ಹೆಸರು ಬದಲಾಯಿಸಿ ಟ್ವಿಟ್ಟರ್ನಲ್ಲಿ ಬ್ಲ್ಯೂ ಮಾರ್ಕ್ ಕಳೆದುಕೊಂಡ ಕೇಂದ್ರ ಸಚಿವ ರಾಜೀವ್
ನವದೆಹಲಿ, ಜು.12: ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟ್ಟರ್ನಲ್ಲಿ ಬಳಕೆದಾರರ ಹೆಸರನ್ನು ಬದಲಾಯಿಸಿದ ನಂತರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಕಿರಿಯ ಸಚಿವ ರಾಜೀವ್ ಚಂದ್ರಶೇಖರ್ ಸೋಮವಾರ ತಮ್ಮ ಟ್ವಿಟ್ಟರ್ ಪರಿಶೀಲಿಸಿದ ಬ್ಲ್ಯೂ ಟಿಕ್ ಮಾರ್ಕ್ ಕಳೆದುಕೊಂಡಿದ್ದಾರೆ.
ರಾಜೀವ್ ಚಂದ್ರಶೇಖರ್ ತಮ್ಮ ಟ್ವಿಟ್ಟರ್ ಹೆಸರನ್ನು @rajeev_mp ನಿಂದ @Rajeev_GoI ಗೆ ಬದಲಾಯಿಸಿದ ನಂತರ ಬ್ಲ್ಯೂ ಟಿಕ್ ಮಾರ್ಕ್ ಕಾಣೆಯಾಗಿದೆ. ಆದರೆ ಕೆಲವು ಗಂಟೆಗಳ ನಂತರ ಬ್ಲ್ಯೂ ಟಿಕ್ ಮಾರ್ಕ್ ಮತ್ತೆ ಕಾಣಿಸಿಕೊಂಡಿದೆ.
ಮೋಹನ್ ಭಾಗವತ್ ಸೇರಿ ಹಲವು RSS ನಾಯಕರ ಟ್ವಿಟ್ಟರ್ನಲ್ಲೂ ಬ್ಲ್ಯೂಟಿಕ್ ಕಾಣೆ
ಚಂದ್ರಶೇಖರ್ ಕಳೆದ ವಾರ ಐಟಿ ಸಚಿವಾಲಯದ ರಾಜ್ಯ ಸಚಿವ (ಎಂಒಎಸ್) ಆಗಿ ಅಧಿಕಾರ ವಹಿಸಿಕೊಂಡಿದ್ದರು. ಟ್ವಿಟ್ಟರ್ನ ಪರಿಶೀಲನಾ ನೀತಿಯ ಪ್ರಕಾರ, ಖಾತೆದಾರ ಬಳಕೆದಾರರ ಹೆಸರನ್ನು ಬದಲಾಯಿಸಿದರೆ, ಟ್ವಿಟ್ಟರ್ ಬ್ಲ್ಯೂ ಟಿಕ್ ಮಾರ್ಕ್ ತೆಗೆದುಹಾಕಬಹುದು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟ್ಟರ್, ನಾವು ಸಚಿವರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ಖಾತೆಯನ್ನು ಪರಿಶೀಲಿಸಿದ ಬಳಿಕ ಮತ್ತೆ ಬ್ಲ್ಯೂ ಟಿಕ್ ಮಾರ್ಕ್ ನೀಡಲಾಗಿದೆ. ಇದಕ್ಕಾಗಿ ನಾವು ಶೀಘ್ರವಾಗಿ ಕೆಲಸ ಮಾಡಿದ್ದೇವೆ ಎಂದು ಹೇಳಿದೆ.
ಹೊಸ ಸಾಮಾಜಿಕ ಮಾಧ್ಯಮ ನಿಯಮಗಳ ಬಗ್ಗೆ ಟ್ವಿಟ್ಟರ್ ಹಾಗೂ ಸರ್ಕಾರದ ನಡುವೆ ವಾಕ್ಸಮರ ನಡೆಯುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ.
ಇನ್ನು ಈ ಬ್ಲ್ಯೂ ಟಿಕ್ ಮಾರ್ಕ್ ವಿಚಾರ ಕೆಲವು ನೆಟಿಜನ್ಗಳ ಟೀಕೆಗೆ ಕಾರಣವಾಗಿದೆ. ಕಳೆದ ತಿಂಗಳು, ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವೈಯಕ್ತಿಕ ಖಾತೆಗಳ ಬ್ಲ್ಯೂ ಟಿಕ್ ಮಾರ್ಕ್ ಕೆಲವು ಕ್ಷಣದವರೆಗೆ ಇರಲಿಲ್ಲ. ಅದಕ್ಕೆ ಟ್ವಿಟ್ಟರ್ ಈ ಖಾತೆ ನಿಷ್ಕ್ರೀಯವಾಗಿದ್ದ ಕಾರಣ ಬ್ಲ್ಯೂ ಟಿಕ್ ಮಾರ್ಕ್ ತೆಗೆದುಹಾಕಲಾಗಿದೆ ಎಂದು ಹೇಳಿಕೊಂಡಿತ್ತು.
