ಅರ್ನಬ್ ಗೋಸ್ವಾಮಿ ಚಾನೆಲ್ಗೆ ಬ್ರಿಟನ್ನಲ್ಲಿ 19 ಲಕ್ಷ ರೂ ದಂಡ
ನವದೆಹಲಿ, ಡಿಸೆಂಬರ್ 23: ಅಸಭ್ಯ ಪದ, ದ್ವೇಷಪೂರಿತ ಹೇಳಿಕೆಗಳ ಬಳಕೆಯ ಆರೋಪದಲ್ಲಿ ಅರ್ನಬ್ ಗೋಸ್ವಾಮಿ ಸಂಪಾದಕತ್ವದ ಹಿಂದಿ ಸುದ್ದಿ ವಾಹಿನಿ ರಿಪಬ್ಲಿಕ್ ಭಾರತ್ಗೆ ಬ್ರಿಟನ್ನ ಸಂವಹನ ನಿಯಂತ್ರಕ ಪ್ರಾಧಿಕಾರ 20,000 ಪೌಂಡ್ (ಅಂದಾಜು 19.73 ಲಕ್ಷ) ದಂಡ ವಿಧಿಸಿದೆ.
ಅಸಭ್ಯ ಭಾಷೆ, ದ್ವೇಷಪೂರಿತ ಹೇಳಿಕೆ ಮತ್ತು ನಿಂದನಾತ್ಮಕ ಅಥವಾ ವ್ಯಕ್ತಿ, ಗುಂಪುಗಳು, ಧರ್ಮಗಳು ಅಥವಾ ಸಮುದಾಯಗಳ ಅವಹೇಳನೆಯ ಅಂಶಗಳನ್ನು ಒಳಗೊಂಡ ವಿಚಾರಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಯುನೈಟೆಡ್ ಕಿಂಗ್ಡಮ್ನ ಸಂವಹನ ಕಚೇರಿ ಈ ದಂಡ ವಿಧಿಸಿದೆ. ಇದರ ಜತೆಗೆ ರಿಪಬ್ಲಿಕ್ ಭಾರತ್ ವಾಹಿನಿಯು ತನ್ನ ಚಾನೆಲ್ನಲ್ಲಿ ಕ್ಷಮೆಯನ್ನೂ ಪ್ರಸಾರ ಮಾಡಬೇಕು ಎಂದು ಅದು ಆಗ್ರಹಿಸಿದೆ.
ಅರ್ನಬ್ ಗೋಸ್ವಾಮಿ ಪ್ರಕರಣ: ನ್ಯಾಯಾಂಗಕ್ಕೆ ಸೆಡ್ಡು ಹೊಡೆದ ಮಹಾರಾಷ್ಟ್ರ
ರಿಪಬ್ಲಿಕ್ ಭಾರತ್ ವಾಹಿನಿಯ ಮೇಲಿನ ವಾಗ್ದಂಡನೆಗಳ ವಿವರಗಳನ್ನು ಬಿಡುಗಡೆ ಮಾಡಿರುವ ಸಂವಹನ ಕಚೇರಿ (ಆಫ್ಕಾಮ್), 2019ರ ಸೆಪ್ಟೆಂಬರ್ 6ರಂದು ಪ್ರಸಾರವಾದ 'ಪೂಚ್ತಾ ಹೈ ಭಾರತ್' ಕಾರ್ಯಕ್ರಮದಲ್ಲಿ ಅದನ್ನು ಪ್ರಸ್ತುತ ಪಡಿಸಿದ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಇತರೆ ಅತಿಥಿಗಳು ಪ್ರಸಾರ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದೆ. ಬ್ರಿಟನ್ನಲ್ಲಿ ರಿಪಬ್ಲಿಕ್ ಭಾರತ್ ವಾಹಿನಿ ಪ್ರಸಾರದ ಪರವಾನಗಿಯನ್ನು ಹೊಂದಿರುವ ವರ್ಲ್ಡ್ವೈಡ್ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು 'ಸ್ಕ್ರಾಲ್.ಇನ್' ವರದಿ ಮಾಡಿದೆ. ಮುಂದೆ ಓದಿ.
