48 ವರ್ಷದಲ್ಲಿ ಇದೇ ಮೊದಲು: ಮೋದಿಗೆ ರಾಜತಾಂತ್ರಿಕ ಸೋಲು?
Recommended Video
ಕಾಶ್ಮೀರ ವಿಚಾರ ವಿಶ್ವಸಂಸ್ಥೆ ಬಾಗಿಲಿಗೆ ಹಲವು ಬಾರಿ ಹೋಗಿದ್ದರೂ, ಶುಕ್ರವಾರ (ಆ 16) ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್ ನಲ್ಲಿ ನಡೆದ ಸಭೆ, ನಲವತ್ತೆಂಟು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು. ಅದು ಕ್ಲೋಸ್ ಡೋರ್ ಮೀಟಿಂಗ್ ಆಗಿರಲಿ ಅಥವಾ ಅನೌಪಚಾರಿಕ ಸಭೆಯಾಗಿರಲಿ,
ಕಾಶ್ಮೀರದ ವಿಚಾರ ವಿಶ್ವಸಂಸ್ಥೆಯಲ್ಲಿ ಪ್ರಸ್ತಾವನೆಗೆ ಬಂದಿದ್ದು, ಒಂದು ಆಯಾಮದಲ್ಲಿ ಭಾರತಕ್ಕಾದ ರಾಜತಾಂತ್ರಿಕ ಹಿನ್ನಡೆ. ಹಾಗಂತ, ಇದು ಪಾಕಿಸ್ತಾನಕ್ಕಾದ ಗೆಲುವು ಎಂದೇನಲ್ಲ, ಆದರೆ, ಪರಿಸ್ಥಿತಿ ಬಿಗಡಾಯಿಸಿದರೆ, ಈ ವಿಚಾರವನ್ನು ಪೂರ್ಣ ಪ್ರಮಾಣದಲ್ಲಿ ವಿಶ್ವಸಂಸ್ಥೆ ತನ್ನ ಭದ್ರತಾ ಮಂಡಳಿ ಸಭೆಯಲ್ಲಿ ಕೈಗೆತ್ತಿಕೊಳ್ಳಬಹುದು ಎನ್ನುವ ಮುನ್ಸೂಚನೆಯೂ ಆಗಿರಬಹುದು.
ಕಾಲಡಿಯಲ್ಲೇ ಕಸ; ಆದರೂ ಕಾಶ್ಮೀರದ ಚಿಂತೆ: ಇಮ್ರಾನ್ ಖಾನ್ ಇಬ್ಬಂದಿತನ
ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್, ಬ್ರಿಟನ್ ದೇಶದ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ, ಜೊತೆಗೆ, ಇತರ ಹತ್ತು ದೇಶಗಳ ಪೈಕಿ ಚೀನಾ ನಿರೀಕ್ಷೆಯಂತೆ ಪಾಕಿಸ್ತಾನದ ಪರವಾಗಿ ನಿಂತಿತು, ರಷ್ಯಾ ಮತ್ತು ಇತರರು ಭಾರತದ ಕೈಬಲಪಡಿಸಿದರು.
370 ವಿಧಿ ರದ್ದು ವಿರುದ್ಧದ ಅರ್ಜಿ: ಮುಖ್ಯ ನ್ಯಾಯಮೂರ್ತಿಗಳಿಗೆ ಅರ್ಥವಾಗದ ಅಹವಾಲು
ಭದ್ತತಾ ಮಂಡಳಿಯ ಸಭೆಯಲ್ಲಿ 'ಇದು ಭಾರತದ ಆಂತರಿಕ ವಿಚಾರ ಎನ್ನುವ ನಿರ್ಧಾರಕ್ಕೆ ಬರಲಾಯಿತಾದರೂ', ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಇದುವರೆಗಿನ ಆಡಳಿತದಲ್ಲಿ ಒಮ್ಮೆ ಮಾತ್ರ ಕಾಶ್ಮೀರ ವಿಚಾರ ಭದ್ರತಾ ಮಂಡಳಿ ಸಭೆಯಲ್ಲಿ ಚರ್ಚೆಗೆ ಬಂದಿತ್ತು ಎನ್ನುವುದು ಗಮನಿಸಬೇಕಾದ ವಿಚಾರ.
