ಚುನಾವಣೆಗೂ ಮುನ್ನವೇ ಶಸ್ತ್ರತ್ಯಾಗ ಮಾಡಿದ ಬಿಜೆಪಿಯ ನಾಯಕಿ
ನವದೆಹಲಿ, ಡಿಸೆಂಬರ್ 04: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುತ್ತಿರುವಾಗಿ ಘೋಷಿಸಿದ ಬಳಿಕ ಮತ್ತೊಬ್ಬ ಕೇಂದ್ರ ಸಚಿವೆಯೊಬ್ಬರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಘೋಷಿಸಿದ್ದಾರೆ.
ಬಿಜೆಪಿಯ ವಿವಾದಿತ ನಾಯಕಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದಿದ್ದಾರೆ. ಆದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.
ಸಂಪುಟದಿಂದ 'ಔಟ್' ಆಗಬೇಕಿದ್ದ ಉಮಾಭಾರತಿ ಬಚಾವ್ ಆಗಿದ್ದು ಹೀಗೆ
ಖಜುರಾಹೋ ಲೋಕಸಭಾ ಕ್ಷೇತ್ರದಲ್ಲಿ 1989ರಲ್ಲಿ ಗೆಲುವು ಸಾಧಿಸಿದ ಉಮಾ ಅವರು 1991, 1996 ಹಾಗೂ 1998ರಲ್ಲಿ ಜಯಭೇರಿ ಬಾರಿಸಿದರು.
ರಾಮಜನ್ಮಭೂಮಿ ವಿವಾದ, ಬಾಬ್ರಿ ಮಸೀದಿ ಧ್ವಂಸ,ಎಲ್ ಕೆ ಅಡ್ವಾಣಿ ಅವರ ರಥಯಾತ್ರೆ ಸೇರಿದಂತೆ ಎಲ್ಲಾ ಪ್ರಮುಖ ಘಟನಾವಳಿಗಳಲ್ಲಿ ಭಾಗಿಯಾಗಿದ್ದಲ್ಲದೆ, ಆರೋಪವನ್ನು ಹೊತ್ತುಕೊಂಡರು.
ಸದ್ಯ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಜಲ ಸಂಪನ್ಮೂಲ, ನದಿ ಅಭಿವೃದ್ಧಿ, ನಮಾಮಿ ಗಂಗಾ ಯೋಜನೆ ಅನುಷ್ಠಾನ ಸಚಿವೆಯಾಗಿ 26 ಮೇ 2014ರಿಂದ 2017ರ ಸೆಪ್ಟೆಂಬರ್ 0ರ ತನಕ ಕಾರ್ಯನಿರ್ವಹಿಸಿದರು. ನಂತರ ಕುಡಿಯುವ ನೀರು ಹಾಗೂ ಒಳಚರಂಡಿ ಖಾತೆ ಸಚಿವೆಯಾದರು.
ಈಗ ಮುಂದಿನ ಚುನಾವಣೆ ಸ್ಪರ್ಧಿಸದಿರಲು ಸುಷ್ಮಾರಂತೆ ಉಮಾ ಕೂಡಾ ಅನಾರೋಗ್ಯದ ಕಾರಣ ನೀಡಿದ್ದಾರೆ. 2005ರಲ್ಲಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಉಮಾ ಅವರು 2011ರಲ್ಲಿ ಮತ್ತೊಮ್ಮೆ ಬಿಜೆಪಿ ಸೇರಿದ್ದರು.