ಬಜೆಟ್: ಜೇಟ್ಲಿ ಸೂಟ್ ಕೇಸಿನೊಳಗಿದೆಯಾ ತೆರಿಗೆ ವಿನಾಯಿತಿ ಸಿಹಿಸುದ್ದಿ?
ನವದೆಹಲಿ, ಜನವರಿ 18: ಎಂಟು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹೊತ್ತಲ್ಲಿ ಘೋಷಣೆಯಾಗುತ್ತಿರುವ ಕೇಂದ್ರ ಬಜೆಟ್ ನತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಅಷ್ಟೇ ಅಲ್ಲ, ಜಿಎಸ್ಟಿ, ಅಪನಗದೀಕರಣದಿಂದಾದ ಪರಿಣಾಮವೇನು ಎಂಬುದನ್ನು ತಿಳಿದುಕೊಳ್ಳುವುದಕ್ಕೂ ಫೆ.1 ರಂದು ಘೋಷಣೆಯಾಗುವ ಈ ಬಜೆಟ್ ಅತ್ಯಂತ ಮಹತ್ವದ್ದು.
ನರೇಂದ್ರ ಮೋದಿ ಸರ್ಕಾರ, ಈ ಅವಧಿಯಲ್ಲಿ ಘೋಷಿಸುತ್ತಿರುವ ಕೊನೆಯ ಪೂರ್ಣಾವಧಿ ಬಜೆಟ್ ಕೂಡ ಹೌದಾಗಿರುವುದರಿಂದ ನಿರೀಕ್ಷೆಯ ಮೂಟೆ ಸಹಜವಾಗಿಯೇ ಸಾಕಷ್ಟು ದೊಡ್ಡದಿದೆ!
ಕೇಂದ್ರ ಬಜೆಟ್ ಮೇಲಿನ ಉದ್ಯೋಗಸ್ಥರ 5 ನಿರೀಕ್ಷೆಗಳು
ತ್ರಿಪುರ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ಛತ್ತೀಸಗಢ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಈ ವರ್ಷ ಚುನಾವಣೆ ನಡೆಯಲಿರುವುದರಿಂದ ಮತದಾರರನ್ನು ಓಲೈಸಲು ಕೇಂದ್ರ ಸರ್ಕಾರಕ್ಕೆ ಬಜೆಟ್ ಒಂದು ಉತ್ತಮ ಸಾಧನ ಎಂಬುದನ್ನು ಅಲ್ಲಗಳೆಯುವಂತಿಲ್ಲ!
ಹಲ್ವಾ ಹಂಚುವುದು ಸೇರಿ ಬಜೆಟ್ ಬಗೆಗಿನ ವಿಶಿಷ್ಟ ಸಂಗತಿಗಳು
ಅಷ್ಟಕ್ಕೂ ಬಜೆಟ್ ಕುರಿತು ಶ್ರೀಸಾಮಾನ್ಯನ ನಿರೀಕ್ಷೆಗಳೇನು? ಮಧ್ಯಮ ವರ್ಗದ ಮೇಲಿರುವ ತೆರಿಗೆ ಹೊರೆಯನ್ನು ಕೇಂದ್ರ ಸರ್ಕಾರ ಕೊಂಚವಾದರೂ ಸಡಿಲಿಸುತ್ತದೆಯಾ..? ಈ ಎಲ್ಲ ಸತ್ಯಗಳೂ ಗೊತ್ತಿರುವುದು ಅರುಣ್ ಜೇಟ್ಲಿ ಅವರು ಫೆ.1 ರಂದು ಹೊತ್ತು ತರುವ ಸೂಟ್ ಕೇಸಿಗೆ ಮಾತ್ರ!
3 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ?
