3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಬಂಪರ್, ಪಿಂಚಣಿ ಯೋಜನೆ ಘೋಷಣೆ
ನವದೆಹಲಿ, ಜುಲೈ 05: ಮೋದಿ ಸರ್ಕಾರ್ 2.0ನ ಚೊಚ್ಚಲ ಬಜೆಟ್ ಹಾಗೂ ವಿತ್ತ ಸಚಿವೆಯಾಗಿ ಮೊದಲ ಬಾರಿಗೆ ನಿರ್ಮಲ ಸೀತಾರಾಮನ್ ಅವರು ಶುಕ್ರವಾರದಂದು ಬಜೆಟ್ ಮಂಡನೆ ಮಾಡಿದ್ದು, ಸಣ್ಣ ವ್ಯಾಪಾರಿಗಳಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ.
'ಪ್ರಧಾನಮಂತ್ರಿ ಕರ್ಮಯೋಗಿ ಮಾನ್ ಸಮ್ಮಾನ್' ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಚಾಲನೆ ನೀಡಲಾಗುತ್ತದೆ. ಈ ಹೊಸ ಯೋಜನೆಯಿಂದ ಸುಮಾರು 3 ಕೋಟಿ ಮಂದಿ ಚಿಲ್ಲರೆ ವ್ಯಾಪಾರಿಗೆ ಅನುಕೂಲವಾಗಲಿದ್ದು, ಪಿಂಚಣಿ ಪಡೆಯಬಹುದಾಗಿದೆ.
ಪಿಂಚಣಿ ಪಡೆಯಲು ಆಧಾರ್ ಹಾಗೂ ಬ್ಯಾಂಕ್ ಖಾತೆ ಹೊಂದಿದ್ದರೆ ಸಾಕು ಎಂದು ನಿರ್ಮಲಾ ಅವರು ಹೇಳಿದರು. ವಾರ್ಷಿಕವಾಗಿ 1.5 ಕೋಟಿ ರು ಗೂ ಕಡಿಮೆ ಆದಾಯಯುಳ್ಳ ವ್ಯಾಪಾರಿಗಳು ಈ ಯೋಜನೆಯ ಫಲಾನುಭವಿಗಳಾಗಬಹುದು.
ಪಿಂಚಣಿದಾರರಿಗೆ ಶುಭ ಸುದ್ದಿ ನೀಡುವ ಸುಳಿವು ಕೊಟ್ಟ ನಿರ್ಮಲಾ
ಇದಲ್ಲದೆ, ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಸರ್ಕಾರದಿಂದ 60 ವರ್ಷ ವಯಸ್ಸಿನ ಜನರಿಗೆ 1000, 2000, 3000, 4000 ಮತ್ತು 5000 ರೂಪಾಯಿ ಕನಿಷ್ಠ ತಿಂಗಳ ಪಿಂಚಣಿ ನೀಡಲಾಗುತ್ತಿದೆ. ತಿಂಗಳಿಗೆ ಕೇವಲ 42 ರು ಪಾವತಿ ಮಾಡಿ ನೋಂದಣಿಸಿಕೊಂಡರೆ 18 ವರ್ಷದಿಂದ 40 ವರ್ಷ ವಯಸ್ಸಿನವರು ಈ ಯೋಜನೆಯಿಂದ 1000 ರೂಪಾಯಿ ಪಿಂಚಣಿ ಪಡೆಯಬಹುದು. ಹಾಲಿ ಯೋಜನೆಯ ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿ 60 ವರ್ಷ ಹಾಗೂ ಗರಿಷ್ಠ ಪಿಂಚಣಿ ಮೊತ್ತ 1000 ರು ನಿಂದ 5000ರು ತನಕ ಪ್ರತಿ ತಿಂಗಳಿನಂತೆ ನೀಡಲಾಗಿದೆ.