ಪೂರ್ಣ ಬಜೆಟ್ ಮಂಡಿಸಿದರೆ ಅಸಾಂವಿಧಾನಿಕ: ಯಶವಂತ್ ಸಿನ್ಹಾ
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಎನ್ ಡಿಎ ಸರಕಾರ ಆರ್ಥಿಕ ಸಮೀಕ್ಷೆ, ಆರ್ಥಿಕ ಮಸೂದೆ ತರುವಂತಿಲ್ಲ ಅಥವಾ ಹೊಸ ಸೇವೆಗಳನ್ನು ಮಧ್ಯಂತರ ಬಜೆಟ್ ನಲ್ಲಿ ಪರಿಚಯಿಸುವಂತಿಲ್ಲ. ಹಾಗೊಂದು ವೇಳೆ ಮಾಡಿದರೆ ಅದು ಅಸಾಂವಿಧಾನಿಕ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಯಶ್ ವಂತ್ ಸಿನ್ಹಾ ಹೇಳಿದ್ದಾರೆ.
ಫೆಬ್ರವರಿ ಒಂದರಂದು ಬಿಜೆಪಿಯು ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಅನ್ನೇ ಮಂಡಿಸುತ್ತದೆ, ಮಧ್ಯಂತರ ಬಜೆಟ್ ಅಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಸಿನ್ಹಾ ಅವರು ಹೇಳಿಕೆ ಬಂದಿದೆ. ಸಾಧಾರಣವಾಗಿ ಚುನಾವಣೆ ವರ್ಷದಲ್ಲಿ ಅಧಿಕಾರದಲ್ಲಿ ಇರುವ ಪಕ್ಷ ಮಧ್ಯಂತರ ಬಜೆಟ್ ಮಂಡಿಸುತ್ತದೆ.
ಮಧ್ಯಂತರ ಬಜೆಟ್ ಮನವೊಲಿಕೆಯದ್ದಲ್ಲ, ಅನಾರೋಗ್ಯದ ಮಧ್ಯೆಯೂ ಜೇಟ್ಲಿ ಹೇಳಿದ್ದೇನು?
ಆದರೆ, ಯುಪಿಎ ಸೇರಿದಂತೆ ಹಲವು ಸರಕಾರಗಳು ಮಧ್ಯಂತರ ಬಜೆಟ್ ನಲ್ಲೂ ನೀತಿಯ ಘೋಷಣೆಗಳನ್ನು ಮಾಡಿವೆ. "ಪೂರ್ಣ ಪ್ರಮಾಣದ ಬಜೆಟ್ ಮಾಡುವಂತಿಲ್ಲ ಎಂಬ ನಿಯಮವೇನೂ ಇಲ್ಲ ಎನ್ನುವಂಥವರಿಗೆ, ನಾವೇಕೆ ಸಂವಿಧಾನದಲ್ಲಿ ಪರಿಚ್ಛೇದ 116 ಹೊಂದಿದ್ದೇವೆ?" ಎಂದು ಪ್ರಶ್ನಿಸಿದ್ದಾರೆ ಈ ಹಿಂದೆ ಎನ್ ಡಿಎ ಸರಕಾರದಲ್ಲಿ ವಿತ್ತ ಸಚಿವರಾಗಿದ್ದ ಯಶವಂತ್ ಸಿನ್ಹಾ.
