ಸಿಎಂ ಸ್ಥಾನಕ್ಕೆ ಉದ್ದವ್ ಠಾಕ್ರೆ ರಾಜೀನಾಮೆ: ನಟ ಪ್ರಕಾಶ್ ರಾಜ್ ಟ್ವೀಟ್
ಬೆಂಗಳೂರು, ಜೂನ್ 30: ಹಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ರಾಜಕೀಯ ಪ್ರಹಸನಕ್ಕೆ ಬುಧವಾರ (ಜೂನ್ 29) ರಾತ್ರಿ ಒಂದು ಹಂತಕ್ಕೆ ತೆರೆಬಿದ್ದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಉದ್ದವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ.
ಸದ್ಯದ ರಾಜಕೀಯ ಬಿಜೆಪಿಯ ಲೆಕ್ಕಾಚಾರದಂತೆಯೇ ಸಾಗಿದರೆ ಮತ್ತೊಮ್ಮೆ ದೇವೇಂದ್ರ ಫಡ್ನವೀಸ್ ಸಿಎಂ ಸ್ಥಾನಕ್ಕೆ ಏರುವುದು ಬಹುತೇಕ ಖಚಿತ. ಶಿವಸೇನೆಯ ಮುಕ್ಕಾಲು ಭಾಗ ಶಾಸಕರು ಠಾಕ್ರೆ ಕಾರ್ಯವೈಖರಿಯ ವಿರುದ್ದ ಸಾಗಿದ್ದರೆ, ನಟ ಪ್ರಕಾಶ್ ರಾಜ್ (ರೈ) ಠಾಕ್ರೆ ಪರ ಬ್ಯಾಟ್ ಬೀಸಿದ್ದಾರೆ.
ಸರ್ಕಾರ ರಚನೆಗೂ ಮುನ್ನವೇ ಶಿಂಧೆ-ಬಿಜೆಪಿ ನಡುವೆ ಖಾತೆ ಹಂಚಿಕೆ ಜಟಾಪಟಿ ಆರಂಭ
ಬಿಜೆಪಿಯ ಸಿದ್ದಾಂತದ ವಿರುದ್ದ ಇರುವ ಪ್ರಕಾಶ್ ರಾಜ್ ಮಹಾರಾಷ್ಟ್ರ ರಾಜಕೀಯದ ವಿಚಾರದಲ್ಲಿ ಟ್ವೀಟ್ ಮಾಡಿದ್ದು ಠಾಕ್ರೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಚಾಣಕ್ಯ (ಅಮಿತ್ ಶಾ) ಇಂದು ಲಡ್ಡು ತಿನ್ನುತ್ತಿರಬಹುದು ಆದರೆ, ನಿಮ್ಮ ಪ್ರಾಮಾಣಿಕತೆ ಬಹಳ ದಿನ ಉಳಿಯುತ್ತದೆ ಎಂದು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
"ಸಿಎಂ ಠಾಕ್ರೆ ಅವರೇ ನೀವು ಅತ್ಯುತ್ತಮ ಕೆಲಸವನ್ನು ಮಾಡಿದ್ದೀರಿ.. ರಾಜ್ಯವನ್ನು ತಾವು ಮುನ್ನಡೆಸಿದ ರೀತಿಗೆ ಮಹಾರಾಷ್ಟ್ರದ ಜನತೆ ನಿಮ್ಮ ಪರವಾಗಿ ನಿಲ್ಲುತ್ತಾರೆ ಎನ್ನುವ ನಂಬಿಕೆ ನನಗಿದೆ. ಚಾಣಕ್ಯ ಇಂದು ಲಡ್ಡು ತಿನ್ನುತ್ತಿರಬಹುದು, ಆದರೆ, ನಿಮ್ಮ ಪ್ರಾಮಾಣಿಕತೆ ಹೆಚ್ಚು ಕಾಲ ಉಳಿಯುತ್ತದೆ. ನಿಮಗೆ ಹೆಚ್ಚು ಶಕ್ತಿಯನ್ನೂ ನೀಡಲಿದೆ"ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
ಪ್ರಕಾಶ್ ರಾಜ್ ಅವರ ಈ ಟ್ವೀಟ್ ಸುಮಾರು 1,700 ರಿಟ್ವೀಟ್ ಪಡೆದುಕೊಂಡಿದ್ದು, ಎಂದಿನಂತೆ ಪರ ವಿರೋಧ ಚರ್ಚೆ ಈ ಪೋಸ್ಟ್ ವಿಚಾರದಲ್ಲಿ ನಡೆಯುತ್ತಿದೆ. ಕಂಗನಾ ರಣಾವತ್ ಅವರು ಹಿಂದೆ ಠಾಕ್ರೆ ಬಗ್ಗೆ ನೀಡಿದ್ದ ಹೇಳಿಕೆಯನ್ನು ಟ್ವಿಟ್ಟಿಗರು ಮತ್ತೆ ಎಳೆದು ತಂದು ಹಾಕುತ್ತಿದ್ದಾರೆ.
You did great dear sir @OfficeofUT … and I’m sure people of Maharashtra will stand by you for the way you handled the state.. the Chanakya s may eat laddoos today.. but your genuinity will linger longer .. more power to you.. #justasking
— Prakash Raj (@prakashraaj) June 29, 2022
ಗುರುವಾರವೇ ಬಹುಮತ ಸಾಬೀತುಪಡಿಸಬೇಕು ಎಂಬ ಸುಪ್ರೀಂಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ಉದ್ದವ್ ಠಾಕ್ರೆ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದರು. ಫೇಸ್ಬುಕ್ ಲೈವ್ನಲ್ಲಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ ರಾಜೀನಾಮೆ ಘೋಷಿಸಿದ್ದರು.
Recommended Video