ದಲಿತರ ಭೂ ಕಬಳಿಕೆ, ಕೇಂದ್ರ ಸಚಿವರ ಮೇಲೆ ಎಫ್ಐಆರ್
ನವದೆಹಲಿ, ಫೆಬ್ರವರಿ 8: ಕೇಂದ್ರದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಸಚಿವ ಗಿರಿರಾಜ್ ಸಿಂಗ್ ಮೇಲೆ ಎಫ್ಐಆರ್ ದಾಖಲಾಗಿದೆ.
ದಲಿತರೊಬ್ಬರಿಗೆ ಸೇರಿದ ಭೂಮಿಯನ್ನು ಕಬಳಿಸಿದ ಆರೋಪದಲ್ಲಿ ಅವರ ಮೇಲೆ ಬಿಹಾರ ರಾಜಧಾನಿ ಪಾಟ್ನಾದ ದನಪುರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಬಿಹಾರದಲ್ಲಿ ಬಿಜೆಪಿ ಮೈತ್ರಿ ಸರಕಾರ ಅಸ್ತಿತ್ವದಲ್ಲಿದೆ.
ವಿಶೇಷ ಎಸ್.ಸಿ ಮತ್ತು ಎಸ್.ಟಿ ನ್ಯಾಯಾಲಯದ ಆದೇಶದ ಮೇರೆಗೆ ಫೆಬ್ರವರಿ 2ರಂದು ಗಿರಿರಾಜ್ ಸಿಂಗ್ ಮತ್ತು 32 ಜನ ಇತರರ ವಿರುದ್ಧ ಸಿಆರ್ ಪಿಸಿ ಸೆಕ್ಷನ್ 156 (3)ರ ಅಡಿಯಲ್ಲಿ ದೂರು ದಾಖಲಾಗಿದೆ.
ರಾಮ್ ನಾರಾಯಣ್ ಪ್ರಸಾದ್ ಎನ್ನುವವರು ಅಸೊಪುರ್ ಗ್ರಾಮದಲ್ಲಿರುವ ತಮ್ಮ ಎರಡು ಎಕರೆ ಮತ್ತು6 ಸೆಂಟ್ಸ್ ಜಾಗವನ್ನು ಗಿರಿರಾಜ್ ಸಿಂಗ್ ಮತ್ತು ಸಹಚರರು ಕಬಳಿಸಿದ್ದಾರೆ ಎಂದು ದೂರು ನೀಡಿದ್ದರು. ಮತ್ತು ಕಬಳಿಕೆಯನ್ನು ವಿರೋಧಿಸಿದಾಗ ನನ್ನ ಮೇಲೆ ದೌರ್ಜನ್ಯ ನಡೆಸಲಾಯಿತು ಎಂದು ದೂರಿನಲ್ಲಿ ತಿಳಿಸಿದ್ದರು.
ಗಿರಿರಾಜ್ ಸಿಂಗ್ ಮೇಲೆ ಎಫ್ಐಆರ್ ದಾಖಲಾದ ಬೆನ್ನಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಆರ್.ಜೆ.ಡಿಯ ತೇಜಸ್ವಿ ಯಾದವ್ ಆಗ್ರಹಿಸಿದ್ದಾರೆ. ನಿಮ್ಮ ಆತ್ಮೀಯ ಗೆಳೆಯ ಗಿರಿರಾಜ್ ಸಿಂಗ್ ದಲಿತರ ಮೂರು ಎಕರೆ ಜಮೀನು ಕಬಳಿಸಿದ್ದಾರೆ. ರಾಜಭವನಕ್ಕೆ ಹೋಗಿ ರಾಜೀನಾಮೆ ನೀಡಿ ಎಂದು ಅವರು ನಿತೀಶ್ ಕುಮಾರ್ ಮೇಲೆ ಹರಿಹಾಯ್ದಿದ್ದಾರೆ.