ರಾಷ್ಟ್ರಧ್ವಜ ವಿನ್ಯಾಸಕ ಪಿಂಗಳಿ ವೆಂಕಯ್ಯ ಸ್ಮರಿಸಿದ ಟ್ವೀಟ್ ಲೋಕ
ಬೆಂಗಳೂರು, ಆಗಸ್ಟ್ 02: ಡೈಮಂಡ್ ವೆಂಕಯ್ಯ, ಕಾಟನ್ ವೆಂಕಯ್ಯ ಎಂದೆಲ್ಲ ಕರೆಸಿಕೊಂಡಿದ್ದ ರೈತ, ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಟ್ವೀಟ್ ಲೋಕ ತೊಡಗಿದೆ.
ರಾಷ್ಟ್ರಧ್ವಜದ ಬಗ್ಗೆ ಇರುವ ಭಕ್ತಿಭಾವ, ಗೌರವದ ಬಗ್ಗೆ ಟ್ವೀಟ್ ಗಳು ಬಂದಿವೆ. ಭಾರತೀಯದ ಹೆಮ್ಮೆಯ ಧ್ವಜವನ್ನು ವಿನ್ಯಾಸಗೊಳಿಸಿದ ಬೇಜವಾಡ(ವಿಜಯವಾಡ)ದ ಮಚಲಿಪಟ್ಣಂನ ಪಿಂಗಳಿ ವೆಂಕಯ್ಯ ಅವರನ್ನು ಸ್ಮರಿಸಲಾಗುತ್ತಿದೆ.
ಆಗಸ್ಟ್ 2, 1876 ರಲ್ಲಿ ಜನಿಸಿದ ವೆಂಕಯ್ಯ, ಪ್ರಾಥಮಿಕ ಶಿಕ್ಷಣಗಳನ್ನು ಮಚಲಿಪಟ್ಟಣದಲ್ಲಿ ಮುಗಿಸಿ, ನಂತರ ಉನ್ನತ ಶಿಕ್ಷಣಕ್ಕಾಗಿ ಕೋಲಂಬೋಕ್ಕೆ ತೆರಳಿದರು.
ಒಟ್ಟು 30 ದೇಶಗಳ ರಾಷ್ಟ್ರಧ್ವಜಗಳನ್ನು 5 ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ, ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣಧ್ವಜವನ್ನು ವಿನ್ಯಾಸಗೊಳಿಸಿದರು. ಪಿಂಗಳಿ ಅವರು ವಿನ್ಯಾಸಗೊಳಿಸಿದ ಧ್ವಜವನ್ನೇ ಜುಲೈ 22, 1947 ರಲ್ಲಿ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಲಾಯಿತು.
2009 ರಲ್ಲಿ ಇವರಿಗೆ ಗೌರವ ನೀಡುವುದಕ್ಕಾಗಿ, ಇವರ ಭಾವಚಿತ್ರವನ್ನು ಹೊಂದಿದ ಸ್ಟಾಂಪ್ ಅನ್ನೂ ಬಿಡುಗಡೆಮಾಡಲಾಗಿತ್ತು. 1963 ರ ಜುಲೈ 4 ರಂದು ಅವರು ಇಹಲೋಕ ತ್ಯಜಿಸಿದರು.
ಇಂದು ಅವರ ಜನ್ಮ ದಿನ. ಟ್ವಿಟ್ಟಿಗರು ಮರೆಯದೇ ಪಿಂಗಳಿ ಅವರನ್ನು ನೆನಪಿಸಿಕೊಂಡು, ಕೃತಜ್ಞತೆ ಅರ್ಪಿಸಿ ಟ್ವೀಟ್ ಮಾಡಿದ್ದಾರೆ.
