ಅಪನಗದೀಕರಣಕ್ಕೆ ಎರಡು ವರ್ಷ ಮೋದಿ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ
Recommended Video
ಬೆಂಗಳೂರು, ನವೆಂಬರ್ 07: 500, 1000 ನೋಟುಗಳನ್ನು ಕೇಂದ್ರ ಸರ್ಕಾರ ಅಮಾನ್ಯಗೊಳಿಸಿ ನಾಳೆಗೆ ಎರಡು ವರ್ಷಗಳಾಯಿತು. ಹಾಗಾಗಿ ನವೆಂಬರ್ 9ರಂದು ಕಾಂಗ್ರೆಸ್ ಪಕ್ಷವು ಮೋದಿ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
2016 ನವೆಂಬರ್ 08 ರಂದು ರಾತ್ರಿ ಎಂಟು ಗಂಟೆಗೆ ದೂರದರ್ಶನದಲ್ಲಿ ಲೈವ್ ಬಂದಿದ್ದ ಮೋದಿ ಅವರು ಇಂದಿನಿಂದಲೇ 500 ಮತ್ತು 1000 ನೋಟುಗಳು ಮೌಲ್ಯ ಕಳೆದುಕೊಳ್ಳಲಿವೆ ಎಂದಿದ್ದರು. ಕಪ್ಪು ಹಣ ನಿಯಂತ್ರಣಕ್ಕೆ ಈ ನಿರ್ಣಯ ತಳೆಯುತ್ತಿರುವುದಾಗಿ ಹೇಳಿದ್ದರು.
ಹಳೆಯ ನೋಟುಗಳನ್ನು ನಿಗದಿತ ಅವಧಿಯ ಒಳಗಾಗಿ ಬ್ಯಾಂಕಿನಲ್ಲಿ ಜಮಾ ಮಾಡಿ ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳುವಂತೆ ನಿಯಮ ವಿಧಿಸಲಾಗಿತ್ತು. ಅದರಂತೆ ಕೋಟ್ಯಂತರ ಜನ ಬ್ಯಾಂಕಿನ ಮುಂದೆ ಸಾಲುಗಟ್ಟಿ ನಿಂತು ನೋಟು ಬದಲಾವಣೆ ಮಾಡಿಕೊಂಡರು. ಮೋದಿ ಅವರ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಕಾಂಗ್ರೆಸ್, ವಿರೋಧ ಪಕ್ಷಗಳ ವಿರೋಧ
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೇಂದ್ರದ ನಿರ್ಣಯವನ್ನು ವಿರೋಧಿಸಿದ್ದವು. ಅದಕ್ಕೆ ತಕ್ಕಂತೆ ಆರ್ಬಿಐ ಹೊರಡಿಸಿದ್ದ ನೋಟುಗಳಲ್ಲಿ ಶೇ 99% ಗಿಂತಲೂ ಹೆಚ್ಚು ನೋಟುಗಳು ಆರ್ಬಿಐಗೆ ವಾಪಸ್ಸಾಯಿತು ಇದು ಕಪ್ಪು ಹಣ ತಡೆಯುವಲ್ಲಿ ವಿಫಲವಾಯಿತು.
ನೋಟು ರದ್ದತಿಗೆ ಎರಡು ವರ್ಷ
ಇದೀಗ ನೋಟು ರದ್ದತಿಗೆ ಎರಡು ವರ್ಷವಾದ ಕಾರಣ ಕಾಂಗ್ರೆಸ್ ಪಕ್ಷವು ನವೆಂಬರ್ 9 ರಂದು ದೇಶದಾದ್ಯಂತ ಮೋದಿ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ. ನವೆಂಬರ್ 8 ದೀಪಾವಳಿ ಇರುವ ಕಾರಣ ಪ್ರತಿಭಟನೆಯನ್ನು ಒಂದು ದಿನ ತಡವಾಗಿ ಮಾಡಲಾಗುತ್ತಿದೆ.
ಅಪನಗದೀಕರಣದ ಆಘಾತಕ್ಕೆ ಮೊದಲ ವಾರ್ಷಿಕೋತ್ಸವ: ಗೆಲುವೋ, ಸೋಲೋ?!
ಮೂರು ಕಾರಣ ನೀಡಿದ್ದರು ಮೋದಿ
ಈ ಬಗ್ಗೆ ಮಾಹಿತಿ ನೀಡಿರುವ ಮನೀಶ್ ತಿವಾರಿ 'ಎರಡು ವರ್ಷಗಳ ಹಿಂದೆ ಮೋದಿ ಅವರು ನೋಟು ರದ್ಧತಿಗೆ ಮೂರು ಕಾರಣ ನೀಡಿದ್ದರು. ನಕಲಿ ನೋಟುಗಳ ಹಾವಳಿ ತಡೆಯಲು, ಕಪ್ಪು ಹಣ ಹರತರಲು ಮತ್ತು ಭಯೋತ್ಪಾದಕರಿಗೆ ಹಣದ ಹರಿವು ತಡೆಯಲು ಎಂದಿದ್ದರು ಆದರೆ ಅದಾವುದೂ ಸಹ ಸಾಧ್ಯವಾಗಿಲ್ಲ' ಎಂದು ಅವರು ಟೀಕಿಸಿದರು.
ಮೋದಿ ಕ್ಷಮೆ ಕೇಳಬೇಕು
ಎರಡು ವರ್ಷದ ಹಿಂದೆ ಇದ್ದ ನೋಟುಗಳ ಹರಿವಿಗಿಂತಲೂ ಈಗಿನ ಹರಿವು ಹೆಚ್ಚಿದೆ ಎಂದು ಮಾಹಿತಿ ನೀಡಿದ ಅವರು, ಅಪನಗದೀಕರಣ ಮೋದಿ ಅವರ ತುಘಲಕ್ ನಿರ್ಧಾರವಾಗಿತ್ತು, ಇದಕ್ಕೆ ಮೋದಿ ಕ್ಷಮೆ ಕೇಳಬೇಕು ಎಂದು ಹೇಳಿದರು.