ಭಾರತ ಹೃದಯಕ್ಕೆ ಹತ್ತಿರವಿರುವ ದೇಶ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ನವದೆಹಲಿ, ಜನವರಿ 26: ಭಾರತದ 72ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ಅನೇಕ ದೇಶಗಳ ಗಣ್ಯರು ಭಾರತದ ಜನತೆಗೆ ಶುಭಾಶಯ ತಿಳಿಸಿದ್ದಾರೆ.
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯನ್ನಾಗಿ ಬೋರಿಸ್ ಜಾನ್ಸನ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಬ್ರಿಟನ್ನಲ್ಲಿ ಕೊರೊನಾ ವೈರಸ್ ರೂಪಾಂತರ ತಳಿಯ ಪ್ರಭಾವ ಹೆಚ್ಚಾದ ಕಾರಣ ಬೋರಿಸ್ ಜಾನ್ಸನ್ ಅವರು ತಮ್ಮ ಪ್ರವಾಸ ರದ್ದುಗೊಳಿಸಿದ್ದರು. ಹೀಗಾಗಿ ಸಮಾರಂಭಕ್ಕೆ ಗೈರು ಹಾಜರಾದರೂ ಅವರು ಭಾರತಕ್ಕೆ ಸಂದೇಶ ರವಾನಿಸಿದ್ದಾರೆ.
ಗಣತಂತ್ರದಿನಕ್ಕಾಗಿ ಐಕ್ಯತಾ ಡೂಡ್ಲ್ ರಚಿಸಿದ ಮುಂಬೈ ಕಲಾವಿದ
'ಇಂದು ಭಾರತವು ಗಣರಾಜ್ಯೋತ್ಸವ ದಿನ ಆಚರಿಸುತ್ತಿದೆ. ಭಾರತ ವಿಶ್ವದ ಅತಿದೊಡ್ಡ ಸಾರ್ವಭೌಮ ಪ್ರಜಾಪ್ರಭುತ್ವದ ದೇಶವಾಗಿದ್ದು, ಅಸಾಧಾರಣ ಸಂವಿಧಾನವನ್ನು ಹೊಂದಿದೆ. ನನ್ನ ಹೃದಯಕ್ಕೆ ಹತ್ತಿರವಾಗಿರುವ ದೇಶಕ್ಕೆ ನನ್ನ ಪ್ರಾಮಾಣಿಕ ಶುಭಾಶಯಗಳನ್ನು ಕೋರುತ್ತೇನೆ' ಎಂದು ಅವರು ಹೇಳಿದ್ದಾರೆ.
ಈ ವರ್ಷ ಮುಂದಿನ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಲು ಕಾತರನಾಗಿದ್ದೇನೆ. ನಾನು ಮತ್ತು ಪ್ರಧಾನಿ ನರೇಂದ್ರ ಮೋದಿ ಒಬ್ಬರೂ ಪ್ರತಿಜ್ಞೆಗೈದಿರುವಂತೆ ನಮ್ಮ ಸ್ನೇಹ ಮತ್ತು ಸಂಬಂಧವನ್ನು ಬಲಪಡಿಸುವ, ವೃದ್ಧಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಸೋನಿಯಾ ನಾರಂಗ್ ಸೇರಿದಂತೆ 6 NIA ಅಧಿಕಾರಿಗಳಿಗೆ ಗೌರವ
ನಮ್ಮ ಎರಡು ದೇಶಗಳು ಈ ಪಿಡುಗಿನಿಂದ ಮನುಕುಲವನ್ನು ಮುಕ್ತಗೊಳಿಸಲು ಲಸಿಕೆಯ ಅಭಿವೃದ್ಧಿ, ಉತ್ಪಾದನೆ ಮತ್ತು ಹಂಚಿಕೆಗಳ ವಿಚಾರದಲ್ಲಿ ಜತೆಜತೆಯಾಗಿ ಕೆಲಸ ಮಾಡುತ್ತಿದ್ದೇವೆ. ಬ್ರಿಟನ್, ಭಾರತ ಮತ್ತು ಇತರೆ ದೇಶಗಳ ಸಂಯೋಜಿತ ಪ್ರಯತ್ನದ ಫಲವಾಗಿ ನಾವು ಕೋವಿಡ್ ವಿರುದ್ಧ ಯಶಸ್ಸಿನ ಹಾದಿಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.