ಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿಗೆ ಮೋದಿ ಅಧ್ಯಕ್ಷತೆಯಲ್ಲಿ ಎರಡು ಸಮಿತಿ
ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಆರ್ಥಿಕತೆ ಹಿಂಜರಿತದ ಆತಂಕದಿಂದ ಹೊರಬರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ತಮ್ಮದೇ ಅಧ್ಯಕ್ಷತೆಯಲ್ಲಿ ಎರಡು ಸಂಪುಟ ಸಮಿತಿ ರಚಿಸಿದ್ದಾರೆ. ಆರ್ಥಿಕ ಪ್ರಗತಿ, ಹೂಡಿಕೆ ಹಾಗೂ ಉದ್ಯೋಗದ ಅವಕಾಶ ಹೆಚ್ಚಿಸುವುದು ಈ ಸಮಿತಿಯ ಉದ್ದೇಶ ಆಗಿರುತ್ತದೆ.
ಈ ಸಂಪುಟ ಸಮಿತಿಯಲ್ಲಿ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ ಹಾಗೂ ಪಿಯೂಷ್ ಗೋಯೆಲ್ ಸದಸ್ಯರಾಗಿ ಇರುತ್ತಾರೆ. ಮತ್ತೊಂದು ಹತ್ತು ಸಂಪುಟ ಸದಸ್ಯರ ಸಮಿತಿಯನ್ನು ಉದ್ಯೋಗ ಹಾಗೂ ಕೌಶಲ ಅಭಿವೃದ್ಧಿಗಾಗಿ ರೂಪಿಸಲಾಗುತ್ತದೆ.
ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯೆಲ್, ನರೇಂದ್ರ ಸಿಂಗ್ ತೋಮರ್, ರಮೇಶ್ ಪೋಖ್ರಿಯಾಲ್ 'ನಿಶಾಂಕ್', ಧರ್ಮೇಂದ್ರ ಪ್ರಧಾನ್, ಮಹೇಂದ್ರ ನಾಥ್ ಪಾಂಡೆ, ಸಂತೋಷ್ ಕುಮಾರ್ ಗಂಗ್ವಾರ್, ಹರ್ ದೀಪ್ ಸಿಂಗ್ ಪುರಿ ಸದಸ್ಯರಾಗಿ ಇರುತ್ತಾರೆ.
2018-19ನೇ ಆರ್ಥಿಕ ವರ್ಷದ ಕೊನೆ ತ್ರೈ ಮಾಸಿಕದಲ್ಲಿ ಜಿಡಿಪಿ 5.8ಕ್ಕೆ ಕುಸಿಯುವುದರೊಂದಿಗೆ ಹೊಸ ಸರಕಾರಕ್ಕೆ ಆತಂಕ ಎದುರಾಗಿದೆ. ಒಟ್ಟಾರೆಯಾಗಿ ಕಳೆದ ವರ್ಷ ಇರಿಸಿಕೊಂಡಿದ್ದ ಜಿಡಿಪಿ ಗುರಿ 7.2 ಪರ್ಸೆಂಟ್. ಆದರೆ ಅಂದಾಜು ತಲುಪಿದ್ದು 6.8 ಪರ್ಸೆಂಟ್.
ಆರಂಭದಲ್ಲಿಯೇ ಮೋದಿ ಸರ್ಕಾರಕ್ಕೆ ಎದುರಾಯಿತು ಬೃಹತ್ ಸವಾಲು
ಇನ್ನು ಉದ್ಯೋಗದ ವಿಚಾರಕ್ಕೆ ಬಂದರೆ, ಚುನಾವಣೆ ಮುಗಿದ ನಂತರ ಸರಕಾರವು ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (PLFS) ಬಿಡುಗಡೆ ಮಾಡಿತು. ವಾರ್ಷಿಕ ವರದಿ (2017ರ ಜುಲೈನಿಂದ 2018ರ ಜುಲೈ ತನಕ) ಪ್ರಕಾರ, ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ ಮಟ್ಟವಾದ 6.1 ಪರ್ಸೆಂಟ್ ಇತ್ತು.