ದೇಶ ಸುತ್ತಿ ಪುಲ್ವಾಮಾ ಹುತಾತ್ಮರ ಮನೆಯ ಮಣ್ಣು ಸಂಗ್ರಹಿಸಿದ ಬೆಂಗಳೂರಿಗ
ಶ್ರೀನಗರ, ಫೆಬ್ರವರಿ 14: ಪುಲ್ವಾಮಾ ದಲ್ಲಿ ನಮ್ಮ ಸೈನಿಕರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಆರ್ಡಿಎಕ್ಸ್ ತುಂಬಿದ ಜೀಪು ಗುದ್ದಿಸಿ 40 ಯೋಧರನ್ನು ಕೊಲ್ಲಲಾಗಿತ್ತು. ಆ ಕರಾಳ ದಿನಕ್ಕೆ ಇಂದು ಒಂದು ವರ್ಷ.
ಬಹುತೇಕರು ಅಂದಿನ ಘಟನೆಯನ್ನು ಮರೆತೇ ಬಿಟ್ಟಿದ್ದಾರೆ. ಆದರೆ ಇಲ್ಲೊಬ್ಬ ಬೆಂಗಳೂರಿನ ನಿವಾಸಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ವಿಶಿಷ್ಟ ಮತ್ತು ಅತ್ಯಂತ ಅರ್ಥಪೂರ್ಣವಾಗಿ ಗೌರವ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ಹಾಡುಗಾರ ಉಮೇಶ್ ಗೋಪಿನಾಥ್ ಜಾಧವ್ ಅವರು, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಸೈನಿಕರ ಮನೆಗಳಿಗೂ ತೆರಳಿ ಅವರ ಮನೆಯಿಂದ, ಸಮಾಧಿಯಿಂದ ಮಣ್ಣು ತಂದಿದ್ದಾರೆ.
ಫೆಬ್ರವರಿ.14 'ಪ್ರೇಮಿಗಳ ದಿನ'ವಲ್ಲ ಭಾರತೀಯರ ಪಾಲಿಗೆ 'ಕರಾಳ ದಿನ'!
ಕಳೆದ ವರ್ಷ ಪುಲ್ವಾಮಾ ದಾಳಿ ನಡೆದಾಗ ಆಗ ತಾನೆ ಅಜ್ಮೇರ್ನಲ್ಲಿ ಸಂಗೀತ ಕಾರ್ಯಕ್ರಮ ಮುಗಿಸಿ ಉಮೇಶ್ ಬೆಂಗಳೂರಿಗೆ ಮರಳಿದ್ದರು. ಟಿವಿಗಳಲ್ಲಿ ಘಟನೆಯ ದೃಶ್ಯಗಳನ್ನು ನೋಡಿ ಅತೀವ ದುಖಿಃತರಾದ ಅವರು ಕೂಡಲೇ ನಿಶ್ಚಯಿಸಿದರು, ಎಲ್ಲಾ ಹುತಾತ್ಮರ ಕುಟುಂಬವನ್ನು ಭೇಟಿ ಮಾಡಲು.
ಕಾರಿನಲ್ಲೇ ಎಲ್ಲಾ ಯೋಧರ ಮನೆಗೆ ಭೇಟಿ
ಅದರಂತೆ ತಮ್ಮ ಕಾರು ತೆಗೆದುಕೊಂಡು ಹೊರಟೇ ಬಿಟ್ಟರು. ದಾಳಿಯಲ್ಲಿ ಹುತಾತ್ಮರಾದ ಎಲ್ಲ ಯೋಧರ ಮನೆಗೂ ಉಮೇಶ್ ಗೋಪಿನಾಥ್ ಭೇಟಿ ನೀಡಿದ್ದಾರೆ. ಯೋಧರ ಮನೆಯ ಮುಂದಿನ ಮಣ್ಣು ಹಾಗೂ ಯೋಧರನ್ನು ದಫನ್ ಮಾಡಿದ ಜಾಗದ ಮಣ್ಣನ್ನು ಉಮೇಶ್ ಸಂಗ್ರಹಿಸಿದ್ದಾರೆ.
