ಇತಿಹಾಸದಲ್ಲಿ ಮೊದಲ ಬಾರಿಗೆ ಗಲ್ಲಿಗೆ ಮಹಿಳಾ ಹಂತಕಿಯರು
ನವದೆಹಲಿ, ಆ 15: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಸಹೋದರಿಯರಿಬ್ಬರನ್ನು ಗಲ್ಲಿಗೇರಿಸುವ ಸಿದ್ದತೆಗಳು ಆರಂಭವಾಗಿವೆ.
ಮಹಾರಾಷ್ಟ್ರ ಕೊಲ್ಹಾಪುರದ ರೇಣುಕಾ ಕಿರಣ್ ಶಿಂಧೆ ಮತ್ತು ಸೀಮಾ ಮೋಹನ್ ಗಾವತ್, ದೇಶದಲ್ಲಿ ಗಲ್ಲಿಗೇರಲಿರುವ ಮೊದಲ ಮಹಿಳೆಯರು ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದಾರೆ. (ಕ್ಷಮಾದಾನ ಅರ್ಜಿ ತಿರಸ್ಕೃತ: 6 ಜನರಿಗೆ ಮರಣದಂಡನೆ)
2011ರಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಈ ಸಹೋದರಿಯರು ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ. ಅಲ್ಲದೇ, ಮಹಾರಾಷ್ಟ್ರ ಗೃಹ ಸಚಿವಾಲಯಕ್ಕೆ ಗಲ್ಲಿಗೇರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿ ಭವನ ಸೂಚಿಸಿದೆ.
ಸಹೋದರಿಯರ ಸಂಬಂಧ ಪಟ್ಟವರಿಗೆ ಈ ಬಗ್ಗೆ ಮಾಹಿತಿ ನೀಡುವ ಪ್ರಕ್ರಿಯೆಗೆ ಶನಿವಾರದ (ಆ16) ತನಕ ಕಾಲಾವಕಾಶವಿದ್ದು, ಶನಿವಾರದಂದು ಮಹಾರಾಷ್ಟ್ರ ಸರಕಾರ ಗಲ್ಲಿಗೇರಿಸುವ ದಿನಾಂಕ ಘೋಷಿಸುವ ಸಾಧ್ಯತೆಯಿದೆ.
ಏನಿದು ಘಟನೆ: ಕೊಲ್ಹಾಪುರದ ನರಹಂತಕ ಈ ಸಹೋದರಿಬರಿಬ್ಬರು ತಮ್ಮ ತಾಯಿಯ ಜೊತೆ ಸೇರಿ ಹದಿಮೂರು ಮಕ್ಕಳನ್ನು ಭಿಕ್ಷಾಟನೆಗೆ ದೂಡಿದ್ದರು.
ಹದಿಮೂರು ಮಕ್ಕಳ ಪೈಕಿ ಒಂಬತ್ತು ಮಕ್ಕಳನ್ನು ಅಮಾನುಷವಾಗಿ ಹತ್ಯೆಗೈದಿದ್ದರು. ಈ ನರಹಂತಕಿಯರ ವಿಚಾರಣೆ ನಡೆಸಿದ್ದ ಕೊಲ್ಹಾಪುರದ ಸ್ಥಳೀಯ ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಿಸಿತ್ತು.
ಗಲ್ಲು ಶಿಕ್ಷೆ ಅನಗತ್ಯವಾಗಿ ವಿಳಂಬವಾದರೆ ಅಂಥ ಅಪರಾಧಿಗಳ ಶಿಕ್ಷೆಯನ್ನು ಜೀವಾವದಿ ಶಿಕ್ಷೆಗೆ ಇಳಿಸಬಹುದು ಎಂದು ಇತ್ತೀಚಿಗೆ ಸರ್ವೋಚ್ಚ ನ್ಯಾಯಲಯ ತೀರ್ಪು ನೀಡಿದೆ.
ಪುಣೆಯ ಯರವಾಡ ಜೈಲಿನಲ್ಲಿರುವ ಈ ಇಬ್ಬರು ಸಹೋದರಿಯರು ಈ ಶಿಕ್ಷೆಗೆ ಒಳಪಟ್ಟರೆ ಗಲ್ಲು ಶಿಕ್ಷೆಗೆ ಗುರಿಯಾಗುವ ಪ್ರಥಮ ಮಹಿಳೆಯರಾಗಲಿದ್ದಾರೆ.