ಬ್ರಿಟನ್ ಪ್ರಧಾನಿ ಬೋರಿಸ್ ಭಾರತ ಪ್ರವಾಸ ಮತ್ತೆ ಮುಂದೂಡಿಕೆ
ನವದೆಹಲಿ, ಏಪ್ರಿಲ್ 19: ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದರಿಂದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಪ್ರವಾಸವನ್ನು ಪುನಃ ಮುಂದೂಡಿದ್ದಾರೆ. ಭಾರತದಲ್ಲಿ ಎರಡನೆಯ ಅಲೆಯ ಕೋವಿಡ್ ವ್ಯಾಪಿಸಿದ್ದು, ಇದು ಮತ್ತಷ್ಟು ಮಾರಣಾಂತಿಕವಾಗಿದೆ. ಪ್ರತಿದಿನವೂ ಎರಡು ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ.
ಏಪ್ರಿಲ್ ಅಂತ್ಯದಲ್ಲಿ ಬೋರಿಸ್ ಜಾನ್ಸನ್ ಅವರು ಭಾರತಕ್ಕೆ ಪ್ರವಾಸ ಕೈಗೊಳ್ಳುವುದು ನಿಗದಿಯಾಗಿತ್ತು. ಆದರೆ ಭಾರತದಲ್ಲಿ ಕೋವಿಡ್ ಹೆಚ್ಚುತ್ತಿರುವ ಕಾರಣ ದಿನಾಂಕವನ್ನು ಮುಂದೂಡಲಾಗಿದೆ.
ಭಾರತ ಹೃದಯಕ್ಕೆ ಹತ್ತಿರವಿರುವ ದೇಶ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ಭಾರತದಲ್ಲಿ ಕೊರೊನಾ ವೈರಸ್ ಪಿಡುಗಿನ ಈಗಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎರಡೂ ದೇಶಗಳು ಸಮಾಲೋಚಿಸಿ ಈ ನಿರ್ಧಾರ ತೆಗೆದುಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದೆ.
'ಕೋವಿಡ್-19ರ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು, ಭಾರತಕ್ಕೆ ಮುಂದಿನ ವಾರ ಬ್ರಿಟನ್ ಪ್ರಧಾನಿಯ ಭೇಟಿಯನ್ನು ಪರಸ್ಪರ ಒಪ್ಪಂದದಂತೆ ಮುಂದೂಡಲಾಗಿದೆ' ಎಂದು ಎಂಇಎ ಹೇಳಿದೆ. ಆದರೆ ಉಭಯ ದೇಶಗಳು ಭಾರತ-ಬ್ರಿಟನ್ ಸಂಬಂಧದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಮುಂದಿನ ದಿನಗಳಲ್ಲಿ ಆನ್ಲೈನ್ ಸಭೆ ನಡೆಸಲಿವೆ ಎಂದು ಅದು ಹೇಳಿದೆ.
ಬೋರಿಸ್ ಜಾನ್ಸನ್ ಅವರು ಭಾರತದ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರವಾಸ ನಿಗದಿಯಾಗಿತ್ತು. ಸ್ವತಃ ಪ್ರಧಾನಿ ಮೋದಿ ಅವರು ಬೋರಿಸ್ ಅವರಿಗೆ ಆಹ್ವಾನ ನೀಡಿದ್ದರು. ಆದರೆ ಬ್ರಿಟನ್ನಲ್ಲಿ ರೂಪಾಂತರಿ ವೈರಸ್ ಸೋಂಕು ಹೆಚ್ಚಿದ್ದ ಕಾರಣ ಅವರು ಈ ಭೇಟಿಯನ್ನು ರದ್ದುಗೊಳಿಸಿದ್ದರು. ಈಗ ಮತ್ತೊಮ್ಮೆ ಪ್ರವಾಸ ಮುಂದೂಡಿಕೆಯಾಗಿದೆ.