ತ್ರಿವರ್ಣ ಧ್ವಜಕ್ಕೆ ಕರಾಚಿಯಲ್ಲಿ ಒಪ್ಪಿಗೆ ಸಿಕ್ಕಿತ್ತು
1931 ಆಗಸ್ಟ್ 6 ರಂದು ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕೇಸರಿ, ಬಿಳಿ, ಹಸಿರು ಧ್ವಜದ ಮಧ್ಯೆ ಚರಕವಿರುವ ಧ್ವಜವನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು. ಜಲಂಧರ್ ನ ಶಿಕ್ಷಣ ತಜ್ಞ ಲಾಲಾ ಹಂಸರಾಜ್ ಅವರು ಕೆಂಪು ಹಸಿರು ವಿನ್ಯಾಸದ ನಂತರ ಆಯ್ಕೆಯಾದ ತ್ರಿವರ್ಣ ಧ್ವಜದಲ್ಲಿ ಚರಕದ ಬದಲಾಗಿ ಅಶೋಕ ಚಕ್ರವನ್ನು ಪರಿಗಣಿಸಲು ಸೂಚಿಸಿದರು. ಸರ್ವಪಳ್ಳಿ ರಾಧಾಕೃಷ್ಣನ್ ತ್ರಿವರ್ಣಕ್ಕೆ ಹೊಸ ಅರ್ಥ ಕಲ್ಪಿಸಿದರು. ಕೇಸರಿ ತ್ಯಾಗ ಮತ್ತು ಬಲಿದಾನ, ಬಿಳಿ ಸತ್ಯ, ಶಾಂತಿ ಮತ್ತು ಶುಭ್ರತೆ, ಹಸಿರು ಸಮೃದ್ಧಿ ಸೌಹಾರ್ದತೆ, ಅಶೋಕ ನ್ಯಾಯ ಧರ್ಮದ ಸಂಕೇತವೆಂದು ಹೊಸ ಭಾಷ್ಯ ಬರೆದರು.
|
ಪಕ್ಷಾತೀತವಾಗಿ ಸಲ್ಲುತ್ತಿದೆ ಗೌರವ
ರಾಷ್ಟ್ರಧ್ವಜ ವಿನ್ಯಾಸಕ ಪಿಂಗಳಿ ವೆಂಕಯ್ಯ ಅವರಿಗೆ ಪಕ್ಷಾತೀತವಾಗಿ ಗೌರವ ಸಲ್ಲಿಕೆಯಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರನಾಗಿ ಪಿಂಗಳಿ ಅವರನ್ನು ಕಾಣಲಾಗುತ್ತಿದ್ದು, ಭೂಗರ್ಭ ಶಾಸ್ತ್ರಜ್ಞ, ಭಾಷಾ ತಜ್ಞ ಕೂಡಾ ಆಗಿದ್ದರು ಎಂದು ಸ್ಮರಿಸಲಾಗಿದೆ.
|
ತ್ಯಾಗ, ಶಾಂತಿ, ಸೌಹಾರ್ದತೆಯ ಪ್ರತೀಕ
ಭಾರತದ ತ್ರಿವರ್ಣ ಧ್ವಜ ತ್ಯಾಗ, ಶಾಂತಿ, ಸೌಹಾರ್ದತೆಯ ಪ್ರತೀಕ. ಅತ್ಯಂತ ಸುಂದರ ವಿನ್ಯಾಸ ನೀಡಿದ ಪಿಂಗಳಿ ವೆಂಕಯ್ಯ ಅವರಿಗೆ ನಮನ.
|
ಸುರೈಯಾ ತಯ್ಯಾಬ್ಜಿ ಅವರ ವಿನ್ಯಾಸ
ಹಾಲಿ ಕೇಸರಿ, ಬಿಳಿ, ಹಸಿರು ಬಣ್ಣದ ವಿನ್ಯಾಸಕ್ಕೂ ಮುನ್ನ ಹಲವು ಧ್ವಜ ಮಾದರಿಯನ್ನು ಬಳಸಲಾಗುತ್ತಿತ್ತು. 1921ರಲ್ಲಿ ಪಿಂಗಳಿ ಅವರು ಕೆಂಪು ಹಾಗೂ ಹಸಿರು ಬಣ್ಣದ ಧ್ವಜ ವಿನ್ಯಾಸ ನೀಡಿದ್ದರು. ಆದರೆ, ಈಗಿರುವ ತ್ರಿವರ್ಣ ಧ್ವಜ ವಿನ್ಯಾಸ ನೀಡಿದ್ದು ಪಿಂಗಳಿ ಅವರಲ್ಲ, ಸುರೈಯಾ ತಯ್ಯಾಬ್ಜಿ ಎಂದು ಟ್ವೀಟ್ ಬಂದಿದೆ.
|
ಕೇಂದ್ರ ಸಚಿವ ಸುರೇಶ್ ಪ್ರಭು
ನಮ್ಮ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ ಪಿಂಗಳಿ ವೆಂಕಯ್ಯ ಅವರನ್ನು ಅವರ ಜಯಂತಿಯಂದು ನೆನಪಿಸಿಕೊಳ್ಳೋಣ ಎಂದು ಕೇಂದ್ರ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.