ವಿದೇಶ ಪ್ರವಾಸಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದ ನರೇಂದ್ರ ಮೋದಿ
ಪ್ರಧಾನಿಯಾಗಿ ತಮ್ಮ ಮೊದಲ ಅವಧಿಯಲ್ಲಿ ವಿದೇಶ ಪ್ರವಾಸಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದ ನರೇಂದ್ರ ಮೋದಿ, ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆ ಚರ್ಚೆಗೆ ತೆಗೆದುಕೊಳ್ಳದಂತೆ ತಡೆಯುವಲ್ಲಿ ವಿಫಲರಾಗಿದ್ದಾರೆ ಅಥವಾ ಬಂದರೂ ಅದನ್ನು ಎದುರಿಸುವಲ್ಲಿ ಸಮರ್ಥರಾಗಿದ್ದೇವೆ ಎನ್ನುವ ವಿಶ್ವಾಸ ಅವರಲ್ಲಿ ಇದ್ದಿರಬಹುದು. ಆದರೂ, ಬಿಜೆಪಿ ವಿರುದ್ದ ಹೋರಾಡಲು ವಿಷಯದ ಹುಡುಕಾಟದಲ್ಲಿರುವ ಕಾಂಗ್ರೆಸ್ಸಿಗೆ, ಕಾಶ್ಮೀರ ವಿಚಾರ ತಾಂಬೂಲ ಸಿಕ್ಕಂತಾಗಿದೆ.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಕಾಶ್ಮೀರ ವಿಚಾರ
1971ರಲ್ಲಿ ಭಾರತ- ಪಾಕ್ ಯುದ್ದ, ಅದರಲ್ಲಿ ಪಾಕಿಸ್ತಾನಕ್ಕೆ ಸೋಲು. ಆ ಅವಧಿಯಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ, ಸ್ವಾರನ್ ಸಿಂಗ್ ವಿದೇಶಾಂಗ ಸಚಿವರಾಗಿದ್ದ ವೇಳೆ ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆ ಕೈಗೆತ್ತಿಕೊಂಡಿತ್ತು. ಅದಾದ ನಂತರ ಇದೇ ಮೊದಲ ಬಾರಿಗೆ, ಎರಡನೇ ಅವಧಿಗೆ ಮೋದಿ ಪಿಎಂ ಅವಧಿಯಲ್ಲಿ ಮತ್ತು ಮೋದಿಯ ಫೇವರೇಟ್ ಜೈಶಂಕರ್ ವಿದೇಶಾಂಗ ಸಚಿವರಾಗಿದ್ದ ವೇಳೆ (ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆತ್ಮ ಅದೆಷ್ಟು ವ್ಯಥೆ ಪಡುತ್ತಿದೆಯೋ), ಈ ವಿಚಾರ ಅನೌಪಚಾರಿಕವಾಗಿ ಚರ್ಚೆಗೆ ಬಂದಿದೆ.
ಆರ್ಟಿಕಲ್ 370 ರದ್ದತಿ
ಆರ್ಟಿಕಲ್ 370 ರದ್ದತಿ ನಂತರ, ಇಂಡೋ-ಪಾಕ್ ಗಡಿ, ಏನು ಅದನ್ನು ಫ್ಲ್ಯಾಷ್ ಪಾಯಿಂಟ್ ಎಂದು ಕರೆಯುತ್ತಾರೋ, ಅಲ್ಲಿ ಬಿಗುವಿನ ಪರಿಸ್ಥಿತಿಯಿದೆ ಎಂದು ಪಾಕ್ ಪ್ರತಿಪಾದಿಸುತ್ತಾ, ಜಾಗತಿಕ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಒಂದರ್ಥದಲ್ಲಿ ಹೇಳಬಹುದಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಇದು ಗಮನ ಸೆಳೆದಿದ್ದರಿಂದಲೇ, ವಿಶ್ವಸಂಸ್ಥೆ ಅನೌಪಚಾರಿಕವಾಗಿ ಕಾಶ್ಮೀರ ವಿಚಾರವನ್ನು ಕೈಗೆತ್ತಿಕೊಂಡಿತಾ ಎನ್ನುವುದಿಲ್ಲಿ ಪ್ರಶ್ನೆ.
