ಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ವಿಧಿವಶ
ನವದೆಹಲಿ, ಸೆ. 23: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ ವಿಧಿವಶರಾಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಕೋವಿಡ್ 19 ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್ ಅಂಗಡಿ ಅವರಿಗೆ ರಕ್ತದೊತ್ತಡ, ಮಧುಮೇಹ ಸಮಸ್ಯೆ ಇರಲಿಲ್ಲ, ರೋಗ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದರೆ ಕಳೆದ ಎರಡು ದಿನಗಳಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸುರೇಶ್ ಚನ್ನಬಸಪ್ಪ ಅಂಗಡಿ: ಕರ್ನಾಟಕದ ಮಾಜಿ ಸಚಿವ ವಿಎಸ್ ಕೌಜಲಗಿ ಅವರ ಸಂಬಂಧಿಯಾಗಿರುವ ಸುರೇಶ್ ಅಂಗಡಿ ಅವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಕೆಕೆ ಕೊಪ್ (ಕನಸಿನ ಕರವಿನ ಕೊಪ್) ಎಂಬ, ಕನ್ನಡಿಗರೇ ಹೆಚ್ಚಾಗಿರುವ ಗ್ರಾಮದಲ್ಲಿ. ತಂದೆ ಚನ್ನಬಸಪ್ಪ ಮತ್ತು ತಾಯಿ ಸೋಮವ್ವ. ಜನಿಸಿದ್ದು 1955ರ ಜೂನ್ 1ರಂದು.
ಅವರ ಹುಟ್ಟುಹಬ್ಬಕ್ಕೆ ಎರಡು ದಿನ ಮೊದಲೇ ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಿ ನರೇಂದ್ರ ಮೋದಿಯವರು ಭರ್ಜರಿ ಉಡುಗೊರೆ ನೀಡಿದ್ದರು. ಹೆಂಡತಿ ಮಂಗಳಾ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ನಗರ ಬಡಾವಣೆಯಲ್ಲಿ ಸುರೇಶ್ ಅಂಗಡಿ ಅವರ ನಿವಾಸ. ಸುರೇಶ್ ಅಂಗಡಿ ಅವರೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೂ ಬೀಗರು. ಶೆಟ್ಟರ್ ಅವರ ಮಗ ಸಂಕಲ್ಪ ಅವರು ಅಂಗಡಿ ಅವರ ಮಗಳು ಶ್ರದ್ಧಾ ಅವರ ಕೈಹಿಡಿದಿದ್ದಾರೆ.
ಸತತ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆ
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದ ಅಂಗಡಿ ಕಳೆದ ಬಾರಿ ಜಯ ಗಳಿಸಿ ಸತತ ನಾಲ್ಕು ಬಾರಿ ಲೋಕಸಭೆ ಆಯ್ಕೆಯಾಗಿದ್ದರು.
2014ರಲ್ಲಿಯೇ ಹ್ಯಾಟ್ರಿಕ್ ಸಾಧಿಸಿದ್ದ ಸುರೇಶ್ ಅಂಗಡಿ ಅವರಿಗೆ ಕೇಂದ್ರ ಸಚಿವ ಸ್ಥಾನ ಕೊನೆಗೂ ನಾಲ್ಕನೇ ಬಾರಿಯೂ ಗೆದ್ದ ನಂತರ, ವೀರಶೈವ-ಲಿಂಗಾಯತ ಕೋಟಾದಡಿ ಲಭಿಸಿತ್ತು. ಕರ್ನಾಟಕಕ್ಕೆ ರೈಲ್ವೆ ಖಾತೆ ಸಚಿವ ಸ್ಥಾನ ಲಭಿಸಿದ್ದರಿಂದ ಹೆಚ್ಚಿನ ನಿರೀಕ್ಷೆ ಹುಟ್ಟುಕೊಂಡಿತ್ತು.
ಕಾನೂನು ಸ್ನಾತಕೋತ್ತರ ಪದವೀಧರ
ಎಸ್ಎಸ್ಎಸ್ ಸಮಿತಿ ಕಾಮರ್ಸ್ ಕಾಲೇಜಿನಲ್ಲಿ ಪದವಿ ಗಳಿಸಿದ ಸುರೇಶ್ ಅಂಗಡಿ ಅವರು, ಬೆಳಗಾವಿಯ ಪ್ರತಿಷ್ಠಿತ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಕಾನೂನು ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಬೆಳಗಾವಿಯ ವಾಣಿಜ್ಯ ಮಂಡಳಿ ಎಕ್ಸಿಕ್ಯುಟಿವ್ ಸದಸ್ಯರಾಗಿ, ಕೇಂದ್ರ ಹಣಕಾಸು ಇಲಾಖೆಯ ಆಹಾರ, ಗ್ರಾಹಕ ವ್ಯವಹಾರ ಮತ್ತು ಸಾರ್ವಜನಿಕ ಸರಬರಾಜು ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
1996ರಲ್ಲಿ ಸಕ್ರಿಯ ರಾಜಕೀಯಕ್ಕೆ ಧುಮುಕಿದರು
ಸ್ವಂತ ವ್ಯಾಪಾರ ಹೊಂದಿದ್ದ ಸುರೇಶ್ ಅಂಗಡಿ ಅವರು ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದು 1996ರಲ್ಲಿ, ಅದೇ ವರ್ಷ ಬಿಜೆಪಿಯ ಬೆಳಗಾವಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. 2001ರಲ್ಲಿ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮೇಲೇರಿದ ಅಂಗಡಿ ಅವರು 2004ರಲ್ಲಿ ಮೊದಲ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಕಾಂಗ್ರೆಸ್ಸಿನ ಅಮರಸಿನ್ಹ್ ವಸಂತರಾವ್ ಪಾಟೀಲ ಅವರನ್ನು ಭಾರೀ ಅಂತರದಿಂದ ಸೋಲಿಸಿದ್ದರು. 2009ರ ಚುನಾವಣೆಯಲ್ಲಿಯೂ ಇದೇ ಮರುಕಳಿಸಿತು.
2014ರ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅಂಗಡಿ ಅವರು ಬದ್ಧವೈರಿ ಕಾಂಗ್ರೆಸ್ಸಿನ ಘಟವಾಣಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು 75,860 ಮತಗಳ ಅಂತರದಿಂದ ಸೋಲಿಸಿದ್ದರು. 2019ರ ಕದನದಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿ ಡಾ. ವಿಎಸ್ ಸಾಧುನವರ್ ಅವರನ್ನು 391,304 ಮತಗಳ ಭಾರೀ ಅಂತರದಿಂದ ಅಂಗಡಿ ಸದೆಬಡಿದಿದ್ದಾರೆ.ಬೆಳಗಾವಿಗೆ ಐಐಟಿ ತರಲು ಶ್ರಮಿಸಿದ್ದರು
ಕರ್ನಾಟಕದಲ್ಲಿ (ಧಾರವಾಡ ಅಥವಾ ಬೆಳಗಾವಿ) ಐಐಟಿಯನ್ನು ಸ್ಥಾಪಿಸಬೇಕೆಂಬ ಪ್ರಸ್ತಾವನೆ ಇದ್ದಾಗ ಸುರೇಶ್ ಅಂಗಡಿ ಅವರು ಸಾಕಷ್ಟು ಹೋರಾಟ ಮಾಡಿದ್ದರು. ಅಂದಿನ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಅಂಗಡಿ ಅವರು ಪತ್ರವನ್ನೂ ಬರೆದಿದ್ದರು. ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದ ಸ್ಮೃತಿ ಇರಾನಿ ಅವರು, ಐಐಟಿ ಸ್ಥಾಪಿಸಲು ಉಚಿತವಾಗಿ ಮತ್ತು ಯಾವುದೇ ಕಾನೂನು ತೊಡಕಿಲ್ಲದ, ಪ್ರಶಸ್ತವಾದ ಸ್ಥಳದಲ್ಲಿ, ಎಲ್ಲ ಮೂಲಸೌಕರ್ಯಗಳೂ ಇರುವ 500ರಿಂದ 600 ಎಕರೆ ಜಮೀನು ಬೇಕಾಗುತ್ತದೆ, ಎಂದು ಪ್ರತಿಪತ್ರ ಕಳಿಸಿದ್ದರು. ಕಡೆಗೂ ಬೆಳಗಾವಿಗೆ ಐಐಟಿ ಒಲಿಯಲೇ ಇಲ್ಲ.