ಪ್ರವಾಹ ಪೀಡಿತ ಅಸ್ಸಾಂಗೆ 324 ಕೋಟಿ ರೂ. ಬಿಡುಗಡೆ
ನವದೆಹಲಿ ಮೇ 27: ಪ್ರವಾಹ ಪೀಡಿತ ಅಸ್ಸಾಂಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಮುಂಗಡವಾಗಿ 324 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ.
"2022ರ ಮೊದಲ ಅವಧಿಯಲ್ಲಿ ಅಸ್ಸಾಂ ರಾಜ್ಯದ ಹಲವೆಡೆ ಪ್ರವಾಹ ಮತ್ತು ಭೂಕುಸಿತದಿಂದ ಉಂಟಾದ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಗೃಹ ಸಚಿವಾಲಯದಿಂದ ಪಡೆದ ಶಿಫಾರಸು ಮೇರೆಗೆ ರಾಜ್ಯ ಸರಕಾರಕ್ಕೆ ಮುಂಗಡವಾಗಿ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ,'' ಎಂದು ಮೇ 25ರ ಕೇಂದ್ರ ಹಣಕಾಸು ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಮಳೆ ನೀರು ಪ್ರವಾಹ: ದಾವೋಸ್ನಿಂದ ವಿಡಿಯೊ ಕಾನ್ಫರೆನ್ಸ್ ನಡೆಸಿದ ಅಶ್ವತ್ಥನಾರಾಯಣ
ಕೇಂದ್ರ ಸರಕಾರಕ್ಕೆ ಕೃತಜ್ಞತೆ
ಇದಕ್ಕೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, "ಪ್ರಸ್ತುತ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಅಸ್ಸಾಂಗೆ ಸಹಾಯ ಮಾಡಲು ಎಸ್ಡಿಆರ್ಎಫ್ ನಿಂದ 324 ಕೋಟಿ ರೂ.ಗಳನ್ನು ಮುಗಂಡವಾಗಿ ಬಿಡುಗಡೆ ಮಾಡಿದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೃತಜ್ಞತೆಗಳು. ಈ ನಿಧಿಯು ಪ್ರವಾಹ ಪೀಡಿತ ನಾಗರಿಕರ ಸಕಾಲಿಕ ಪರಿಹಾರ ಮತ್ತು ಪುನರ್ ವಸತಿಯನ್ನು ಕಲ್ಪಿಸಲಿದೆ,'' ಎಂದು ಟ್ವೀಟ್ ಮಾಡಿದ್ದಾರೆ.
ಹಾನಿ ಮೌಲ್ಯಮಾಪನದ ಕುರಿತು ಸಭೆ
ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ತಂಡವು ಗುರುವಾರ ಗುವಾಹಟಿ ತಲುಪಿ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎಎಸ್ ಡಿಎಂಎ)ದ ಅಧಿಕಾರಿಗಳೊಂದಿಗೆ ರಾಜ್ಯದಲ್ಲಿ ಇತ್ತೀಚಿನ ಪ್ರವಾಹ ಮತ್ತು ಭೂಕುಸಿತದ ಹಾನಿ ಮೌಲ್ಯಮಾಪನದ ಕುರಿತು ಸಭೆ ನಡೆಸಿತು.
ಎರಡು ಗುಂಪುಗಳಾಗಿ ವಿಂಗಡನೆ
ಈ ವರ್ಷದ ಪ್ರವಾಹವು ಅಸ್ಸಾಂನ ಹಲವು ಭಾಗಗಳನ್ನು ಹಾನಿ ಮಾಡಿದೆ. ಹಾಗೂ ಸುಮಾರು 3.46 ಲಕ್ಷ ನಾಗರಿಕರು ಮತ್ತು 247 ಹಳ್ಳಿಗಳನ್ನು ಬಾಧಿಸಿದೆ. ಎಎಸ್ ಡಿಎಂಎ ವರದಿಗಳ ಪ್ರಕಾರ, ಹಾನಿ ಮೌಲ್ಯಮಾಪನವನ್ನು ಪರಿಣಾಮಕಾರಿಯಾಗಿ ವೇಗಗೊಳಿಸಲು, ಸಂಬಂಧಿತ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲು ಐಎಂಸಿಟಿ ಸದಸ್ಯರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ ಎಂದು ತಿಳಿಸಲಾಗಿದೆ.
