ನಿಷೇಧದ ಬಳಿಕ ಅಲ್ಪ ಪ್ರಮಾಣದ ಗೋಧಿ ರಫ್ತಿಗೆ ಕೇಂದ್ರ ಅನುಮತಿ
ನವದೆಹಲಿ, ಜೂನ್ 2: ಕಳೆದ ತಿಂಗಳು ಗೋಧಿ ರಫ್ತು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರ, ಈಗ 4,69,202 ಟನ್ ಗೋಧಿ ರಫ್ತು ಮಾಡಲು ಅನುಮತಿ ನೀಡಿದೆ. ಸರ್ಕಾರ ರಫ್ತು ನಿಷೇಧ ಮಾಡುವುದಕ್ಕೂ ಮುನ್ನವೇ 1.7 ಮಿಲಿಯನ್ ಟನ್ ಗೋಧಿ ದೇಶದ ವಿವಿಧ ಬಂದರುಗಳಲ್ಲಿ ದಾಸ್ತಾನು ಮಾಡಲಾಗಿದೆ.
ದೇಶದಲ್ಲಿ ಮುಂಗಾರು ಆರಂಭವಾಗಿದ್ದು, ಮಳೆಯಿಂದ ಗೋಧಿ ದಾಸ್ತಾನು ಹಾನಿಗೊಳಗಾಗಬಹುದು ಎಂದು ಸರ್ಕಾರ ಮತ್ತು ಉದ್ಯಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಾಂಗ್ಲಾದೇಶ, ಫಿಲಿಫೈನ್ಸ್, ತಾಂಜಾನಿಯಾ ಮತ್ತು ಮಲೇಷ್ಯಾಕ್ಕೆ ಗೋಧಿ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಕ್ಕಿ ರಫ್ತಿನ ಮೇಲೆ ನಿರ್ಬಂಧ ವಿಧಿಸಲ್ಲ; ಕೇಂದ್ರ ಸರ್ಕಾರ
ವಿಶ್ವದ ಎರಡನೇ ಅತಿದೊಡ್ಡ ಗೋಧಿ ಉತ್ಪಾದಕ ದೇಶ ಭಾರತ ಮೇ 14 ರಂದು ರಫ್ತಿನ ಮೇಲೆ ನಿಷೇಧ ವಿಧಿಸಿತು, ಬಿಸಿ ಗಾಳಿ, ಹೆಚ್ಚಾದ ತಾಪಮಾನದಿಂದ ಈ ಬಾರಿ ಗೋಧಿ ಉತ್ಪಾದನೆ ಕಡಿಮೆಯಾಗಿತ್ತು, ಗೋಧಿ ಬೆಲೆ ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದ್ದರಿಂದ, ಭವಿಷ್ಯದಲ್ಲಿ ಗೋಧಿ ಬೆಲೆ ನಿಯಂತ್ರಣಕ್ಕಾಗಿ ರಫ್ತು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಮಾಡಿತ್ತು.
ಗೋಧಿ ಸರಬರಾಜಿನಲ್ಲಿ ಕೊರತೆ, ಪರಿಹಾರಗಳು
1.7 ಮಿಲಿಯನ್ ಟನ್ ಗೋಧಿ ದಾಸ್ತಾನು
ಸಾಲ ಪತ್ರಗಳನ್ನು ಹೊಂದಿರುವ ಸಾಗಾಣೆಗಳಿಗೆ ವಿನಾಯಿತಿ ನೀಡಲಾಗಿದೆ. ಆಹಾರ ಭದ್ರತೆಗಾಗಿ ಅಗತ್ಯಗಳನ್ನು ಪೂರೈಸಲು ಸರಬರಾಜು ಮಾಡಲು ವಿನಂತಿ ಮಾಡಿರುವ ದೇಶಗಳಿಗೆ ಗೋಧಿ ರಫ್ತು ಮಾಡಲು ಅನುಮತಿ ನೀಡಲಾಗಿದೆ.
ಕೆಲವು ದೇಶಗಳಿಗೆ ಗೋಧಿ ರಪ್ತು ಮಾಡಲು ಅನುಮತಿ ನೀಡಿದ ನಂತರವೂ ದೇಶದ ವಿವಿಧ ಬಂದರುಗಳಲ್ಲಿ ಕನಿಷ್ಠ 1.7 ಮಿಲಿಯನ್ ಟನ್ ಗೋಧಿ ದಾಸ್ತಾನು ಉಳಿದಿದೆ ಎಂದು ಜಾಗತಿಕ ವ್ಯಾಪಾರ ಸಂಸ್ಥೆಗಳೊಂದಿಗಿನ ವಿತರಕರು ತಿಳಿಸಿದ್ದಾರೆ.