ಪೂರ್ಣ ಬಜೆಟ್ ಮಂಡಿಸಲು ಮುಂದಾಗಿದೆ ಬಿಜೆಪಿ
ಸದ್ಯಕ್ಕೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಭಾರತೀಯ ಜನತಾ ಪಕ್ಷ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್ ಡಿಎ) ಸಂಪ್ರದಾಯವನ್ನು ಮುರಿದು, ಮಧ್ಯಂತರ ಬಜೆಟ್ ಬದಲು ಪೂರ್ಣ ಪ್ರಮಾಣದಲ್ಲಿ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದೆ. ಒಂದು ವೇಳೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರೆ ಸದನದಲ್ಲಿ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
ಕೇಂದ್ರ ಸರಕಾರದಿಂದ ಹತಾಶ ಪ್ರಯತ್ನ
ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಜನರ ಓಲೈಕೆಗೆ ಹತಾಶೆಯಿಂದ ದೊಡ್ಡ ಕೊಡುಗೆ ಘೋಷಿಸಲು ಸರಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಮುಖಂಡ ಆನಂದ ಶರ್ಮಾ ಆರೋಪಿಸಿದ್ದರೆ. ಚುನಾವಣೆಗೆ ಕೆಲ ತಿಂಗಳ ಮುಂಚೆ ಮಾಮೂಲಿನಂತೆ ಬಜೆಟ್ ಮಂಡಿಸುವುದು ಸಂಸದೀಯ ಪದ್ಧತಿಯಲ್ಲಿ ರೂಢಿಯಲ್ಲಿರುವ ನಿಯಮ ಮುರಿದಂತೆ. ಸರಕಾರದ ಅವಧಿ ಐದು ವರ್ಷ. ಐದು ಪೂರ್ಣ ಬಜೆಟ್ ಮಂಡಿಸಲು ಮಾತ್ರ ಸಾಧ್ಯ. ಈಗಿನ ಬಜೆಟ್ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡಿದ್ದು ಎಂದು ಆರೋಪಿಸಿದ್ದಾರೆ ಶರ್ಮಾ.
ಬಜೆಟ್ ಮಂಡಿಸುವುದು ಹನ್ನೆರಡು ತಿಂಗಳ ಅವಧಿಗೆ
ಬಜೆಟ್ ಅನ್ನು ಮಂಡಿಸುವುದು ಹನ್ನೆರಡು ತಿಂಗಳ ಅವಧಿಗೆ. ಅಧಿಕಾರದಲ್ಲಿ ಇರುವ ಪಕ್ಷದ ಅವಧಿಯೂ ಹನ್ನೆರಡು ತಿಂಗಳಾಗಿರಬೇಕು. ಮೂರು ತಿಂಗಳು ಅಧಿಕಾರಾವಧಿ ಹಾಗೂ ಬಜೆಟ್ ನ ಅವಧಿ ಒಂದು ವರ್ಷ. ಇದು ತೀರಾ ವಿಚಿತ್ರ ಹಾಗೂ ಒಪ್ಪಲು ಸಾಧ್ಯವಿಲ್ಲದಂಥದ್ದು ಎಂದು ಅವರು ಹೇಳಿದ್ದಾರೆ.
ಬಜೆಟ್ ಮಂಡಿಸಲಿದ್ದಾರೆ ಪಿಯೂಷ್ ಗೋಯಲ್
ಅನಾರೋಗ್ಯದ ಕಾರಣಕ್ಕೆ ಅರುಣ್ ಜೇಟ್ಲಿ ಅವರ ಬದಲಿಗೆ ಖಾತೆಯ ಉಸ್ತುವಾರಿ ವಹಿಸಿರುವ ಪಿಯೂಷ್ ಗೋಯಲ್ ಮಂಡಿಸಲಿದ್ದಾರೆ. ಇದು ಎರಡನೇ ಬಾರಿಗೆ ಮಧ್ಯಂತರವಾಗಿ ಹಣಕಾಸು ಸಚಿವರಾಗಿ ಪಿಯೂಷ್ ಗೋಯಲ್ ಜವಾಬ್ದಾರಿ ವಹಿಸಿದ್ದಾರೆ. ಮೊದಲನೇ ಬಾರಿಗೆ ಕಳೆದ ವರ್ಷ ಮೇ ತಿಂಗಳಲ್ಲಿ, ಅರುಣ್ ಜೇಟ್ಲಿ ಅವರು ಕಿಡ್ನಿ ಕಸಿ ಮಾಡಿಸಿಕೊಂಡಾಗ ಜವಾಬ್ದಾರಿ ನಿರ್ವಹಿಸಿದ್ದರು. ರೈಲ್ವೆ ಖಾತೆ ಕೂಡ ಪಿಯೂಷ್ ಗೋಯಲ್ ವಹಿಸಿಕೊಂಡಿದ್ದಾರೆ.