ಮೊದಲ ಗುಂಪಿನ ಸದಸ್ಯರು
ಮೊದಲ ಗುಂಪಿನಲ್ಲಿ ತಂಡದ ನಾಯಕ ಎನ್ ಡಿಎಂಎ, ಎಫ್ಎ ರವಿನೇಶ್ ಕುಮಾರ್, ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಸಹಾಯಕ ನಿರ್ದೇಶಕಿ ಅಂಜಲಿ ಮೌರ್ಯ, ರಸ್ತೆ ಸಾರಿಗೆ ಸಚಿವಾಲಯದ ಪ್ರಾದೇಶಿಕ ಅಧಿಕಾರಿ ಅಡೆಲ್ಬರ್ಟ್ ಸುಂಗಿ ಹಾಗೂ ಎಎಸ್ ಡಿಎಂಎ ಜಂಟಿ ಕಾರ್ಯದರ್ಶಿ ಮತ್ತು ಜಂಟಿ ಸಿಇಒ ಪಿ. ವಿಜಯ ಭಾಸ್ಕರ್ ಅವರು ಮೇ 27 ಮತ್ತು ಮೇ 28ರಂದು ಕ್ಯಾಚಾರ್ ಮತ್ತು ದಿಮಾ ಹಸಾವೊ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ಎರಡನೇ ಗುಂಪಿನ ಸದಸ್ಯರು
ಎರಡನೇ ಗುಂಪಿನಲ್ಲಿ ಕೃಷಿ ಸಚಿವಾಲಯದ ಜಂಟಿ ನಿರ್ದೇಶಕ ಜಿಂಟು ದಾಸ್, ಜಲಶಕ್ತಿ ಸಚಿವಾಲಯದ ಅಧೀಕ್ಷಕ ಎಂಜಿನಿಯರ್ ಅಜಯ್ ಕುಮಾರ್ ಸಿನ್ಹಾ, ಭಾರತ ಸರಕಾರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಕೈಲಾಶ್ ಶಂಕ್ಲಾ ಅವರು ಮೇ 27, ಮೇ 28ರಂದು ದರಂಗ್, ನಾಗಾನ್ ಮತ್ತು ಹೊಜೈ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ಪ್ರವಾಹಕ್ಕೆ ಒಟ್ಟು 30 ಮಂದಿ ಬಲಿ:
ಇಲ್ಲಿಯವರೆಗಿನ ಪ್ರವಾಹ ವರದಿಯ ಪ್ರಕಾರ, ಕಳೆದ 24 ಗಂಟೆಯಲ್ಲಿ ಇಬ್ಬರು ಜನರು ಪ್ರವಾಹದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಇಲ್ಲಿಯವರೆಗೆ ಪ್ರವಾಹಕ್ಕೆ ಒಟ್ಟು 30 ಮಂದಿ ಬಲಿಯಾಗಿದ್ದಾರೆ. ಈ ಪೈಕಿ 25 ಮಂದಿ ಪ್ರವಾಹದಿಂದ ಮತ್ತು 5 ಮಂದಿ ಭೂಕುಸಿತದಿಂದ ಸಾವನ್ನಪ್ಪಿದ್ದಾರೆ. ಅಲ್ಲದೇ 12 ಜಿಲ್ಲೆಗಳ 956 ಗ್ರಾಮಗಳ 5,61,149 ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ.
ಒಟ್ಟು 66,836 ಮಂದಿ ನಿರಾಶ್ರಿತರು
ಇನ್ನೊಂದೆಡೆ ಪ್ರವಾಹದಿಂದ ಒಟ್ಟು 47,139.12 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪ್ರವಾಹಪೀಡಿತ ಜಿಲ್ಲೆಗಳಲ್ಲಿ 295 ನಿರಾಶ್ರಿತರ ಶಿಬಿರಗಳು ಹಾಗೂ 70 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಒಟ್ಟು 66,836 ಮಂದಿ ನಿರಾಶ್ರಿತರು ತಂಗಿದ್ದಾರೆ ಎಂದು ಎಎಸ್ ಡಿಎಂಎ ಮಾಹಿತಿ ನೀಡಿದೆ.