ಬಜೆಟ್ 2021ರಲ್ಲಿ ಬಡವರಿಗೆ ವಂಚನೆ: ನಿರ್ಮಲಾ ಸೀತಾರಾಮನ್ ವಿರುದ್ಧ ಚಿದಂಬರಂ ವಾಗ್ದಾಳಿ
ನವದೆಹಲಿ, ಫೆಬ್ರವರಿ 1: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಡವರು ಮತ್ತು ವಲಸಿಗರನ್ನು ವಂಚಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟೀಕಿಸಿದ್ದಾರೆ.
ಬಜೆಟ್ ಮಂಡನೆಯಾದ ಬಳಿಕ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿ. ಚಿದಂಬರಂ, ಹಿಂದೆಂದಿಗಿಂತಲೂ ಈ ಬಾರಿಯ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಚುನಾವಣೆ ನಡೆಯಲಿರುವ ರಾಜ್ಯಗಳ ಮೇಲೆ ಮಾತ್ರ ಅವರು ಗಮನ ಹರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಜೆಟ್ 2021: ಸೆಸ್ ಹೆಚ್ಚಾದರೂ ಪೆಟ್ರೋಲ್, ಡೀಸೆಲ್, ಮದ್ಯದ ದರದಲ್ಲಿ ಬದಲಾವಣೆ ಇಲ್ಲ
ತಮ್ಮ ಭಾಷಣಗಳನ್ನು ಕೇಳುತ್ತಿದ್ದವರನ್ನು ನಿರ್ಮಲಾ ವಂಚಿಸಿದ್ದಾರೆ. ಮುಖ್ಯವಾಗಿ ಸಂಸದರಿಗೆ ನಿರ್ಮಲಾ ಅವರು ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಭಾರಿ ಸಂಖ್ಯೆಯ ಉತ್ಪನ್ನಗಳ ಮೇಲೆ ಸೆಸ್ ವಿಧಿಸುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ. ಪೆಟ್ರೋಲ್ ಮೇಲೆ ಲೀಟರ್ಗೆ 2.50 ರೂ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್ಗೆ 4 ರೂ. ವಿಧಿಸಲಾಗುತ್ತಿದೆ. ಇದು ರೈತರು ಸೇರಿದಂತೆ ಸಾಮಾನ್ಯ ನಾಗರಿಕರಿಗೆ ದೊಡ್ಡ ಹೊಡೆತ ನೀಡಲಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಬಜೆಟ್ 2021: ಯಾವುದರ ಬೆಲೆ ಏರಿಕೆ? ಯಾವುದು ಇಳಿಕೆ?
ಈ ಬಜೆಟ್ಗೆ ಮನಸು ಇರಬಹುದಷ್ಟೇ ಆದರೆ ಅದರ ಹಿಂದೆ ಖಂಡಿತವಾಗಿಯೂ ಹೃದಯವಿಲ್ಲ ಎಂದು ಪಿ. ಚಿದಂಬರಂ ಟೀಕಿಸಿದ್ದಾರೆ. ಮುಂದೆ ಓದಿ.
ಸಚಿವರಿಗೆ ಪರಿಸ್ಥಿತಿ ಅರಿವಿಲ್ಲ
ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳ ಪರಿಸ್ಥಿತಿಯ ಬಗ್ಗೆ ಹಣಕಾಸು ಸಚಿವರಿಗೆ ಅರಿವಿಲ್ಲ ಎನಿಸುತ್ತಿದೆ. ವಿತ್ತೀಯ ಸನ್ನಿವೇಶವು ಬಹುದೊಡ್ಡ ಗೊಂದಲದಲ್ಲಿದೆ ಎಂಬುದನ್ನು ಸಂಖ್ಯೆಗಳೂ ತೋರಿಸುತ್ತಿವೆ ಎಂದು ಟೀಕಿಸಿದ್ದಾರೆ.
ರೈತರ ಉಲ್ಲೇಖ ಹತ್ತೇ ಸಲ
ಸರ್ಕಾರವು ರಕ್ಷಣಾ ವೆಚ್ಚ ಮತ್ತು ಆರೋಗ್ಯ ಕ್ಷೇತ್ರದ ವೆಚ್ಚವನ್ನು ಸರ್ಕಾರ ಸಂಪೂರ್ಣವಾಗಿ ಜನತೆಯ ಮೇಲೆ ಹೊರಿಸಿದೆ. ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಪ್ರಧಾನಿಯ ಹೆಸರನ್ನು 14 ಸಲ ಪ್ರಸ್ತಾಪಿಸಿದರು. ಆದರೆ ರೈತರನ್ನ ಹತ್ತು ಬಾರಿ ಮಾತ್ರ ಉಲ್ಲೇಖಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಕ್ಷಣೆಯ ಬಗ್ಗೆ ಉಲ್ಲೇಖವಿಲ್ಲ
ಚೀನೀಯರು ಭಾರತದ ನೆಲದಿಂದ ಜಾಗ ತೆರವು ಮಾಡಿದ್ದಾರೇನೋ ಎಂಬಂತೆ ರಕ್ಷಣೆಯ ಬಗ್ಗೆ ನಿರ್ಮಲಾ ಪ್ರಸ್ತಾಪವನ್ನೇ ಮಾಡಲಿಲ್ಲ. 2021-22ನೇ ಸಾಲಿನ ಅವರು ರಕ್ಷಣಾ ವೆಚ್ಚವನ್ನು ಕೂಡ ಉಲ್ಲೇಖಿಸಿಲ್ಲ. ತೆರಿಗೆ ವಿನಾಯಿತಿಯು ತೆರಿಗೆಪಾವತಿಸುವ ದುಡಿಯುವ ವರ್ಗ ಮತ್ತು ತೆರಿಗೆ ಪಾವತಿಸುವ ಮಧ್ಯಮ ವರ್ಗಕ್ಕೆ ಯಾವುದೇ ನೆರವು ನೀಡುವುದಿಲ್ಲ ಎಂದು ಆರೋಪಿಸಿದ್ದಾರೆ.
ಜನಸಾಮಾನ್ಯರ ಮೇಲೆ ಅನುಕಂಪ
ಹಣಕಾಸೇತರ ಮಸೂದೆಗಳಲ್ಲಿ ತಿದ್ದುಪಡಿಗಳನ್ನು ಮಾಡಲು ವಿತ್ತ ಮಸೂದೆಯನ್ನು ಸರ್ಕಾರ ಬಳಸುವುದಕ್ಕೆ ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯು ತನ್ನ ಹಕ್ಕು ಚಲಾಯಿಸುವುದನ್ನು ಇದು ನಿರಾಕರಿಸಲಿದೆ ಎಂದು ಹೇಳಿದ್ದಾರೆ. ಮೂಲಸೌಕರ್ಯದ ಮೇಲೆ ವ್ಯಯಿಸುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಎಂಟು ತ್ರೈಮಾಸಿಕ ಅವಧಿಗಳಲ್ಲಿನ ಆರ್ಥಿಕ ನಿಧಾನಗತಿ ಮತ್ತು ನಾಲ್ಕು ಅವಧಿಯ ಸಾಂಕ್ರಾಮಿಕ ಸಂಕಷ್ಟದ ಸನ್ನಿವೇಶ ನೋಡಿದಾಗ ಬಡವರು, ದುಡಿಯುವ ವರ್ಗ, ವಲಸಿಗರು ಮತ್ತು ಕೃಷಿ ಕಾರ್ಮಿಕರಿಗೆ ಇದೇ ರೀತಿಯ ಅನುಕಂಪ ನೀಡಬಹುದಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.