ತೆರೆಯದ ಆಂಬ್ಯುಲೆನ್ಸ್ ಬಾಗಿಲು, ಮಗುವಿನ ದಾರುಣ ಸಾವು
ರಾಯಪುರ, ಜುಲೈ 17 : ಎರಡು ತಿಂಗಳ ಆ ಪುಟಾಣಿ ಮಗುವಿಗೆ ತುರ್ತಾಗಿ ಹೃದಯದ ಶಸ್ತ್ರಚಿಕಿತ್ಸೆ ಆಗಬೇಕಾಗಿತ್ತು. ಆಸ್ಪತ್ರೆಗೆ ಕರೆತರುವಾಗ ಆಂಬ್ಯುಲೆನ್ಸ್ ಬಾಗಿಲು ಲಾಕ್ ಆದ ಕಾರಣ, ಮಗು ಆಂಬ್ಯುಲೆನ್ಸ್ ನಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.
ಆಂಬ್ಯುಲೆನ್ಸ್ ಗಾಡಿಯ ಬಾಗಿಲು ಗಂಟೆಗಟ್ಟಲೆ ಲಾಕ್ ಆಗಿದ್ದಾಗ, ಕಿಟಕಿ ಗಾಜನ್ನು ಒಡೆಯಲು ಮಗುವಿನ ತಂದೆ ಯತ್ನಿಸಿದರೂ, ಗಾಜನ್ನು ಒಡೆಯಲು ಅವಕಾಶ ನೀಡದೆ ಆಂಬ್ಯುಲೆನ್ಸ್ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಗಾಜನ್ನು ಒಡೆಯಲು ಅವಕಾಶ ನೀಡಿದ್ದರೆ ಮಗುವಿಗೆ ಸಕಾಲಕ್ಕೆ ಶಸ್ತ್ರಚಿಕಿತ್ಸೆ ನೀಡಬಹುದಿತ್ತೇನೋ?
ಅನಾಥವಾಗಿ ಸಿಕ್ಕ ಅನ್ವಿತಾ ಅಮೆರಿಕಕ್ಕೆ ಹಾರಲು ಸಿದ್ಧ!
ರಾಯಪುರಕ್ಕೆ ಬಂದ ನಂತರ ಮಗುವಿನ ತಂದೆ ಅಂಬಿಕಾ ಕುಮಾರ್ ಸಂಜೀವಿನಿ ಎಕ್ಸ್ ಪ್ರೆಸ್ ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದ್ದಾರೆ. ಆದರೆ, ರಾಯಪುರದಲ್ಲಿನ ಡಾ. ಭೀಮರಾವ್ ಅಂಬೇಡ್ಕರ್ ಆಸ್ಪತ್ರೆಗೆ ಬರುತ್ತಿದ್ದಂತೆ ಅವರ ಅದೃಷ್ಟ ಕೈಕೊಟ್ಟಿದೆ. ಎಷ್ಟೇ ಪ್ರಯತ್ನ ಮಾಡಿದರೂ ಬಾಗಿಲು ತೆರೆಯಲಾಗಲಿಲ್ಲ.
ಮೆಕ್ಯಾನಿಕ್ ನನ್ನು ಕರೆದು ಲಾಕ್ ತೆರೆಯಲು ಯತ್ನಿಸಿದರೂ ಸಫಲರಾಗಿಲ್ಲ. ಇಷ್ಟೆಲ್ಲ ಮಾಡುವಾಗ ಹಲವಾರು ಗಂಟೆಗಳು ಕಳೆದಿವೆ. ಮಗು ಉಸಿರಾಡಿಸಲು ಕಷ್ಟಪಡುತ್ತಿರುವುದನ್ನು ಕಂಡ ಅಂಬಿಕಾ ಕುಮಾರ್ ಅವರು ಗಾಜನ್ನು ಒಡೆಯುತ್ತೇನೆಂದು ಸಿಬ್ಬಂದಿಗೆ ಹೇಳಿದ್ದಾರೆ.
ಸರಕಾರಿ ವಾಹನದ ಗಾಜನ್ನು ಒಡೆಯುವಂತಿಲ್ಲ ಎಂದು ಅಂಬಿಕಾ ಕುಮಾರ್ ಅವರನ್ನು ಎಚ್ಚರಿಸಿದ್ದಾರೆ. ಈ ಜಟಾಪಟಿ ನಡೆಯುವ ಹೊತ್ತಿಗಾಗಲೆ ಮಗುವಿನ ಪ್ರಾಣಪಕ್ಷಿಯೂ ಹಾರಿಹೋಗಿದೆ. ಅಂಬಿಕಾ ಕುಮಾರ್ ಅವರು ಮಾಡಿರುವ ಆರೋಪವನ್ನು ಆಂಬ್ಯುಲೆನ್ಸ್ ಸಿಬ್ಬಂದಿ ತಳ್ಳಿಹಾಕಿದ್ದಾರೆ. ತಾವು ಯಾವುದೇ ನಿರ್ಲಕ್ಷ್ಯ ತೋರಿಲ್ಲ, ಆಸ್ಪತ್ರೆಗೆ ತರುವಾಗಲೇ ಮಗು ತೀರಿಕೊಂಡಿತ್ತು ಎಂದು ಹೇಳುತ್ತಿದ್ದಾರೆ.