ರಧಾನಿ ಮೋದಿ ಬರೀ ಬೊಗಳೆ ಬಿಡುತ್ತಿದ್ದಾರೆಂದು ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಉಮಾ, ಅಸೆಂಬ್ಲಿ ಚುನಾವಣೆಯ ನಂತರ ರಾಹುಲ್ ಗಾಂಧಿ ವಾರಣಾಸಿಗೆ ಬಂದು ವಾಸ್ತವತೆ ನೋಡಿ ಮಾತನಾಡಲಿ ಎಂದು ಹೇಳಿದ್ದಾರೆ. [ಅತ್ಯಾಚಾರಿಗಳ ಗಾಯಕ್ಕೆ ಖಾರ ಹಾಕಿ ಉಜ್ಜಬೇಕು : ಉಮಾ]
ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ ' ನಮಾಮಿ ಗಂಗೆ' ಯೋಜನೆಯ ಮುಖ್ಯಸ್ಥರಾಗಿರುವ ಉಮಾ, ಜುಲೈ 2016ರಲ್ಲಿ ಆರಂಭವಾಗಿರುವ ಮೊದಲ ಹಂತದ ಕಾರ್ಯ, ನಿಗದಿಯಾದಂತೆ ಬರುವ ವರ್ಷ ಅಕ್ಟೋಬರ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ.
ಗಂಗಾನದಿ ಶುದ್ದೀಕರಣದ ಕೆಲಸ ಭರದಿಂದ ಸಾಗುತ್ತಿದೆ. ಈ ಯೋಜನೆಯ ಬಗ್ಗೆ ಏನೂ ತಿಳಿಯದ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ. ಹಾಗಾಗಿ, ಅವರಿಗೆ ಈ ಸವಾಲು ಎಸೆಯುತ್ತಿದ್ದೇನೆ. (ಸ್ವಚ್ಛ ಗಂಗಾ ಯೋಜನೆಗೆ 132 ಕೋಟಿ ದೇಣಿಗೆ ಸಂಗ್ರಹ)
ಅವರು ವಾರಣಾಸಿಗೆ ಬರಲಿ, ನಾನೂ ಬರುತ್ತೇನೆ. ಗಂಗಾ ಶುದ್ದೀಕರಣದ ಕೆಲಸ ನಡೆಯುತ್ತಿದ್ದ ಪಕ್ಷದಲ್ಲಿ ತಾನಾಡಿದ ತಪ್ಪು ಮಾತಿಗಾಗಿ ಅವರು ಗಂಗಾನದಿಗೆ ಹಾರಲಿ. ಒಂದು ವೇಳೆ ನಾನು ಸುಳ್ಳು ಹೇಳುತ್ತಿದ್ದೇನೆಂದಾದರೆ ನಾನು ಗಂಗಾನದಿಗೆ ಹಾರಲು ಸಿದ್ದನಾಗಿದ್ದೇನೆಂದು ರಾಹುಲ್ ಗಾಂಧಿಗೆ ಉಮಾ ಭಾರತಿ ಸವಾಲು ಹಾಕಿದ್ದಾರೆ.
' ಗುಜರಾತಿನ ಗಂಗಾ ಪುತ್ರ' ಎಂದು ಮೋದಿ ವಿರುದ್ದ ರಾಹುಲ್ ಮಾಡಿದ ವ್ಯಂಗ್ಯಕ್ಕೆ ತಿರುಗೇಟು ನೀಡಿರುವ ಉಮಾ ಭಾರತಿ, ರಾಹುಲ್ ಸಂಕುಚಿತ ಮನೋಭಾವದವರು. ಗಂಗಾನದಿಯನ್ನು ಇಡೀ ವಿಶ್ವವೇ ಮಾತೆ ಎಂದು ಪೂಜಿಸುತ್ತದೆ.
ಅವರ ತಾಯಿ ಸೋನಿಯಾ ಗಾಂಧಿ ಇಟೆಲಿ ಮೂಲದವರಾದರೂ ಗಂಗಾನದಿಯ ವಿಚಾರದಲ್ಲಿ ಭಾವನಾತ್ಮಕವಾಗಿ ನನ್ನ ಜೊತೆ ಚರ್ಚಿಸುತ್ತಾರೆ. ಸೋನಿಯಾ ತನ್ನ ಮಗನಿಗೆ ಸ್ವಲ್ಪ ಬುದ್ದಿ ಹೇಳಲಿ ಎಂದು ಉಮಾ ಭಾರತಿ, ಎಐಸಿಸಿ ಉಪಾಧ್ಯಕ್ಷರ ಕಿವಿಹಿಂಡಿದ್ದಾರೆ.