ಐಸಿಸಿ ಟಿ-20 ವಿಶ್ವಕಪ್: ಭಾರತ-ಪಾಕಿಸ್ತಾನದ ನಡುವೆ ಪಂದ್ಯವೇ ಬೇಡ ಎಂದ ಸಚಿವರು!
ನವದೆಹಲಿ, ಅಕ್ಟೋಬರ್ 18: ಐಸಿಸಿ ಪುರುಷರ ಟಿ-20 ವಿಶ್ವಕಪ್ 2021ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸಬೇಕು ಎಂದು ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಬೇಡಿಕೆ ಇಟ್ಟಿದ್ದಾರೆ. ಎರಡು ದೇಶಗಳ ನಡುವಿನ ಉದ್ವಿಗ್ನ ಸಂಬಂಧದಿಂದಾಗಿ ಈ ಪಂದ್ಯವನ್ನು ಮರುಪರಿಶೀಲಿಸಬೇಕು ಎಂದು ಕೋರಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ಮೊದಲ ಪಂದ್ಯಕ್ಕಾಗಿ ಈಗಾಗಲೇ ಅಕ್ಟೋಬರ್ 24ರ ದಿನಾಂಕವನ್ನು ನಿಗದಿಪಡಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹತ್ಯೆಗಳ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ನಡೆಸಬೇಕೇ ಎಂಬ ಪ್ರಶ್ನೆಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. "ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಉತ್ತಮವಾಗಿಲ್ಲದ ಕಾರಣ ಪಂದ್ಯವನ್ನು ಮರುಪರಿಶೀಲಿಸಬೇಕು ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಐಪಿಎಲ್ 2021: 125+ ದೇಶಗಳಲ್ಲಿ ಲೈವ್ ಪ್ರಸಾರ, ಇನ್ನಿತರ ಮಾಹಿತಿ
ಜಮ್ಮು ಕಾಶ್ಮೀರದಲ್ಲಿ ಇತ್ತೀಚಿಗೆ ವಲಸೆ ಕಾರ್ಮಿಕರ ಸರಣಿ ಹತ್ಯೆಗಳು ನಡೆಯುತ್ತಿವೆ. ಕಳೆದ ಎರಡು ದಿನಗಳಲ್ಲಿ ಮೂರು ಕಡೆ ಉಗ್ರರು ವಲಸೆ ಕಾರ್ಮಿಕರ ಮೇಲೆ ದಾಳಿ ಮಾಡಿದ್ದಾರೆ. ಶನಿವಾರ ಬಿಹಾರ ಮೂಲಕ ಗೋಲ್ ಗಪ್ಪಾ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಮೂಲದ ವಲಸೆ ಕಾರ್ಮಿಕರನ್ನು ಉಗ್ರರು ಕೊಂದು ಹಾಕಿದ್ದಾರೆ. ಭಾನುವಾರ ಬಿಹಾರ ಮೂಲದ ರಾಜಾ ರಿಷಿದೇವ್ ಮತ್ತು ಯೋಗೇಂದ್ರ ರಿಷಿದೇವ್ ಎಂಬ ಇಬ್ಬರು ಕಾರ್ಮಿಕರನ್ನು ಅನಂತನಾಗ್ನಲ್ಲಿ ಹತ್ಯೆ ಮಾಡಲಾಗಿದೆ.
