ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಮಾತನ್ನೇ ಪುನರುಚ್ಚರಿಸಿದ ನಿತಿನ್ ಗಡ್ಕರಿ
ನವದೆಹಲಿ, ಏಪ್ರಿಲ್ 11: ತನ್ನ ಟೀಕಾಕಾರರನ್ನು ಬಿಜೆಪಿ ಎಂದಿಗೂ ದೇಶವಿರೋಧಿಗಳು ಎಂದು ಕರೆದಿಲ್ಲ ಎಂಬುದನ್ನು ಎಲ್.ಕೆ.ಅಡ್ವಾಣಿ ತಮ್ಮ ಬ್ಲಾಗ್ ಮೂಲಕ ಹೇಳಿದ ಕೆಲ ದಿನಗಳಲ್ಲೇ ಅಂಥದ್ದೇ ಸಂದೇಶವನ್ನು ಧ್ವನಿಸುವಂಥ ಮಾತನಾಡಿದ್ದಾರೆ ಕೇಂದ್ರ ಸಚಿವ ನಿತಿನ್ ಗಡ್ಕರಿ. "ಭಿನ್ನವಾದ ಅಭಿಪ್ರಾಯಗಳನ್ನೂ ನಾವು ಗೌರವಿಸಬೇಕು. ಏಕೆಂದರೆ ಇದು ನಿಜವಾದ, ಸತ್ಯವಾದ ಪ್ರಜಾತಂತ್ರ ವ್ಯವಸ್ಥೆಗೆ ಸ್ಫೂರ್ತಿ" ಎಂದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಿಜೆಪಿ ಶುರುವಾದ ದಿನದಿಂದಲು ರಾಜಕೀಯವಾಗಿ ನಮ್ಮ ನಿಲುವಿಗೆ ವಿರುದ್ಧವಾಗಿ ಇರುವವರನ್ನು "ಶತ್ರುಗಳು" ಅಂತ ನೋಡಿಲ್ಲ. ಆದರೆ ಕೇವಲ ಭಿನ್ನ ನಿಲುವಿರುವವರು ಅಷ್ಟೇ. ನಮ್ಮ ದೃಷ್ಟಿಯಲ್ಲಿ ಭಾರತೀಯ ರಾಷ್ಟ್ರೀಯತೆ ಅಂದಾಗ, ರಾಜಕೀಯವಾಗಿ ನಮಗೆ ವಿರುದ್ಧವಾದ ನಿಲುವಿರುವವರನ್ನು ದೇಶವಿರೋಧಿಗಳು ಎಂದು ಯಾವತ್ತಿಗೂ ಪರಿಗಣಿಸಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ನಮ್ಮ ಜತೆ ಇಲ್ಲ ಅನ್ನೋ ಕಾರಣಕ್ಕೆ ದೇಶ ವಿರೋಧಿಗಳು ಎಂದು ಕರೆಯಲು ಬಯಸಲ್ಲ. ಅದು ಆವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು. ನಮಗೆ ಅದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಏಕೆಂದರೆ ನಾವು ಯಾವಾಗಲೂ ಹೇಳುತ್ತಾ ಇರುತ್ತೇವೆ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭಿನ್ನವಾದ ಅಭಿಪ್ರಾಯಗಳು ಇರುತ್ತವೆ ಎಂದಿದ್ದಾರೆ.
ಸದ್ಯಕ್ಕೆ ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರದ ನಾಗ್ಪುರ್ ನಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೊದಲ ಗೆಲುವನ್ನು ಇದೇ ಕ್ಷೇತ್ರದಿಂದ ಅವರು ದಾಖಲಿಸಿದ್ದರು.
ರಾಜಕೀಯ ವಿರೋಧಿಗಳು ದೇಶದ್ರೋಹಿಗಳಲ್ಲ: ಮೌನ ಮುರಿದ ಅಡ್ವಾಣಿ
ಒಂದು ವೇಳೆ ಬಿಜೆಪಿ ಮತ್ತು ಮಿತ್ರ ಪಕ್ಷಕ್ಕೆ ಬಹುಮತ ಬಾರದೆ ದೊಡ್ಡ ಹುದ್ದೆ ನಿಭಾಯಿಸಬೇಕಾದ ಜವಾಬ್ದಾರಿ ಎದುರಾದರೆ ಏನು ಮಾಡ್ತೀರಿ ಎಂದು ಗಡ್ಕರಿ ಅವರನ್ನು ಪ್ರಶ್ನಿಸಿದರೆ, ನಾನೀಗಾಗಲೇ ಸ್ಪಷ್ಟ ಪಡಿಸಿದ್ದೇನೆ. ನಮ್ಮ ಪಕ್ಷಕ್ಕೆ ಬಹುಮತ ಸಿಕ್ಕೇ ಸಿಗುತ್ತದೆ. ಮತ್ತು ಮೋದಿಜೀ ನಮ್ಮ ಪ್ರಧಾನಿ. ನನಗೆ ಅಂತ ಯಾವ ಕಾರ್ಯಸೂಚಿಯೂ ಇಲ್ಲ ಮತ್ತು ಅಂಥ ಯಾವ ತಂಡವೂ ನನ್ನ ಜತೆ ಇಲ್ಲ ಎಂದಿದ್ದಾರೆ.