2021-22ನೇ ಕೇಂದ್ರ ಬಜೆಟ್: ಶಿಕ್ಷಣ ವಲಯದಲ್ಲಿ ನಿರೀಕ್ಷೆಗಳೇನು?
ನವದೆಹಲಿ, ಜನವರಿ.21: ಕೇಂದ್ರ ಸರ್ಕಾರದ 2021-21ನೇ ಸಾಲಿನ ಆಯವ್ಯಯ(ಬಜೆಟ್)ದ ಮೇಲೆ ಇಡೀ ದೇಶದ ಲಕ್ಷ್ಯ ನೆಟ್ಟಿದೆ. ಫೆಬ್ರವರಿ.01ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಇಡೀ ದೇಶಕ್ಕೆ ಪಾಠವಾಯಿತು. ಭಾರತ ಲಾಕ್ ಡೌನ್ ನಿಂದ ವ್ಯಾಪಾರ-ವಹಿವಾಟು, ಶಿಕ್ಷಣ, ಕ್ರೀಡೆ, ಮನರಂಜನೆ ಸೇರಿದಂತೆ ಬಹುತೇಕ ವಲಯಗಳಿಗೆ ಭಾರಿ ಪೆಟ್ಟು ಕೊಟ್ಟಿದೆ. ಭಾರತದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಮುಂಬರುವ ಬಜೆಟ್ ರೂಪಿಸುವ ನಿರೀಕ್ಷೆಗಳು ಹೆಚ್ಚಿವೆ.
ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶ
ದೇಶದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ರೂಪಿಸಿದೆ. ಶಿಕ್ಷಣ ರಂಗದಲ್ಲಿ ಅತಿಹೆಚ್ಚು ತಂತ್ರಜ್ಞಾನ ಬಳಸಿಕೊಳ್ಳುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಕೇಂದ್ರ ಸರ್ಕಾರವು 2021-22ನೇ ಸಾಲಿನಲ್ಲಿ ಶಿಕ್ಷಣದಲ್ಲಿ ತಂತ್ರಜ್ಞಾನ ಮತ್ತು ಸಂಶೋಧನೆಗೆ ಆದ್ಯತೆ ನೀಡಬೇಕಿದೆ. ದೇಶದ ಯುವಕರ ಭವಿಷ್ಯದ ದೃಷ್ಟಿಯಿಂದ ಹೊಸ ಮೈಲಿಗಲ್ಲು ಆಗುವ ನಿರೀಕ್ಷೆಗಳಿವೆ.
ಶೈಕ್ಷಣಿಕ ವಲಯದ ಮೇಲೆ ಆದ್ಯತೆ ಹಾಗೂ ಕಾರಣ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು 2020ರ ಇಡೀ ವರ್ಷವನ್ನು ಮನೆಯ ನಾಲ್ಕು ಗೋಡೆಗಳ ಮಧ್ಯೆ ಕಳೆದಿದ್ದಾರೆ. ಈ ಅವಧಿಯಲ್ಲಿ ಶಿಕ್ಷಣ ರಂಗದಲ್ಲಿನ ಅಗತ್ಯಗಳ ಬಗ್ಗೆ ಅರಿವಿಗೆ ಬಂದಿದೆ. ಶಿಕ್ಷಣದ ಯಂತ್ರಕ್ಕೆ ಇಂಧನ ಹಾಕುವ ಕಾರ್ಯವನ್ನು 2021-22ನೇ ಸಾಲಿನ ಬಜೆಟ್ ಮೂಲಕ ಮಾಡಬೇಕಿದೆ. ಆ ಮೂಲಕ ಜನತೆಯ ವಿಶ್ವಾಸ ಗೆಲ್ಲುವುದಕ್ಕೆ ಕೇಂದ್ರ ಸರ್ಕಾರಕ್ಕೆ ಮಹತ್ವದ ಅವಕಾಶ ಇದಾಗಿದೆ.
