ಉತ್ತರಾಖಂಡ ಹಿಮಪ್ರವಾಹ; ವರದಿ ಹಂಚಿಕೊಂಡ ಗೃಹ ಸಚಿವ ಅಮಿತ್ ಶಾ
ನವದೆಹಲಿ, ಫೆಬ್ರುವರಿ 09: ಉತ್ತರಾಖಂಡದ ಚಾಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಪ್ರವಾಹದ ಕುರಿತು ಗೃಹ ಸಚಿವ ಅಮಿತ್ ಶಾ ರಾಜ್ಯ ಸಭೆಯಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಪರ್ವತದಲ್ಲಿನ ಬೃಹತ್ ಗಾತ್ರದ ಹಿಮಗಲ್ಲು ಮುಖ್ಯ ಹಿಮಗಲ್ಲಿನಿಂದ ಬೇರ್ಪಟ್ಟು ಮುರಿದುಕೊಂಡು ಬಿದ್ದಿದ್ದು, ಕಣಿವೆಯಲ್ಲಿ ಹಿಮಪ್ರವಾಹಕ್ಕೆ ಕಾರಣವಾಗಿದೆ. ಧೌಲಿ ಗಂಗಾ ಹಾಗೂ ಅಲಕಾನದಿಗಳು ಇದರಿಂದ ಉಕ್ಕಿ ಹರಿದಿವೆ ಎಂದು ಡಿಆರ್ ಡಿಒ ಪ್ರಾಥಮಿಕ ಹೇಳಿಕೆ ನೀಡಿದೆ.
ಉತ್ತರಾಖಂಡ ಹಿಮ ಪ್ರವಾಹ; ಅಷ್ಟಕ್ಕೂ ಘಟನೆ ಹಿಂದಿನ ಕಾರಣವೇನು?
ಸಂಸತ್ತಿನಲ್ಲಿ ಮಂಗಳವಾರ ಘಟನೆ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಅಮಿತ್ ಶಾ, "ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಸಂಬಂಧಿತ ಸಂಸ್ಥೆಗಳು ಉತ್ತರಾಖಂಡದಲ್ಲಿ ಪರಿಸ್ಥಿತಿ ನಿರ್ವಹಣೆಯಲ್ಲಿ ತೊಡಗಿಕೊಂಡಿವೆ. ಇಂಡೋ-ಟಿಬೆಟಿಯನ್ ಗಡಿ ಪಡೆಯ 450 ಮಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಐದು ತಂಡ, ಭಾರತೀಯ ಸೇನೆಯ ಎಂಟು ತಂಡ, ವಾಯುಪಡೆ ಹಾಗೂ ವಾಯುಪಡೆಯ ಐದು ಹೆಲಿಕಾಪ್ಟರ್ ಗಳು ಶೋಧನೆ ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ" ಎಂದು ತಿಳಿಸಿದರು.
ಸೋಮವಾರ ಸಂಜೆ ಐದು ಗಂಟೆವರೆಗೂ 20 ಮೃತದೇಹಗಳು ದೊರೆತಿವೆ. 197 ಮಂದಿ ನಾಪತ್ತೆಯಾಗಿದ್ದಾರೆ. ಇದರಲ್ಲಿ 139 ಮಂದಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ಗೆ (ಎನ್ಟಿಪಿಸಿ) ಸೇರಿದ್ದು, 46 ಮಂದಿ ರಿಷಿ ಗಂಗಾ ಪವರ್ ಪ್ರಾಜೆಕ್ಟ್ನಲ್ಲಿ ತೊಡಗಿಕೊಂಡವರಾಗಿದ್ದಾರೆ. ಇನ್ನುಳಿದ 12 ಮಂದಿ ಗ್ರಾಮಸ್ಥರು ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಬೇರೆ ಬೇರೆ ಮೂಲಗಳಿಂದ ಮಾಹಿತಿ ಕಲೆ ಹಾಕಿದೆ. ಹೀಗಾಗಿ ಈ ಸಂಖ್ಯೆಯಲ್ಲಿ ವ್ಯತ್ಯಾಸವಾಗಬಹುದು. ಇದುವರೆಗೂ ಎನ್ಟಿಪಿಸಿಯ 12 ಮಂದಿ ಹಾಗೂ ರಿಷಿ ಗಂಗಾ ಪ್ರಾಜೆಕ್ಟ್ನ 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಎನ್ ಟಿಪಿಸಿ ಸುರಂಗದಲ್ಲಿ 25ರಿಂದ 30 ಮಂದಿ ಸಿಲುಕಿರುವ ಶಂಕೆ ಇದೆ ಎಂದು ಹೇಳಿದರು.