ಸಕ್ಕರೆ ರಫ್ತಿನ ಮೇಲೆ ಮಿತಿ ಹೇರಿದ ಕೇಂದ್ರ ಸರ್ಕಾರ
ನವದೆಹಲಿ, ಮೇ 25: ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಮತ್ತು ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ತಡೆಯಲು ಇತ್ತೀಚೆಗಷ್ಟೆ ಗೋಧಿ ರಫ್ತು ನಿಷೇಧಿಸಿದ್ದ ಹೇರಿದ್ದ ಭಾರತ ಸರ್ಕಾರ ಈಗ ಸಕ್ಕರೆ ರಫ್ತಿನ ಮೇಲೂ ಮಿತಿ ವಿಧಿಸಿದೆ.
ಕಳೆದ ಆರು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತವು ಸಕ್ಕರೆ ರಫ್ತನ್ನು ಮಿತಿಗೊಳಿಸಿದೆ. ಜೂನ್ 1ರಿಂದ 100 ಲಕ್ಷ ಟನ್ಗಳಿಗೆ ರಫ್ತು ಪ್ರಮಾಣ ಮಿತಿಗೊಳಿಸಿ ಆದೇಶ ಹೊರಡಿಸಿದೆ. ವಿಶ್ವ ಮಾರುಕಟ್ಟೆಯಲ್ಲಿ ದೇಶದ ಸಕ್ಕರೆ ಕಾರ್ಖಾನೆಗಳು ದಾಖಲೆ ಪ್ರಮಾಣದಲ್ಲಿ ಸಕ್ಕರೆ ಮಾರಾಟ ಮಾಡಿದ ನಂತರ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಭವಿಷ್ಯದಲ್ಲಿ ದೇಶದಲ್ಲಿ ಸಕ್ಕರೆ ಅಭಾವವಾಗದಂತೆ, ಬೆಲೆ ಹೆಚ್ಚಾಗುವುದನ್ನು ತಡೆಯುವ ಸಲುವಾಗಿ ಮಿತಿ ಹೇರಿದೆ.
ಷರತ್ತುಗಳು ಅನ್ವಯ: ಭಾರತದಿಂದ ಗೋಧಿ ರಫ್ತಿಗೆ ಕೇಂದ್ರದ ನಿರ್ಣಯ
"ಸಕ್ಕರೆ ಉತ್ಪಾದನೆ, ಬಳಕೆ, ರಫ್ತು ಮತ್ತು ದೇಶದಾದ್ಯಂತ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿನ ಬೆಲೆ ಏರಿಳಿತಗಳು ಸೇರಿದಂತೆ ಸಕ್ಕರೆ ವಲಯದಲ್ಲಿನ ಪರಿಸ್ಥಿತಿಯನ್ನು ಸರ್ಕಾರ ನಿರಂತರವಾಗಿ ಗಮನಿಸುತ್ತಿದೆ" ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.
ಸೂರ್ಯಕಾಂತಿ ಎಣ್ಣೆ, ಕಚ್ಚಾ ಸೋಯಾಬಿನ್ ಆಮದು ಮೇಲಿನ ಸುಂಕಕ್ಕೆ ವಿನಾಯಿತಿ
ಬೆಲೆ ನಿಯಂತ್ರಣಕ್ಕೆ ಕ್ರಮ
ದೇಶದಲ್ಲಿ ಕಳೆದ 12 ತಿಂಗಳಿನಿಂದ ಸಕ್ಕರೆ ಬೆಲೆ ನಿಯಂತ್ರಣದಲ್ಲಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆ ಸ್ಥಿರತೆ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದೆ. ಭಾರತದಲ್ಲಿ ಪ್ರಸ್ತುತ ಸಕ್ಕರೆಗೆ ಸಗಟು ದರ 3,150 ರೂ.ಗಳಿಂದ 3,500 ರೂ.ಗಳ ನಡುವೆ ಇದೆ. ದೇಶದ ವಿವಿಧ ಭಾಗಗಳಲ್ಲಿ ಚಿಲ್ಲರೆ ಬೆಲೆಗಳು ರೂ.36 ರಿಂದ 44 ರೂ. ಗಳವರೆಗೆ ಮಾರಾಟ ಮಾಡಲಾಗುತ್ತಿದೆ. ಸಕ್ಕರೆ ರಫ್ತಿನಲ್ಲಿ ಆದ ಏರಿಕೆ ಮತ್ತು ದಾಸ್ತಾನು ಲಭ್ಯವಿರುವಂತೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹೇಳಿದೆ.
ಸಕ್ಕರೆ ರಫ್ತು ಮಾಡುವ ಎರಡನೇ ದೊಡ್ಡ ರಾಷ್ಟ್ರ
ಜೂನ್ 1 ರಿಂದ ಅಕ್ಟೋಬರ್ 31 ರ ನಡುವೆ ವಿದೇಶಗಳಿಗೆ ಸಕ್ಕರೆ ರಫ್ತು ಮಾಡಲು ಅನುಮತಿ ಪಡೆಯಬೇಕು ಎಂದು ರಫ್ತುದಾರರಿಗೆ ಸರ್ಕಾರ ಆದೇಶದಲ್ಲಿ ಸೂಚನೆ ನೀಡಿದೆ. ಬ್ರೆಜಿಲ್ ವಿಶ್ವದಲ್ಲೇ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶವಾಗಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ. ಮತ್ತು ಬ್ರೆಜಿಲ್ ನಂತರ ಸಕ್ಕರೆಯನ್ನು ರಫ್ತು ಮಾಡುವ ಎರಡನೇ ಅತಿ ದೊಡ್ಡ ದೇಶವಾಗಿದೆ.
ಭಾರತ ಸಕ್ಕರೆ ರಫ್ತಿನ ಮೇಲೆ ನಿಯಂತ್ರಣ ಹೇರುತ್ತಿದ್ದಂತೆ ಲಂಡನ್ನಲ್ಲಿ ಬಿಳಿ ಸಕ್ಕರೆ ಬೆಲೆ ಶೇ.1ರಷ್ಟು ಹೆಚ್ಚಾಗಿದೆ. ಭಾರತದ ಈ ಕ್ರಮದಿಂದ ವಿಶ್ವಾದ್ಯಂತ ಸಕ್ಕರೆ ಬೆಲೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಪೂರೈಕೆಗೆ ಕೊರತೆಯಾಗಂತೆ ಕ್ರಮ
"ದೇಶದಲ್ಲಿ ಆಹಾರ ಹಣದುಬ್ಬರ ಕೇಂದ್ರ ಸರ್ಕಾರವನ್ನು ಚಿಂತೆಗೆ ದೂಡಿದೆ ಅದಕ್ಕಾಗಿಯೇ ದೇಶದಲ್ಲಿ ಹಬ್ಬದ ಸಂದರ್ಭಗಳಲ್ಲಿ ಪೂರೈಕೆ ಮಾಡಲು ಸಾಕಷ್ಟು ಸಕ್ಕರೆ ದಾಸ್ತಾನಿದೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಪೂರೈಕೆಗೆ ಕೊರತೆಯಾಗದಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ" ಎಂದು ಮುಂಬೈ ಮೂಲದ ಜಾಗತಿಕ ವ್ಯಾಪಾರ ಸಂಸ್ಥೆಯ ಡೀಲರ್ ಒಬ್ಬರು ಹೇಳಿದ್ದಾರೆ.
ಆರಂಭದಲ್ಲಿ ಸಕ್ಕರೆ ರಫ್ತು ಪ್ರಮಾಣವನ್ನು 80 ಲಕ್ಷ ಟನ್ಗಳಿಗೆ ಮಿತಿಗೊಳಿಸಲು ಯೋಜಿಸಿತ್ತು, ಆದರೆ ಉತ್ಪಾದನೆಯ ಅಂದಾಜುಗಳನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಿದ್ದರಿಂದ ವಿಶ್ವ ಮಾರುಕಟ್ಟೆಯಲ್ಲಿ ಇನ್ನು 20 ಲಕ್ಷ ಟನ್ ಸಕ್ಕರೆ ಮಾರಾಟ ಮಾಡಲು ಕಾರ್ಖಾನೆಗಳಿಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ.
2021-2022 ಮಾರುಕಟ್ಟೆಯಲ್ಲಿ ಸರ್ಕಾರ ಸಬ್ಸಿಡಿ ರಹಿತ 91 ಲಕ್ಷ ಟನ್ ಸಕ್ಕರೆಯನ್ನು ರಫ್ತು ಮಾಡಲು ಭಾರತದ ಸಕ್ಕರೆ ಕಾರ್ಖಾನೆಗಳು ಇದುವರೆಗೆ ಒಪ್ಪಂದಗಳಿಗೆ ಸಹಿ ಹಾಕಿವೆ. ಒಪ್ಪಂದ ಮಾಡಿಕೊಂಡಿರುವ 90 ಲಕ್ಷ ಟನ್ಗಳಲ್ಲಿ, ಈಗಾಗಲೇ 82 ಲಕ್ಷ ಟನ್ ಸಕ್ಕರೆಯನ್ನು ಈಗಾಗಲೇ ಸಕ್ಕರೆ ಕಾರ್ಖಾನೆಗಳು ರಫ್ತು ಮಾಡಿವೆ.
ರಫ್ತಿನ ಮೇಲೆ ಹಲವು ದೇಶಗಳ ನಿರ್ಬಂಧ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭವಾಗುತ್ತಿದ್ದಂತೆ ವಿಶ್ವದ ಹಲವು ದೇಶಗಳಲ್ಲಿ ಉತ್ಪನ್ನಗಳ ಕೊರತೆ ಉಂಟಾಯಿತು. ಬೆಲೆ ಏರಿಕೆ ನಿಯಂತ್ರಿಸಲು, ದೇಶದಲ್ಲಿ ಆಹಾರ ಕೊರತೆಯನ್ನು ತಪ್ಪಿಸಲು ಹಲವು ದೇಶಗಳು ರಫ್ತಿನ ಮೇಲೆ ನಿರ್ಬಂಧ ಹೇರಿದ್ದವು.
ಭಾರತ ಕೂಡ ಈ ಮೊದಲು ಗೋಧಿ ರಫ್ತು ಮಾಡದಂತೆ ನಿಷೇಧ ಹೇರಿತ್ತು. ಕೋಳಿಗಳನ್ನು ರಫ್ತು ಮಾಡದಂತೆ ಮಲೇಷ್ಯಾ ನಿರ್ಬಂಧ ವಿಧಿಸಿದ್ದು, ತಾಳೆ ಎಣ್ಣೆ ರಫ್ತನ್ನು ನಿರ್ಬಂಧಿಸಿ ಇಂಡೋನೇಷ್ಯಾ ಆದೇಶ ಮಾಡಿತ್ತು, ಅಲ್ಲದೆ ಇತರೆ ರಾಷ್ಟ್ರಗಳು ಆಹಾರ ಹಣದುಬ್ಬರವಾಗದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ರಫ್ತಿನ ಮೇಲೆ ಮಿತಿ ಹೇರುತ್ತಿವೆ.