ಕೇಂದ್ರದಿಂದ ಪರಿಷ್ಕೃತ ಕೋವಿಡ್-19 ಮಾರ್ಗಸೂಚಿ ಸಂಬಂಧ ರಾಜ್ಯಗಳಿಗೆ ಪತ್ರ
ನವದೆಹಲಿ, ಜೂನ್ 29: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿರುವ ಹಿನ್ನೆಲೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪರಿಷ್ಕೃತ ಮಾರ್ಗಸೂಚಿಗಳ ಸಂಬಂಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.
ಕೋವಿಡ್-19 ಸಂದರ್ಭದಲ್ಲಿ ಪರಿಷ್ಕೃತ ಕಣ್ಗಾವಲು ಕಾರ್ಯತಂತ್ರಕ್ಕಾಗಿ ಯಾವ ರೀತಿ ಕಾರ್ಯಾಚರಣೆ ನಡೆಸಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಮತ್ತೆ ಕೊರೊನಾ ಕೇಕೆ: ಒಂದೇ ದಿನ 14,506 ಕೇಸ್
ದೇಶದಲ್ಲಿ ಕಳೆದ 24 ಗಂಟೆಗಳಲ್ಲೇ 15,825 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 30 ಮಂದಿ ಮೃತಪಟ್ಟಿದ್ದು, 11,574 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಇದರ ಮಧ್ಯೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ಯಾವೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಕೇಂದ್ರ ಆರೋಗ್ಯ ಸಚಿವಾಲಯದ ಪತ್ರದಲ್ಲಿ ಏನಿದೆ?
* ಕೊರೊನಾ ವೈರಸ್ ತಪಾಸಣೆಯ ವೇಗವನ್ನು ಹೆಚ್ಚಿಸುವುದು, ಸೋಂಕಿನ ಲಕ್ಷಣಗಳು ಕಂಡು ಬಂದವರನ್ನು RT-PCR ಪರೀಕ್ಷೆಗೆ ಒಳಪಡಿಸುವುದು.
* ಕೋವಿಡ್-19 ಪರಿಷ್ಕೃತ ಮಾರ್ಗಸೂಚಿಗಳನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಅದರ ಪ್ರಕಾರ, ಅಂತಾರಾಷ್ಟ್ರೀಯ ಪ್ರಯಾಣಿರನ್ನು ರಾಪಿಡ್ ಆಂಟಿಜೆನಿಕ್ ಟೆಸ್ಟ್ ಗೆ ಒಳಪಡಿಸಬೇಕು. ವಿದೇಶಗಳಿಂದ ಆಗಮಿಸುವ ಶೇ.2ರಷ್ಟು ಪ್ರಯಾಣಿಕರನ್ನು RT-PCR ಪರೀಕ್ಷೆಗೆ ಒಳಪಡಿಸಬೇಕು. ಕೋವಿಡ್-19 ಸೋಂಕು ಪತ್ತೆಯಾದವರನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಬೇಕು.
* ಕೋವಿಡ್-19 ಸೋಂಕಿತರಲ್ಲೇ ಅನಾರೋಗ್ಯದಂತಹ ಪ್ರಭಾವ ಬೀರುವ(ILI) ಪ್ರಕರಣಗಳಿಗೆ ಎಲ್ಲ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು. 1 ರಿಂದ 20 ಸೋಂಕಿತರಲ್ಲಿ ಶೇ.5ರಷ್ಟು ಸೋಂಕಿತರನ್ನು RT-PCR ಪರೀಕ್ಷೆಗೊಳಪಡಿಸಬೇಕು. ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆ ಮತ್ತು ನಿರ್ವಹಣೆಗೆ ಜಿಲ್ಲಾ ಆರೋಗ್ಯ ಅಧಿಕಾರಿಯೇ ಹೊಣೆಯಾಗಿರುತ್ತಾರೆ.
* ಕೋವಿಡ್-19 ಸೋಂಕಿನ ಬಗ್ಗೆ ನಡೆಸಿದ ತಪಾಸಣೆಯ ಬಗ್ಗೆ ಐಸಿಎಂಆರ್ ಅಧಿಕೃತ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.