ಕೇರಳ ಲಾಕಪ್ ಡೆತ್: ಇಬ್ಬರು ಪೊಲೀಸರಿಗೆ ಮರಣ ದಂಡನೆ
ತಿರುವನಂತಪುರಂ: ಕೇರಳದ 13 ವರ್ಷಗಳ ಹಿಂದಿನ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ದೊರೆತಿದ್ದು ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಪೊಲೀಸ್ ಧಿಕಾರಿಗಳಿಗೆ ಸಿಬಿಐ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಹಾಲಿ ಪೊಲೀಸ್ ಅಧಿಕಾರಿ ಎಸ್.ವಿ. ಶ್ರೀಕುಮಾರ್, ಸಹಾಯಕ ಸಬ್ಇನ್ಸ್ಪೆಕ್ಟರ್ ಆಗಿರುವ ಕೆ. ಜೀತಾ ಕುಮಾರ್ ಅವರಿಗೆ ಕೇರಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಲಾಕಪ್ ಡೆತ್ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಿಸಿದೆ. ಅಷ್ಟೇ ಅಲ್ಲದೆ ಅದರ ಜತೆಗೆ ತಲಾ 2 ಲಕ್ಷ ರೂ ದಂಡ ವಿಧಿಸಿದೆ.
ಮಂಡ್ಯ: ಲಾಕಪ್ ಡೆತ್ ಪ್ರಕರಣ ಮೂವರು ಕಾನ್ಸ್ಟೇಬಲ್ ಅಮಾನತು
ಇತರ ಮೂವರು ಆರೋಪಿಗಳಾದ ಹಾಲಿ ಡಿವೈಎಸ್ಪಿ ಟಿ.ಕೆ. ಹರಿದಾಸ್, ನಿವೃತ್ತ ಎಸ್ಪಿಗಳಾದ ಇ.ಕೆ. ಸಾಬು ಮತ್ತು ಅಜಿತ್ ಕುಮಾರ್ಗೆ ಸಾಕ್ಷ್ಯ ನಾಶ ಮತ್ತು ಸಂಚಿನ ಆರೋಪಗಳಡಿ ಮೂರು ವರ್ಷದ ಜೈಲು ಶಿಕ್ಷೆ ನೀಡಲಾಗಿದೆ.
2005ರ ಸೆಪ್ಟೆಂಬರ್ 27ರಂದು ಗುಜರಿ ಅಂಗಡಿಯ ಕೆಲಸಗಾರ ಉದಯಕುಮಾರ್ (27) ಮತ್ತು ಗೆಳೆಯ ಸುರೇಶ್ನನ್ನು ಪೊಲೀಸರು ಕಳವಿನ ಆರೋಪದ ಮೇಲೆ ವಶಕ್ಕೆ ಪಡೆದಿದ್ದರು. ಅವರ ಬಳಿ ಇದ್ದ 4500 ರೂ.ವನ್ನು ನೋಡಿ ಈ ಶಂಕೆ ಮೂಡಿತ್ತು. ಠಾಣೆಯಲ್ಲಿ ಅದನ್ನು ಕಸಿದುಕೊಳ್ಳಲು ಯತ್ನಿಸಿದಾಗ ಉದಯಕುಮಾರ್ ಪ್ರತಿಭಟಿಸಿದ್ದರು. ಆಗ ಬಿದ್ದ ಹೊಡೆತಗಳೇ ಉದಯಕುಮಾರ್ ಲಾಕಪ್ ಡೆತ್ಗೆ ಕಾರಣವಾಗಿತ್ತು.