ಐಟಿ ನಿಯಮಗಳನ್ನು ಪಾಲಿಸದ ಕಾರಣ ಟ್ವಿಟ್ಟರ್ ಈಗಾಗಲೇ ಕೇಂದ್ರ ಸಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಭಾರತದಲ್ಲಿ ಮೇ 25 ರಿಂದ ಜಾರಿಗೆ ಬಂದ ಹೊಸ ನಿಯಮದ ಪ್ರಕಾರ ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿ ಎಂಬ ಮೂರು ಪ್ರಮುಖ ಸಿಬ್ಬಂದಿಯನ್ನು ನೇಮಕ ಮಾಡಬೇಕಾಗಿದೆ. ಈ ಮೂವರೂ ಅಧಿಕಾರಿಗಳು ಭಾರತದ ನಿವಾಸಿಗಳಾಗಿರಬೇಕಾಗಿದೆ.
ಆದರೆ ಈ ಹೊಸ ಐಟಿ ನಿಯಮಗಳನ್ನು ಪಾಲಿಸುವಲ್ಲಿ ದೇಶದಲ್ಲಿ 1.75 ಕೋಟಿ ಬಳಕೆದಾರರನ್ನು ಹೊಂದಿರುವ ಟ್ವಿಟ್ಟರ್ ವಿಫಲವಾಗಿದೆ. ಈ ಹಿಂದೆ ಸರ್ಕಾರ ಟ್ವಿಟ್ಟರ್ ಉದ್ದೇಶಪೂರ್ವಕವಾಗಿ ನಿಯಮವನ್ನು ಧಿಕ್ಕರಿಸುತ್ತಿದೆ, ಐಟಿ ನಿಯಮಗಳನ್ನು ಪಾಲಿಸಲು ವಿಫಲವಾಗಿದೆ ಎಂದು ಟ್ವಿಟ್ಟರ್ ವಿರುದ್ಧ ವಾಗ್ದಾಳಿ ನಡೆಸಿತ್ತು. ಬಳಿಕ ನೂತನ ಐಟಿ ನಿಯಮಗಳನ್ನು ಅನುಸಾರವಾಗಿ ಶಾಸನಬದ್ಧ ಅಧಿಕಾರಿಗಳನ್ನು ನೇಮಕ ಮಾಡಲು ವಿಫಲವಾದ ಕಾರಣ ಟ್ವಿಟ್ಟರ್ ಭಾರತದಲ್ಲಿ ತನ್ನ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡಿದೆ. ಈ ಹಿನ್ನೆಲೆ ಟ್ವಿಟ್ಟರ್ನಲ್ಲಿ ಮಾಡಲಾದ ಎಲ್ಲಾ ಟ್ವೀಟ್ಗಳಿಗೆ ಟ್ವಿಟ್ಟರ್ ಹೊಣೆಯಾಗಿರುತ್ತದೆ. ಈ ಹಿನ್ನೆಲೆ ಈಗಾಗಲೇ ಹಲವು ದೂರುಗಳು ಟ್ವಿಟ್ಟರ್ ವಿರುದ್ದ ದಾಖಲಾಗಿದೆ.
ಇವೆಲ್ಲ ಬೆಳವಣಿಗೆಯ ಬೆನ್ನಲ್ಲೇ ಟ್ವಿಟ್ಟರ್ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಿಸಿದ ಕೆಲ ದಿನಗಳ ನಂತರ ಕುಂದುಕೊರತೆ ಅಧಿಕಾರಿಯನ್ನು ನೇಮಿಸಿದೆ. ಹೊಸ ಐಟಿ ನಿಯಮಗಳನ್ನು ಅನುಸರಿಸಲು ತನ್ನ ಮೊದಲ ಭಾರತ ಪಾರದರ್ಶಕತೆ ವರದಿಯನ್ನು ಭಾನುವಾರ ಬಿಡುಗಡೆ ಮಾಡಿದೆ.
(ಒನ್ಇಂಡಿಯಾ ಸುದ್ದಿ)