ಫಾಸ್ಟ್ಯಾಗ್ ಬಳಿಕ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ
ನವದೆಹಲಿ, ಜನವರಿ 8: ದೇಶದಲ್ಲಿನ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸ್ಪೀಡ್ ಬ್ರೇಕರ್ಗಳನ್ನು ತೆಗೆದುಹಾಕುವುದಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ದೇಶದಲ್ಲಿ ಪ್ರತಿ ವರ್ಷ ಸ್ಪೀಡ್ ಬ್ರೇಕರ್ಗಳಿಂದಾಗಿಯೇ ಅಂದಾಜು 10,000 ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ನಿರ್ಧಾರ ಮುಖ್ಯವಾಗಿದೆ. ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ವ್ಯವಸ್ಥೆ ಅಳವಡಿಸುವ ವ್ಯವಸ್ಥೆ ನಂತರ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದೇಶದಲ್ಲಿನ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಿಂದ ಪ್ರತಿ ಸ್ಪೀಡ್ ಬ್ರೇಕರ್ಗಳನ್ನು ತೆಗೆದುಹಾಕುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಡಿಯಲ್ಲಿನ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಘೋಷಿಸಿದೆ.
ಫಾಸ್ಟ್ಯಾಗ್ ಸಮಸ್ಯೆ; ವಾಹನ ಸವಾರರಿಗೆ ಸಿಹಿ ಸುದ್ದಿ
ಜನವರಿ 15ರಿಂದ ಎಲ್ಲ ಟೋಲ್ಗಳಲ್ಲಿ ಫಾಸ್ಟ್ಯಾಗ್ ಬಳಕೆ ಕಡ್ಡಾಯವಾಗಲಿದ್ದು, ಸ್ಮಾರ್ಟ್ ಟ್ಯಾಗ್ಗಳ ಮಾರಾಟಕ್ಕೆ ಉತ್ತೇಜನ ನೀಡುವಂತೆ ಅಧಿಕಾರಿಗಳಿಗೆ ಪ್ರಾಧಿಕಾರ ಸೂಚಿಸಿದೆ. ಇನ್ನು ಎರಡು ವಾರಗಳಲ್ಲಿ ಎಲ್ಲ ತಾಂತ್ರಿಕ ಸಮಸ್ಯೆಗಳನ್ನೂ ನಿವಾರಿಸುವಂತೆ ನಿರ್ದೇಶಿಸಿದೆ.
ಇನ್ನು ಇರುವುದಿಲ್ಲ ಸ್ಪೀಡ್ ಬ್ರೇಕರ್ ಕಾಟ
'ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ಗಳ ಪರಿಣಾಮಕಾರಿ ಅಳವಡಿಕೆ ಬಳಿಕ ಮತ್ತು ಎಲ್ಲ ನಗದು ಸುಂಕದ ಲೇನ್ಗಳನ್ನು ಫಾಸ್ಟ್ಯಾಗ್ಆಗಿ ಪರಿವರ್ತಿಸಿದ ನಂತರ ಸ್ಪೀಡ್ ಬ್ರೇಕರ್ಗಳನ್ನು/ಟೋಲ್ ಪ್ಲಾಜಾಗಳಲ್ಲಿ ನಿರ್ಮಿಸಲಾಗಿರುವ ತಡೆಗಳನ್ನು ತಕ್ಷಣದಿಂದಲೇ ತೆಗೆದುಹಾಕಲಾಗುತ್ತಿದೆ. ವಾಹನಗಳ ಸರಾಗ ಚಲನೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ' ಎಂದು ಎನ್ಎಚ್ಎಐ ತಿಳಿಸಿದೆ.
ಇಂಧನ, ಸಮಯ ಉಳಿತಾಯ
ಸ್ಪೀಡ್ ಬ್ರೇಕರ್ಗಳು ವಾಹನಗಳ ಚಲನೆಗೆ ಅಡ್ಡಿಯುಂಟುಮಾಡುತ್ತವೆ ಮತ್ತು ಕಿರಿಕಿರಿ ಮೂಡಿಸುತ್ತದೆ. ಜತೆಯಲ್ಲಿ ವಾಹನಗಳಿಗೆ ಹಾನಿಯಾಗುತ್ತದೆ ಹಾಗೂ ಆಕ್ಸಲೇಟರ್ ಮತ್ತು ಡಿಸೆಲೇಟರ್ನಿಂದ ಅಧಿಕ ಇಂಧನ ವ್ಯಯವಾಗುತ್ತದೆ. ಈ ಹೊಸ ನಿರ್ಧಾರವು ಸಮಯ, ಹಣ ಉಳಿತಾಯ ಮಾಡುತ್ತದೆ. ವಾಹನಗಳ ಸರಾಗ ಚಲನೆಗೆ ಸಾಧ್ಯವಾಗುತ್ತದೆ. ಆಂಬುಲೆನ್ಸ್, ಹಿರಿಯ ನಾಗರಿಕರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ತೆರಳಲು ಸುಲಭವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಹೆದ್ದಾರಿ ಟೋಲ್ಗಳ ಬೃಹತ್ ಭ್ರಷ್ಟಾಚಾರ ತೆರೆದಿಟ್ಟ ವಕೀಲರು
ವರ್ಷಕ್ಕೆ ಸರಾಸರಿ 10,000 ಸಾವು
ರಸ್ತೆ ಮತ್ತು ಹೆದ್ದಾರಿ ರಾಜ್ಯ ಖಾತೆ ಸಚಿವ ಪೊನ್ ರಾಧಾಕೃಷ್ಣನ್ ಅವರು 2017ರಲ್ಲಿ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ ಪ್ರತಿವರ್ಷ ಅಂದಾಜು 10,000 ಮಂದಿ ಸ್ಪೀಡ್ ಬ್ರೇಕರ್ನಿಂದ ಸಂಭವಿಸುವ ಅಪಘಾತಗಳಿಂದಾಗಿ ಬಲಿಯಾಗುತ್ತಿದ್ದಾರೆ. ಅಂದರೆ ದಿನಕ್ಕೆ 27 ಮಂದಿ ಸಾಯುತ್ತಿದ್ದಾರೆ. ಒಟ್ಟಾರೆ ದೇಶದಲ್ಲಿ ನಡೆಯುವ ರಸ್ತೆ ಅಪಘಾತಗಳಲ್ಲಿ ಪ್ರತಿ ದಿನ ಸರಾಸರಿ 400 ಮಂದಿ ಅಥವಾ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ಸಾಯುತ್ತಿದ್ದಾರೆ.
ಕರ್ನಾಟಕದಲ್ಲಿ ಅಪಘಾತ ಹೆಚ್ಚು
2015ರಲ್ಲಿ ನಡೆದ ಅಪಘಾತಗಳಲ್ಲಿ 11,084 ಮಂದಿ ಸ್ಪೀಡ್ ಬ್ರೇಕರ್ ಕಾರಣದಿಂದಲೇ ಮೃತಪಟ್ಟಿದ್ದರು. 2014ರಲ್ಲಿ 11,088 ಮಂದಿ ಜೀವಕಳೆದುಕೊಂಡಿದ್ದರು ಎನ್ನುತ್ತದೆ ಸರ್ಕಾರಿ ದಾಖಲೆಗಳು. ಕರ್ನಾಟಕ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಸ್ಪೀಡ್ ಬ್ರೇಕರ್ ಕಾರಣಕ್ಕೆ ಅತಿ ಹೆಚ್ಚು ಸಾವುಗಳು ವರದಿಯಾಗುತ್ತಿವೆ.