ಈಗಾಗಲೇ ಇರುವ ತೆರಿಗೆ ವಿನಾಯಿತಿಯ ಮಿತಿಯನ್ನು 2.5 ಲಕ್ಷ ರೂ. ನಿಂದ 3 ಲಕ್ಷ ರೂ. ಗೆ ಹೆಚ್ಚಿಸಲಿ ಎಂಬುದು ಶ್ರೀಸಾಮಾನ್ಯನ ನಿರೀಕ್ಷೆ. ಕಳೆದ ವರ್ಷವೇ ಸರ್ಕಾರ ಈ ಮಿತಿಯನ್ನು ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿತ್ತಾದರೂ ಊಹೆ ನಿಜವಾಗಿರಲಿಲ್ಲ. ಈ ವರ್ಷ ಈ ಮಹತ್ವದ ನಿರ್ಧಾರ ಕೈಗೊಂಡಲ್ಲಿ, ಸಣ್ಣ ಪುಟ್ಟ ಕೆಲಸ ಮಾಡುತ್ತಿರುವ ಮಧ್ಯಮ ವರ್ಗದ ಜನರಿಗೆ ಸಹಾಯವಾಬಹುದು.
ಟ್ಯಾಕ್ಸ್ ಸ್ಲ್ಯಾಬ್ ನಲ್ಲಿ ಬದಲಾವಣೆ?
3 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಒಂದೆಡೆಯಾದರೆ, ಟ್ಯಾಕ್ಸ್ ಸ್ಲ್ಯಾಬ್ ನಲ್ಲಿ ಮತ್ತಷ್ಟು ಮಹತ್ವದ ಬದಲಾವಣೆಯನ್ನು ಜನರು ನಿರೀಕ್ಷಿಸುತ್ತಿದ್ದಾರೆ. ಈಗಾಗಲೇ 2.5-5 ಲಕ್ಷ ರೂ. ವರೆಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಶೇ.5 ತೆರಿಗೆ ವಿಧಿಸಲಾಗುತ್ತಿದೆ. ಇದೂ ಕಳೆದ ಬಾರಿಯ ಬಜೆಟ್ ನಲ್ಲಿ ತೆಗೆದುಕೊಂಡ ಕ್ರಮ. ಆದರೆ 5-10 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯಕ್ಕೆ ಶೇ.20 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಈ ಮಿತಿಯನ್ನು ಶೇ. 10 ಕ್ಕೆ ಇಳಿಸಬೇಕು ಎಂಬುದು ಶ್ರೀಸಾಮಾನ್ಯರ ನಿರೀಕ್ಷೆ. ಹಾಗೆಯೇ 10-20 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. 20 ಮತ್ತು 30 ಲಕ್ಷ ರೂ. ಗೂ ಅಧಿಕ ವಾರ್ಷಿಕ ಆದಾಯ ಹೊಂದಿರುವವರಿಗೆ ಶೇ. 30 ಗರಿಷ್ಠ ತೆರಿಗೆ ವಿಧಿಸಬಹುದು ಎಂದೂ ನಿರೀಕ್ಷಿಸಲಾಗಿದೆ.
ಜಿಎಸ್ಟಿಯಲ್ಲಿ ಬದಲಾವಣೆ?!
ಜಿಎಸ್ಟಿ ಅಥವಾ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು ಜಾರಿಗೆ ತಂದೆ ಮೇಲೆ ಮಹಿಳೆಯರಿಗೆ ಬಹುದೊಡ್ಡ ಹೊರೆ ಎನ್ನಿಸಿದ್ದು, ಸ್ಯಾನಿಟರಿ ನ್ಯಾಪ್ಕಿನ್ ಗಳಿಗೆ ಶೇ.12 ತೆರಿಗೆ ವಿಧಿಸುತ್ತಿರುವುದು. ಪ್ರತಿಯೊಬ್ಬ ಮಹಿಳೆಗೂ ಅತ್ಯಗತ್ಯವಾಗಿ ಬೇಕಾದ ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಸದೇ ಇದ್ದಲ್ಲಿ, ಮಹಿಳೆಯರ ಕೆಂಗಣ್ಣಿಗೆ ಗುರಿಯಾಗುವುದು ಖಂಡಿತ.