1971ರಿಂದ ರಷ್ಯಾದ ವೀಟೋ (veto) ಬಲ
1971ರಿಂದ ರಷ್ಯಾದ ವೀಟೋ (veto) ಬಲದ ಹೊರತಾಗಿಯೂ ಸಮರ್ಥವಾಗಿ ಕಾಶ್ಮೀರ ವಿಚಾರವನ್ನು ನಿಭಾಯಿಸಿಕೊಂಡು ಬಂದಿದ್ದ ಭಾರತ, ಮೋದಿ ಹೆಸರು ಉಚ್ಚ್ರಾಯ ಸ್ಥಿಯಲ್ಲಿರುವ ಈ ಹೊತ್ತಿನಲ್ಲಿ ಮತ್ತೆ ವಿಶ್ವಸಂಸ್ಥೆಯ ಅಂಗಣಕ್ಕೆ ಬಂದಿದೆ. ಪುಲ್ವಾಮಾ ಪ್ರತೀಕಾರ, ಆರ್ಟಿಕಲ್ 370 ರದ್ದತಿ ಘೋಷಣೆಯನ್ನು ಅತ್ಯಂತ ಗೌಪ್ಯವಾಗಿ ಸಂಬಾಳಿಸಿದ್ದ ಮೋದಿ ಸರಕಾರಕ್ಕೆ, ಕಾಶ್ಮೀರ ವಿಚಾರವನ್ನು ಭದ್ರತಾ ಮಂಡಳಿ ಕೈಗೆತ್ತಿ ಕೊಳ್ಳಬಹುದು ಎನ್ನುವ ಲೆಕ್ಕಾಚಾರವೂ ಇದ್ದಿರಬಹುದು, ಅದಕ್ಕೂ ಪೂರ್ವತಯಾರಿ ಮಾಡಿಕೊಂಡಿರಬಹುದು ಎನ್ನುವುದು ಇನ್ನೊಂದು ಆಯಾಮ.
ಈಗಿನ ವಿದೇಶಾಂಗ ಸಚಿವರಾಗಿರುವ ಜೈಶಂಕರ್
ಈಗಿನ ವಿದೇಶಾಂಗ ಸಚಿವರಾಗಿರುವ ಜೈಶಂಕರ್, ಚೀನಾ ಜೊತೆಗಿನ ದ್ವಿಪಕ್ಷೀಯ ಸಂಬಂಧದ ವಿಚಾರದಲ್ಲಿ ಪರಿಣಿತರೆಂದೇ ಕರೆಯಲ್ಪಡುತ್ತಾರೆ. 2009 ರಿಂದ 2013 ರವರೆಗೆ ಐದು ವರ್ಷಗಳ ಕಾಲ ಚೀನಾದಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರೂ, ಭದ್ರತಾ ಮಂಡಳಿಯ ಸಭೆಯಲ್ಲಿ, ಭಾರತದ ಪರವಾಗಿ ಚೀನಾ ನಿಲ್ಲುವಂತೆ ಮಾಡುವಲ್ಲಿ ವಿಫಲರಾದರು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಗಮನಿಸಬೇಕಾದ ಅಂಶವೇನಂದರೆ, ಜೈಶಂಕರ್ ಚೀನಾಗೆ ಭೇಟಿ ನೀಡುವ ಒಂದು ದಿನದ ಮುನ್ನ, ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಬೀಜಿಂಗ್ ಗೆ ಹೋಗಿ ಚೀನಾದ ಸಹಾಯವನ್ನು ಕೋರಿದ್ದರು.
ಶುಕ್ರವಾರದ ಸಭೆಯ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಹೀಗೆ
ಒಟ್ಟಿನಲ್ಲಿ, ಕಾಶ್ಮೀರ ಭಾರತದ ಆಂತರಿಕ ವಿಚಾರ ಎನ್ನುವ ನಿರ್ಣಯಕ್ಕೆ ಭದ್ರತಾ ಮಂಡಳಿಯ ಅನೌಪಚಾರಿಕೆ ಸಭೆಯಲ್ಲಿ ಬರಲಾಯಿತಾದರೂ, ಈ ವಿಚಾರವನ್ನು ವಿಶ್ವದ ಗಮನಕ್ಕೆ ತರುವಲ್ಲಿ ಪಾಕಿಸ್ತಾನ ಯಶಸ್ವಿಯಾಯಿತು. ಶುಕ್ರವಾರದ ಸಭೆಯ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಹೀಗೆ, " ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮತ್ತು ಇದು ನಮ್ಮ ಆಂತರಿಕ ಸಮಸ್ಯೆ. ಈ ವಿಚಾರದಲ್ಲಿ ದೇಶದ ಯಾವುದೇ ಪಕ್ಷ, ಸಂಘಟನೆ ಇದಕ್ಕೆ ವಿರುದ್ಧವಾಗಿ ಪ್ರತಿಪಾದಿಸಲು ಸಾಧ್ಯವಿಲ್ಲ. 48 ವರ್ಷಗಳಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆ, ಕಾಶ್ಮೀರ ಸಮಸ್ಯೆಯನ್ನು ಕೈಗೆತ್ತಿಕೊಂಡಿದೆ - ಇದು ಬಿಜೆಪಿ ಸರ್ಕಾರದ ರಾಜತಾಂತ್ರಿಕ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ".