ಕಳಂಕಿತ ಸದಸ್ಯರ ಚುನಾವಣೆ ಸ್ಪರ್ಧೆ ನಿಷೇಧಕ್ಕೆ ಕೇಂದ್ರ ಆಕ್ಷೇಪ
ನವದೆಹಲಿ, ಡಿ. 4: ಗಂಭೀರ ಸ್ವರೂಪದ ಅಪರಾಧ ಪ್ರಕರಣ ಎದುರಿಸುತ್ತಿರುವ ರಾಜಕಾರಣಿಗಳ ಮೇಲೆ ಜೀವಾವಧಿ ನಿಷೇಧ ಹೇರುವಂತೆ ಕೋರಿರುವ ಅರ್ಜಿಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಕಳಂಕಿತ ಸದಸ್ಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಶಾಶ್ವತವಾಗಿ ನಿಷೇಧ ಹೇರುವಂತೆ ಕೋರಿ ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದೆ.
ಕಳಂಕಿತ ಸದಸ್ಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್ ಈಗಾಗಲೇ ನ್ಯಾಯಾಲಯದ ಆದೇಶ ನೀಡಿದೆ. ಆದರೆ, ಶಾಶ್ವತವಾಗಿ ಜನ ಪ್ರತಿನಿಧಿಗಳಿಗೆ ನಿಷೇಧ ಹೇರುವ ತೀರ್ಪು ಬಂದಿದೆ. ವಕೀಲ ಅಶ್ವಿನಿ ಉಪಾಧ್ಯಾಯ್ ಅವರು ತಮ್ಮ ಪಿಐಎಲ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಸದ್ಯ ಅಪರಾಧ ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದೆನಿಸಿರುವ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಶಾಶ್ವತ ಶಿಕ್ಷೆ ಲಭಿಸುತ್ತಿದೆ. ಆದರೆ, ರಾಜಕಾರಣಿಗಳಿಗೆ ಇದು ಅನ್ವಯಿಸುತ್ತಿಲ್ಲವೇಕೆ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ಅರ್ಜಿಯನ್ನು ಕೇಂದ್ರ ಸರ್ಕಾರ ವಿರೋಧಿಸಿದೆ.
ಸುಪ್ರೀಂಕೋರ್ಟ್ ಜಸ್ಟೀಸ್ ಎನ್ .ವಿ ರಮಣ ಅವರಿರುವ ನ್ಯಾಯಪೀಠವು ಈ ಅರ್ಜಿ ಕುರಿತಂತೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿತ್ತು.
Recommended Video
ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರವು, ಕಳಂಕಿತ ಜನಪ್ರತಿನಿಧಿಗಳು ತಮ್ಮ ಸದಸ್ಯತ್ವವನ್ನು ಉಳಿಸಿಕೊಳ್ಳುವ ಅವಕಾಶ ಒದಗಿಸಿತ್ತು. ಇದರ ಪ್ರಕಾರ, ಜನಪ್ರತಿನಿಧಿ ಅಪರಾಧಿಯೆಂದು ತೀರ್ಪು ಪ್ರಕಟಗೊಂಡರೂ ಮೇಲ್ಮನವಿ ಸಲ್ಲಿಸಿ ಮೇಲ್ದರ್ಜೆ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗುವವರೆಗೂ ಸದಸ್ಯತ್ವ ಊರ್ಜಿತಗೊಳ್ಳುವ ಸಾಧ್ಯತೆಗಳನ್ನು ನೀಡಲಾಗಿದೆ. ದೇಶದ ಹಿತದೃಷ್ಟಿಯಿಂದ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಬೇಕಾಗುತ್ತದೆ. ಕಾಯ್ದೆ ಪ್ರಕಾರ ಅನರ್ಹತೆ, ಕೋರ್ಟ್ ತೀರ್ಪಿನಂತೆ ಅಮಾನತು ಮುಂತಾದ ಕ್ರಮಗಳನ್ನು ಅವರ ಮೇಲೆ ಹೇರಲಾಗುತ್ತಿದೆ, ಹೀಗಾಗಿ, ಒಂದು ಪ್ರಕರಣವನ್ನು ಮುಂದಿಟ್ಟುಕೊಂಡು ಸಂಪೂರ್ಣವಾಗಿ ಶಾಶ್ವತವಾಗಿ ಚುನಾವಣೆ ಸ್ಪರ್ಧಿಸದಂತೆ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಕೋರ್ಟಿಗೆ ಕೇಂದ್ರ ಸರ್ಕಾರ ತಿಳಿಸಿದೆ.