ಆಹಾರ ಪೂರೈಕೆ ಮೇಲೆ ಯುದ್ಧದ ಪರಿಣಾಮ
ಗೋಧಿ ರಫ್ತು ನಿಷೇಧ ಮಾಡುವುದಕ್ಕೂ ಮೊದಲು, ದೊಡ್ಡ ಮಟ್ಟದಲ್ಲಿ ಗೋಧಿಯನ್ನು ಬಂದರುಗಳಿಗೆ ಸಾಗಿಸಿ ದಾಸ್ತಾನು ಮಾಡಲಾಗಿತ್ತು. ಈ ಬಾರಿ ಉತ್ತಮ ಬೆಳೆ ಬರುವ ನಿರೀಕ್ಷೆಯನ್ನು ಹೊಂದಲಾಗಿತ್ತು, ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ವಿಶ್ವದಲ್ಲಿ ಉಂಟಾದ ಆಹಾರ ಕೊರತೆ ನೀಗಿಸಲು, ಗೋಧಿ ರಫ್ತುದಾರರಿಗೆ ಕೇಂದ್ರ ಸರ್ಕಾರ ಬೆಂಬಲ ನೀಡಿತ್ತು.
ಕಳೆದ ವರ್ಷ ಭಾರತ 7.2 ಮಿಲಿಯನ್ ಟನ್ ಗೋಧಿ ರಫ್ತು ಮಾಡಿದ್ದು, ಈ ವರ್ಷ 8 ರಿಂದ 10 ಟನ್ ಗೋಧಿ ರಫ್ತು ಮಾಡಲು ಸರ್ಕಾರ ಅನುಮತಿ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
"ಕಾಂಡ್ಲಾ ಮತ್ತು ಮುಂದ್ರಾ ಬಂದರುಗಳಲ್ಲಿ ಗರಿಷ್ಠ ಗೋಧಿ ದಾಸ್ತಾನು ಇದೆ, ಅಂದಾಜು 1.3 ಮಿಲಿಯನ್ ಟನ್ ಇಲ್ಲಿ ದಾಸ್ತಾನು ಇದೆ" ಎಂದು ಮುಂಬೈ ಮೂಲದ ಜಾಗತಿಕ ವ್ಯಾಪಾರ ಸಂಸ್ಥೆಯ ಡೀಲರ್ ಒಬ್ಬರು ಹೇಳಿದ್ದಾರೆ.
ರಫ್ತು ಮಾಡದಿದ್ದರೆ ಗೋಧಿ ಹಾಳಾಗುವ ಆತಂಕ
ಜೂನ್ ತಿಂಗಳಿನಿಂದ ಸೆಪ್ಟಂಬರ್ವರೆಗೆ ಮಾನ್ಸೂನ್ ಅವಧಿಯಲ್ಲಿ ಭಾರತದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
"ಮುಂಗಾರು ಮಳೆ ಆರಂಭವಾಗಿದ್ದು, ಗೋಧಿ ದಾಸ್ತಾನು ಹಾಳಾಗುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ತ್ವರಿತವಾಗಿ ದಾಸ್ತಾನು ಇರುವ ಗೋಧಿ ರಫ್ತು ಮಾಡಲು ಅನುಮತಿ ನೀಡಬೇಕು" ಎಂದು ದೆಹಲಿ ಮೂಲದ ಡೀಲರ್ ಹೇಳಿದ್ದಾರೆ.
"ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಗೋಧಿ ರಫ್ತುಗಳನ್ನು ನಿಷೇಧಿಸಿದೆ. ಆದರೆ ಮಳೆಯಿಂದ ದಾಸ್ತಾನು ಹಾನಿಗೊಳಗಾದರೆ, ಅದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ" ಎಂದು ಡೀಲರ್ ಹೇಳಿದರು.
ಗೋಧಿ ವಾಪಸ್ ತರುವುದರಿಂದ ನಷ್ಟವೇ ಜಾಸ್ತಿ
"ಇನ್ನು ಆಂತರಿಕ ಬಳಕೆಗಾಗಿ ಬಂದರುಗಳಲ್ಲಿ ದಾಸ್ತಾನಿರುವ ಗೋಧಿಯನ್ನು ವಾಪಸ್ ದೇಶದ ನಗರಗಳಿಗೆ ಸಾಗಿಸುವುದು ಅಸಾಧ್ಯ. ಲೋಡಿಂಗ್, ಸಾಗಾಟ ಶುಲ್ಕ ಹೆಚ್ಚಾಗುವುದರಿಂದ ವ್ಯಾಪಾರಿಗಳು ನಷ್ಟ ಅನುಭವಿಸುತ್ತಾರೆ" ಎಂದು ಮುಂಬೈ ಮೂಲದ ವ್ಯಾಪಾರಿಯೊಬ್ಬರು ಹೇಳಿದ್ದಾರೆ.
ವ್ಯಾಪಾರಸ್ಥರಿಗೆ ನಷ್ಟವಾಗುವುದನ್ನು ತಪ್ಪಿಸಲು, ಮಳೆಗಾಲದಲ್ಲಿ ಗೋಧಿ ದಾಸ್ತಾನು ಹಾಳಾಗುವ ಮುನ್ನವೇ, ಬಂದರುಗಳಲ್ಲಿ ಇರುವ ಗೋಧಿಯ ರಫ್ತಿಗೆ ಸರ್ಕಾರವು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಆಹಾರದ ಕೊರತೆ ಎದುರಿಸುತ್ತಿರುವ ಹಲವಾರು ದೇಶಗಳು 1.5 ಮಿಲಿಯನ್ ಟನ್ಗಳಿಗಿಂತ ಹೆಚ್ಚು ಗೋಧಿಯನ್ನು ಪೂರೈಸುವಂತೆ ಭಾರತಕ್ಕೆ ಮನವಿ ಮಾಡಿವೆ.