ಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್ ಪೊಲೀಸರ ವಶಕ್ಕೆ
ಭೂಗತ ಪಾತಕಿ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿ ಬಂದಿದೆ. ಅರವತ್ತಕ್ಕೂ ಹೆಚ್ಚು ಪ್ರಕರಣಗಳು ಆತನ ವಿರುದ್ಧ ಇವೆ. ರವಿ ಪೂಜಾರಿ ವಿರುದ್ಧ ಕೇಂದ್ರ ಸರಕಾರ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಿತ್ತು. ಹಫ್ತಾ ವಸೂಲಿ ಅವನ ಮುಖ್ಯ ದಂಧೆಯಾಗಿತ್ತು. ಅದರಲ್ಲೂ ಕರ್ನಾಟಕದಲ್ಲಿ ಉದ್ಯಮಿಗಳು, ರಾಜಕಾರಣಿಗಳು ಅವನ ಗುರಿಯಾಗುತ್ತಿದ್ದರು.
ವಿದೇಶದಲ್ಲಿ ಇದ್ದುಕೊಂಡು, ಭಾರತದಲ್ಲಿ ತನ್ನ ಕಾರ್ಯಚಟುವಟಿಕೆ ನಡೆಸುತ್ತಿದ್ದ. ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಇವನ ವಿರುದ್ಧ ದೂರು ದಾಖಲಾಗಿದ್ದವು. ಇನ್ನು ಈತನ ವಿರುದ್ಧ ಭಾರತದಲ್ಲಿ ಗಂಭೀರ ಸ್ವರೂಪದ ಪ್ರಕರಣಗಳು ಇರುವುದರಿಂದ ದೇಶಕ್ಕೆ ಕರೆತರುವ ಪ್ರಯತ್ನಕ್ಕೆ ಚಾಲನೆ ದೊರೆತಿದೆ. ತನಿಖಾ ಸಂಸ್ಥೆಗಳು ಆ ಯತ್ನದಲ್ಲಿದೆ.
ಮಂಗಳೂರಿನ ಕಾಂಗ್ರೆಸ್ ಮುಖಂಡನಿಗೆ ರವಿ ಪೂಜಾರಿಯಿಂದ ಬೆದರಿಕೆ ಕರೆ
ಕರಾವಳಿ ಮೂಲದ ರವಿಪೂಜಾರಿ ದುಬೈ, ಕಳೆದ ಹದಿನೈದು ವರ್ಷಗಳಿಂದ ಆಸ್ಟ್ರೇಲಿಯಾ ಸೇರಿದಂತೆ ನಾನಾ ದೇಶಗಳಲ್ಲಿ ಓಡಾಡುತ್ತಾ ತನ್ನ ದಂಧೆ ಮಾಡಿಕೊಂಡಿದ್ದ. ಈತ ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಗೆ ಕೂಡ ಬೆದರಿಕೆ ಒಡ್ಡಿ ಸುದ್ದಿಯಾಗಿದ್ದ. ಕರ್ನಾಟಕದ ಮಾಜಿ ಸಚಿವರಿಗೆ ಬೆದರಿಕೆ ಹಾಕಿದ್ದು ಈತನ ಜಾಲ ಯಾವ ಪರಿ ಇತ್ತು ಎಂಬುದಕ್ಕೆ ಸಾಕ್ಷಿ ಎಂಬಂತೆ ಇತ್ತು.
ಈತನ ಸಹಚರರು ಕರ್ನಾಟಕದಲ್ಲಿ ಅನೇಕ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಹಲವು ಪ್ರಕರಣಗಳು ದಾಖಲಾಗಿವೆ. ಕರಾವಳಿಯಲ್ಲಿ ಈತ ಹೆಚ್ಚು ಸಕ್ರಿಯನಾಗಿ, ಬೇರೆಯವರ ಮೂಲಕ ಕೆಲಸ ಮಾಡಿಸುತ್ತಿದ್ದ. ಇದೀಗ ಸೆನೆಗಲ್ ಪೊಲೀಸರ ಕೈಗೆ ರವಿ ಪೂಜಾರಿ ಸಿಕ್ಕಿಬಿದ್ದಿದ್ದಾನೆ.