ಅನ್ನದಾತನಿಗೆ ಮೊದಲ ಆದ್ಯತೆ?
2017-18 ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿ ಶೇ.6.5 ಕ್ಕೆ ಕುಸಿದಿರುವುದಕ್ಕೆ ಮುಖ್ಯಕಾರಣ ಕೃಷಿ ವಿಭಾಗದಲ್ಲಿ ಸರಿಯಾದ ಉತ್ಪಾದನೆಯಾಗದಿರುವುದು. ಅದೂ ಅಲ್ಲದೆ ಮಧ್ಯ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರಗಳಲ್ಲಿ 2017 ರಲ್ಲಿ ಸಾಕಷ್ಟು ರೈತರು ಪ್ರತಿಭಟನೆ ನಡೆಸಿದ್ದು, ತಮ್ಮ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದು ಇನ್ನೂ ಹಸಿರಾಗಿಯೇ ಇದೆ. 2019 ರಲ್ಲಿ ಲೋಕಸಭೆ ಚುನಾವಣೆಯೂ ಇರುವುದರಿಂದ ರೈತರನ್ನು ಎದುರು ಹಾಕಿಕೊಳ್ಳುವುದು ಕೇಂದ್ರ ಸರ್ಕಾರಕ್ಕೇ ದುಬಾರಿಯಾಗಿ ಪರಿಣಮಿಸುವುದು ಖಂಡಿತ. ಆದ್ದರಿಂದ ರೈತ ಸ್ನೇಹಿ ಯೋಜನೆಗಳನ್ನು ಈ ಬಜೆಟ್ ನಲ್ಲಿ ಘೋಷಿಸಿದರೆ ಅಚ್ಚರಿಯೇನಿಲ್ಲ.
ಹಳ್ಳಿಗಳ ಮೇಲೆ ಹರಿಯುತ್ತಾ ಬಿಜೆಪಿ ಚಿತ್ತ?
ಬಿಜೆಪಿಯ ಪ್ರಾಬಲ್ಯ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಹೆಚ್ಚಿದೆ ಎಂಬುದು ಗುಜರಾತ್ ಚುನಾವಣೆಯಿಂದಾಗಿ ಈಗಾಗಲೇ ಸಾಬೀತಾಗಿದೆ. ಆದ್ದರಿಂದ ಈ ಬಾರಿ ಗ್ರಾಮೀಣ ಪ್ರದೇಶಗಳತ್ತ ಬಿಜೆಪಿ ಚಿತ್ತ ಹರಿಸಬೇಕಾದ್ದು ಅನಿವಾರ್ಯ. ಆದ್ದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವಂಥ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯೂ ಇದೆ.
ಕೃಷಿ ಶಿಕ್ಷಣಕ್ಕೂ ಒತ್ತು
ಈ ವರ್ಷದ ಬಜೆಟ್ ನಲ್ಲಿ ಕೃಷಿ ಶಿಕ್ಷಣಕ್ಕೆ, ಸಂಶೋಧನೆಗಾಗಿಯೇ ಸರ್ಕಾರ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. 2018-19 ರ ಹಣಕಾಸು ವರ್ಷದಲ್ಲಿ ಕೃಷಿ ಉತ್ಪನ್ನಗಳನ್ನೂ, ರೈತರ ಆದಾಯವನ್ನೂ ದುಪ್ಪಟ್ಟುಗೊಳಿಸುವ ಗುರಿ ಸರ್ಕಾರದ್ದು. 2014 ರ ಲೋಕಸಭೆ ಚುನಾವಣೆ ಮತ್ತು 2017 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಇದನ್ನೇ ತನ್ನ ಮೊದಲ ಆದ್ಯತೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.