ಹಲವು ರಾಜ್ಯ, ರಸ್ತೆಗಳಲ್ಲಿದ ಹಳ್ಳಿಗಳಿಗೆ ಭೇಟಿ
ಮಣ್ಣು ಸಂಗ್ರಹಿಸುವ ಪ್ರಯಾಣದಲ್ಲಿ ಭಾರತದ ಹಲವು ರಾಜ್ಯಗಳನ್ನು, ರಾಜ್ಯಗಳ ಹಲವು ಜಿಲ್ಲೆಗಳು, ರಸ್ತೆಗಳೇ ಇಲ್ಲದ ಹಳ್ಳಿಗಳಿಗೆ ಅವರು ತೆರಳಿದ್ದಾರೆ. ಕಾರಿನಲ್ಲೇ ವಾಸ, ಸಿಕ್ಕ ಕಡೆ ಊಟ, ನಿದ್ದೆ ಎಲ್ಲವೂ ಮಾಡಿದ್ದಾರೆ. ಕಾರಿನ ಮೇಲೆ ದೇಶಭಕ್ತಿಯ ವಾಕ್ಯಗಳನ್ನು ಬರೆಸಿದ್ದರಿಂದ ಅವರಿಗೆ ಎಲ್ಲೂ ಊಟಕ್ಕೆ ತಂಗಲು ಅಡ್ಡಿಯಾಗಲಿಲ್ಲವಂತೆ.
ಪುಲ್ವಮಾ ದಾಳಿ; ಇನ್ನೂ ಉತ್ತರ ಸಿಗಬೇಕಾದ ಪ್ರಶ್ನೆಗಳು
61,000 ಕಿ.ಮೀ ಪ್ರಯಾಣ ಮಾಡಿದ್ದೇನೆ: ಉಮೇಶ್
ಸುಮಾರು 61000 ಕಿ.ಮೀ ದೂರ ಪ್ರಯಾಣಿಸಿರುವ ಉಮೇಶ್ ಗೋಪಿನಾಥ್ ತಮ್ಮ ಮಣ್ಣು ಸಂಗ್ರಹಿಸುವ ಕಾರ್ಯವನ್ನು ಕಳೆದ ವಾರ ಮುಗಿಸಿದ್ದಾರೆ. ಸಂಗ್ರಹಿಸಿದ ಮಣ್ಣನ್ನು ಸಿಆರ್ಪಿಎಫ್ ಗೆ ಅವರು ಅರ್ಪಿಸಿದ್ದಾರೆ. ಉಮೇಶ್ ಗೋಪಿನಾಥ್ ಸಂಗ್ರಹಿಸಿರುವ ಮಣ್ಣು ಪುಲ್ವಾಮಾ ದಾಳಿ ಹುತಾತ್ಮರಿಗಾಗಿ ಸರ್ಕಾರ ಲೇತಾಪುರದಲ್ಲಿ ನಿರ್ಮಿಸಿರುವ ಸ್ಮಾರಕದಲ್ಲಿ ಇಡಲಾಗಿದೆ.
'ಇಡೀಯ ವರ್ಷವನ್ನು ಮಣ್ಣು ಸಂಗ್ರಹಿಸಲು ಕಳೆದೆ'
'ನಾನು ಇಡೀಯ 2019 ನ್ನು ಪುಲ್ವಾಮಾ ದಾಳಿ ಹುತಾತ್ಮ ಯೋಧರ ಮನೆಗೆ ತೆರಳಲು ಕಳೆದಿದ್ದೇನೆ, ನನ್ನ ಹುಟ್ಟುಹಬ್ಬವನ್ನೂ ಪಂಜಾಬ್ನ ಹುತಾತ್ಮ ಯೋಧರೊಬ್ಬರ ಕುಟುಂಬದೊಂದಿಗೆ ಕಳೆದಿದ್ದೇನೆ' ಎಂದು ಉಮೇಶ್ ಗೋಪಿನಾಥ್ ಹೇಳಿದ್ದಾರೆ.
ವಿಶೇಷ ಅತಿಥಿಯಾಗಿ ಉಮೇಶ್ ಗೆ ಆಹ್ವಾನ
ಪುಲ್ವಾಮಾ ಹುತಾತ್ಮರ ನೆನಪಿಗಾಗಿ ಸಿಆರ್ಪಿಎಫ್ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಮೇಶ್ ಗೋಪಿನಾಥ್ ಅವರನ್ನು ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಇಂದೇ ಅವರು ತಾವು ಸಂಗ್ರಹಿಸಿದ ಮಣ್ಣನ್ನು ಸಿಆರ್ಪಿಎಫ್ ಗೆ ಹಸ್ತಾಂತರಿಸಿದರು.