ನಿರೀಕ್ಷೆಯಿದೆ. ಈ ಕುರಿತು ಒಂದು ಪಟ್ಟಿ ಇಲ್ಲಿದೆ ನೋಡಿ:
- ಶಿಕ್ಷಣ ವಲಯದ ಪ್ರೋತ್ಸಾಹ ಧನ ಹೆಚ್ಚಿಸುವುದು
- ಶಿಕ್ಷಣ ರಂಗವೊಂದರಲ್ಲೇ 12,000 ಕೋಟಿಗೂ ಅಧಿಕ ನೆರವು ನೀಡುವ ಬಗ್ಗೆ ಅಂದಾಜಿಸಲಾಗಿದೆ
- ಶಿಕ್ಷಣ ರಂಗವನ್ನು ಅಭಿವೃದ್ಧಿಪಡಿಸಿದ್ದಲ್ಲಿ ಎಲ್ಲರಿಂದಲೂ ಮೆಚ್ಚುಗೆ ಗಳಿಸುವ ಅವಕಾಶ
- ದೇಶಾದ್ಯಂತ ಸೂಕ್ತ ಭದ್ರತೆಯೊಂದಿಗೆ ಅಂತರ್ಜಾಲ ವ್ಯವಸ್ಥೆಯ ಪೂರೈಕೆ ಮತ್ತು ವೇಗವನ್ನು ಹೆಚ್ಚಿಸುವುದು
- ಶೈಕ್ಷಣಿಕ ವಲಯದಲ್ಲಿ ಉದ್ಯೋಗ ಸೃಷ್ಟಿಯ ಅವಕಾಶ ಹೆಚ್ಚಿಸುವುದು
- ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನದಲ್ಲಿರುವ ಶಾಲಾ-ಕಾಲೇಜುಗಳ ನಡುವಿನ ಸಹಭಾಗಿತ್ವವನ್ನು ಹೆಚ್ಚಿಸುವುದು
ಕೇಂದ್ರ ಸರ್ಕಾರದಿಂದ ಸಂಶೋಧನಾ ವಲಯದ ಅಭಿವೃದ್ಧಿ
ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿದ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಭಾರತ ಸಮರ ಸಾರಿತು. ಎರಡು ಸಂಶೋಧನಾ ಸಂಸ್ಥೆಗಳು ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದವು. ಜನವರಿ.16ರಂದು ಮೊದಲ ಹಂತದ ಕೊವಿಡ್-19 ಲಸಿಕೆ ಅಭಿಯಾನ ಆರಂಭಿಸಲಾಗಿದ್ದು, ಭಾರತ ಲಸಿಕೆ ವಿಚಾರದಲ್ಲಿ ವಿಶ್ವಗುರು ಎನಿಸಿತು. ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಮೇಲೆ ವಿದೇಶಗಳು ವಿಶ್ವಾಸ ಹೊಂದಿವೆ. ಈ ಹಿನ್ನೆಲೆ 2021-22ನೇ ಸಾಲಿನ ಬಜೆಟ್ ನಲ್ಲಿ ಸಂಶೋಧನಾ ವಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿರೀಕ್ಷೆಗಳು ಹೆಚ್ಚಿವೆ.
- ಐಐಟಿ, ಐಐಎಂ ಮತ್ತು ಏಮ್ಸ್ ರೀತಿ ಸಂಶೋಧನಾ ಸಂಸ್ಥೆಗಳೊಂದಿಗೆ ಕೇಂದ್ರದ ಸಹಭಾಗಿತ್ವ ವಿಸ್ತರಣೆ
- ದೇಶದ ಸಂಶೋಧನಾ ಕೇಂದ್ರಗಳಲ್ಲಿ ಉನ್ನತ ಗುಣಮಟ್ಟದ ಮೂಲಸೌಕರ್ಯಗಳ ವ್ಯವಸ್ಥೆ ಕಲ್ಪಿಸುವುದು
- ಏಕಕಾಲಕ್ಕೆ ಶಿಕ್ಷಣ ಮತ್ತು ಕೈಗಾರಿಕೆ ವಲಯವನ್ನು ಅಭಿವೃದ್ಧಿಪಡಿಸುವ ಉದ್ದೇಶ
- ಸಂಶೋಧನೆಗೆ ಅಗತ್ಯವಾದ ಸೌಕರ್ಯಗಳ ಜೊತೆಗೆ ಸೂಕ್ತ ಪರಿಸರ ಸೃಷ್ಟಿಸುವುದು
- ಪೋಷಕರು ತಮ್ಮ ವಿದ್ಯಾರ್ಥಿಗಳನ್ನು ಸರ್ಕಾರದ ಅಧೀನದಲ್ಲಿರುವ ಸಂಶೋಧನಾ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ವಿಶ್ವಾಸವಿಟ್ಟು ಕಳುಹಿಸುವ ಮಟ್ಟಿಗೆ ಅಗತ್ಯ ಸೌಲಭ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸುವ ಗುರಿ ಹೊಂದುವುದು
ಶಿಕ್ಷಣ ವಲಯದಲ್ಲಿ ಎದುರಾಗುವ ಸವಾಲುಗಳು
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಶಿಕ್ಷಣ ವಲಯವು ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜುಗಳ ತರಗತಿ ಅವಧಿ ಬದಲಾವಣೆ, ಬೋಧನೆ ಮತ್ತು ತರಬೇತಿ ನೀಡುವುದು. ಶಾಲಾ ಮತ್ತು ಕಾಲೇಜು ಹಂತದಲ್ಲಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಹೆಚ್ಚಿಸುವುದು. ಶಿಕ್ಷಣವನ್ನು ಪ್ರೋತ್ಸಾಹಿಸುವಂತಾ ವಾತಾವರಣ ಸೃಷ್ಟಿಸುವುದರ ಮೂಲಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವುದಕ್ಕೆ ಆದ್ಯತೆ ನೀಡುವ ನಿರೀಕ್ಷೆಗಳು ಹೆಚ್ಚಾಗಿವೆ.
ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಆದ್ಯತೆ
ಭಾರತದಲ್ಲಿ ಸಾಕ್ಷರತೆ ಪ್ರಮಾಣ ಶೇ.80ರಷ್ಟಿದ್ದು, ಶಾಲೆ ಬಿಡುವ ಮಕ್ಕಳನ್ನು ಶಾಲೆಗಳತ್ತ ಮರಳಿ ಕರೆ ತರುವುದಕ್ಕೆ ಹಲವು ರೀತಿಯ ಯೋಜನೆಗಳನ್ನು ಸರ್ಕಾರ ಈಗಾಗಲೇ ಜಾರಿಗೊಳಿಸಿದೆ. ಅವುಗಳ ಜೊತೆಗೆ ಹೆಚ್ಚುವರಿ ಕ್ರಮಗಳ ಬಗ್ಗೆ ಪಟ್ಟಿ ಮಾಡುವ ನಿರೀಕ್ಷೆಗಳು ಹೆಚ್ಚಿವೆ. ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಸೇರ್ಪಡೆಯಾಗಲಿರುವ ಯೋಜನೆಗಳು ಮತ್ತು ಸೇರ್ಪಡೆಯಾಗುವ ನಿರೀಕ್ಷೆ ಹೊಂದಿರುವ ಯೋಜನೆಗಳ ಒಂದು ಪಟ್ಟಿ ಇಲ್ಲಿದೆ.
- ಶಾಲೆ ಬಿಡುವ ವಿದ್ಯಾರ್ಥಿಗಳನ್ನು ಸೆಳೆಯಲು ಆರ್ಥಿಕ ನೆರವು
- ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದ ವಿದ್ಯಾರ್ಥಿಗಳನ್ನು ಸೆಳೆಯುವುದಕ್ಕೆ ಅವಕಾಶ
- ಆನ್ ಲೈನ್ ಮೂಲಕ ತರಗತಿಗಳನ್ನು ನಡಸುತ್ತಿರುವ ಹಿನ್ನೆಲೆ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ ನೀಡುವುದು
- ಮೊಬೈಲ್, ಲ್ಯಾಪ್ ಟಾಪ್ ರೀತಿ ಒಂದು ಬಾರಿ ಹೂಡಿಕೆ ಮಾಡಬಹುದಾದ ಯೋಜನೆ ಪಟ್ಟಿ ಮಾಡುವುದು. ಈ ಪಟ್ಟಿಯಲ್ಲಿ ಹೇಳಿರುವ ವಸ್ತುಗಳ ಖರೀದಿಗೆ ಅನುದಾನ ನೀಡುವುದು.
- ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಆತಂಕಗೊಳ್ಳದಂತೆ ಪೋಷಕರಲ್ಲಿ ಜಾಗೃತಿ ಮೂಡಿಸುವುದು
- ವೈದ್ಯಕೀಯ, ತಾಂತ್ರಿಕ, ಇಂಜಿನಿಯರಿಂಗ್ ಪದವಿ ವಿದ್ಯಾಭ್ಯಾಸವು ದುಬಾರಿ ಆಗಿರುತ್ತದೆ
- ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