ಪಾಕಿಸ್ತಾನಕ್ಕೆ ಹೋಲಿಕೆ
'ಭಾರತದ ಚಂದ್ರಯಾನ 2 ಬಾಹ್ಯಾಕಾಶ ಯೋಜನೆಯ ನೌಕೆಯ ಉಡಾವಣೆಗೆ ಸಂಬಂಧಿಸಿದಂತೆ ನಡೆದ ಕಾರ್ಯಕ್ರಮದಲ್ಲಿ, ಭಾರತದ ಬಾಹ್ಯಾಕಾಶ ಸಂಶೋಧನೆಗಳು ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆಗಳನ್ನು ಪಾಕಿಸ್ತಾನಕ್ಕೆ ಹೋಲಿಸಲಾಗಿತ್ತು. ಪಾಕಿಸ್ತಾನವು ಭಾರತವನ್ನು ಗುರಿಯನ್ನಾಗಿಸಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಲಾಗಿತ್ತು' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪಾಕ್ ವಿರುದ್ಧ ದ್ವೇಷ
ಚರ್ಚೆಯ ಪ್ಯಾನೆಲ್ನಲ್ಲಿದ್ದ ಅರ್ನಬ್ ಗೋಸ್ವಾಮಿ ಮತ್ತು ಇತರೆ ಅತಿಥಿಗಳು ನೀಡಿದ ಹೇಳಿಕೆಗಳ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿರುವ ಆಫ್ಕಾಮ್, ಪಾಕಿಸ್ತಾನದ ಜನರ ವಿರುದ್ಧ ದ್ವೇಷಪೂರಿತ, ಅವಹೇಳನಾಕಾರಿ ಪದಗಳನ್ನು ಬಳಸಲಾಗಿದೆ ಮತ್ತು ಪಾಕಿಸ್ತಾನದ ಜನರನ್ನು ಕೀಳಾಗಿ ನೋಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಮೋದಿಯನ್ನು ಹಣಿಯಲು ಸಂಚುಗಾರ ಆಗಬೇಕು, ಮಹಾತ್ಮನಲ್ಲ: ಅರ್ನಬ್ ಹೇಳಿದ್ದ ಮಾತು
ಹುಟ್ಟುವ ಮಗುವೂ ಭಯೋತ್ಪಾದಕ
'ಪಾಕಿಸ್ತಾನದ ವಿಜ್ಞಾನಿಗಳು, ವೈದ್ಯರು, ಅವರ ನಾಯಕರು, ರಾಜಕಾರಣಿಗಳು ಎಲ್ಲರೂ ಭಯೋತ್ಪಾದಕರು. ಅವರ ಕ್ರೀಡಾಪಟುಗಳು ಕೂಡ. ಅಲ್ಲಿನ ಪ್ರತಿ ಮಗುವೂ ಭಯೋತ್ಪಾದಕನಾಗಿದೆ. ನೀವು ಭಯೋತ್ಪಾದನಾ ಜಾಗದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೀರಿ' ಎಂದು ಚರ್ಚೆಯಲ್ಲಿ ಹೇಳಿದ್ದಾರೆ. ಈ ರೀತಿಯ ಟೀಕೆ ಕೀಳುಮಟ್ಟದ್ದು ಎಂದು ಅಭಿಪ್ರಾಯಪಟ್ಟಿದೆ.
ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಾಂಚಂದಾನಿ ಬಂಧನ
'ಪಾಕಿ' ಎನ್ನುವುದು ಜನಾಂಗೀಯ ನಿಂದನೆ
ಚರ್ಚೆಯಲ್ಲಿ ಭಾಗವಹಿಸಿದ್ದ ಅತಿಥಿಗಳಲ್ಲಿ ಒಬ್ಬರಾದ 'ಜನರಲ್ ಸಿನ್ಹಾ' ಅವರು ಪಾಕಿಸ್ತಾನಿಗಳನ್ನು ಭಿಕ್ಷುಕರು ಎಂದು ಲೇವಡಿ ಮಾಡಿದ್ದಲ್ಲದೆ, ಪಾಕಿಸ್ತಾನದ ಮೇಲೆ ಸೇನಾ ದಾಳಿ ನಡೆಸುವ ಬೆದರಿಕೆ ಹಾಕಿದ್ದರು. 'ಪಾಕಿ' ಎಂಬ ಪದ ಬಳಕೆಯು ಜನಾಂಗೀಯ ನಿಂದನೆಯಾಗಿದೆ. ಇದನ್ನು ಬ್ರಿಟನ್ನ ವೀಕ್ಷಕರು ಒಪ್ಪುವುದಿಲ್ಲ. ಪಾಕಿಸ್ತಾನದ ಜನರ ರಾಷ್ಟ್ರೀಯತೆಯ ಕಾರಣಕ್ಕಾಗಿ ಅವರ ವಿರುದ್ಧ ಅಸಹಿಷ್ಣುತೆಯ ದ್ವೇಷ ವ್ಯಕ್ತಪಡಿಸಿ ಇಂತಹ ಹೇಳಿಕೆಗಳನ್ನು ನೀಡಲಾಗಿದೆ ಎಂದು ಅದು ಆರೋಪಿಸಿದೆ.