ಭಾರತ-ಪಾಕ್ ಪಂದ್ಯ ರದ್ದುಗೊಳಿಸಲು ಆಗ್ರಹ:
ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯವನ್ನು ರದ್ದುಗೊಳಿಸುವಂತೆ ಪಂಜಾಬ್ ಸಚಿವ ಪರ್ಗತ್ ಸಿಂಗ್ ಕೂಡ ಕರೆ ನೀಡಿದ್ದು, ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ನಾವು ಏನನ್ನಾದರೂ ತಪ್ಪಿಸಬೇಕು ಎಂದು ಹೇಳಿದ್ದರು. "ಟಿ-20 ವಿಶ್ವಕಪ್ನಲ್ಲಿ ಭಾರತ vs ಪಾಕಿಸ್ತಾನ ಪಂದ್ಯವನ್ನು ನಡೆಸಬಾರದು, ಏಕೆಂದರೆ ಗಡಿಯಲ್ಲಿನ ಪರಿಸ್ಥಿತಿ ಸೂಕ್ತವಲ್ಲ ಮತ್ತು ಎರಡೂ ದೇಶಗಳು ಪ್ರಸ್ತುತ ಒತ್ತಡದ ಅವಧಿಯನ್ನು ಎದುರಿಸುತ್ತಿವೆ. ನಾವು ಮಾನವೀಯತೆಯನ್ನು ಕಾಪಾಡಬೇಕು ಮತ್ತು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುವಂತಹ ಯಾವುದೇ ಕೆಲಸವನ್ನು ಮಾಡಬಾರದು "ಎಂದು ಅವರು ತಿಳಿಸಿದ್ದರು.
ಶಾಶ್ವತವಾಗಿ ಭಾರತ-ಪಾಕಿಸ್ತಾನ ಪಂದ್ಯ ರದ್ದುಗೊಳಿಸಲು ಆಗ್ರಹ:
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕರಿಂದ ಹತ್ಯೆಗೀಡಾದ ಪಾನಿಪುರಿ ಮಾರಾಟಗಾರ ಅರವಿಂದ ಕುಮಾರ್ ಸಾಹ್ ಅವರ ಸಹೋದರ ಮುಖೇಶ್ ಸಾಹ್, ಭಾರತ-ಪಾಕಿಸ್ತಾನ ಪಂದ್ಯಗಳನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. "ಭಯೋತ್ಪಾದಕರು ಪಾಕಿಸ್ತಾನದ ಮೂಲಕ ಜಮ್ಮುವನ್ನು ಪ್ರವೇಶಿಸಿ ಜನರನ್ನು ಕೊಲ್ಲುತ್ತಿದ್ದಾರೆ. ನಾವು ಪಾಕಿಸ್ತಾನದ ವಿರುದ್ಧ ಮತ್ತೆ ಯಾವುದೇ ಪಂದ್ಯವನ್ನು ಆಡಬಾರದು," ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಜೊತೆಗಿನ ಪಂದ್ಯದ ಬಗ್ಗೆ ಕೊಹ್ಲಿ ಮಾತು:
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸುತ್ತಲಿನ ಪ್ರಚೋದನೆಯನ್ನು ತಗ್ಗಿಸುವ ನಿಟ್ಟಿನಲ್ಲಿ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. "ಪಾಕಿಸ್ತಾನ ವಿರುದ್ಧದ ನಮ್ಮ ಪಂದ್ಯವನ್ನು ನಾವು ಕ್ರಿಕೆಟ್ ನ ಮತ್ತೊಂದು ಆಟದಂತೆ ನೋಡುತ್ತೇವೆಯೇ ಹೊರತೂ ಅದರ ಸುತ್ತಲೂ ಹೆಚ್ಚು ಪ್ರಚಾರವಿದೆ ಎಂದು ನನಗೆ ತಿಳಿದಿದೆ. ಅದಕ್ಕಿಂತ ಹೆಚ್ಚಾಗಿ ಟಿಕೆಟ್ ಮಾರಾಟ ಮತ್ತು ಬೇಡಿಕೆಯ ಬಗ್ಗೆ ಗೊತ್ತಿದೆ," ಎಂದು ಹೇಳಿದ್ದಾರೆ.
2019ರಲ್ಲಿ ಕೊನೆಯ ಪಂದ್ಯ:
ಕಳೆದ 2019ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಒಡಿಐ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಅಂದಿನಿಂದ ಇತ್ತೀಚಿನವರೆಗೂ ಉಭಯ ತಂಡಗಳ ನಡುವೆ ಯಾವುದೇ ಪಂದ್ಯಗಳು ನಡೆದಿಲ್ಲ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚಾದ ಕಾರಣ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳನ್ನೂ ಸ್ಥಗಿತಗೊಳಿಸಲಾಗಿತ್ತು.
Recommended Video