'ಸತ್ಯಮೇವ ಜಯತೆ': ರಾಹುಲ್ ಗಾಂಧಿ, ಕಾಂಗ್ರೆಸ್ ಟ್ವಿಟ್ಟರ್ ಖಾತೆ ಅನ್ಬ್ಲಾಕ್
ನವದೆಹಲಿ, ಆ. 14: ವಾಯುವ್ಯ ದೆಹಲಿಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಗೆ ಒಳಗಾದ ಒಂಬತ್ತು ವರ್ಷದ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದ ಸಂದರ್ಭದ ಚಿತ್ರಗಳನ್ನು ಪೋಸ್ಟ್ ಮಾಡಿದ್ದ ಹಿನ್ನೆಲೆ ಬಾಲಕಿಯ ಗುರುತು ಬಹಿರಂಗ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕೃತ ಖಾತೆ ಹಾಗೂ ಇತರೆ ನಾಯಕರ ಟ್ವೀಟ್ಟರ್ ಖಾತೆಯನ್ನು ಟ್ವಿಟ್ಟರ್ ಅಮಾನತು ಮಾಡಿತ್ತು. ಇದೀಗ ಇಂದು ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕೃತ ಖಾತೆ ಸೇರಿದಂತೆ ಹಲವು ನಾಯಕರ ಟ್ವಿಟ್ಟರ್ ಖಾತೆಗಳನ್ನು ಅನ್ಬ್ಲಾಕ್ ಮಾಡಲಾಗಿದೆ. ಈ ಹಿನ್ನೆಲೆ ಟ್ವೀಟ್ ಮಾಡಿರುವ ಕಾಂಗ್ರೆಸ್ ''ಸತ್ಯಮೇವ ಜಯತೆ'' ಎಂದಿದೆ.
ಈ ಬೆಳವಣಿಗೆಯು ರಾಹುಲ್ ಗಾಂಧಿ ಮೈಕ್ರೊಬ್ಲಾಗಿಂಗ್ ಸೈಟ್ ಆದ ಟ್ವಿಟ್ಟರ್ ಪಕ್ಷಪಾತ ಮಾಡುತ್ತಿದೆ. ಹಾಗೆಯೇ ಭಾರತದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ ಒಂದು ದಿನದ ನಂತರ ನಡೆದಿದೆ. "ಎಲ್ಲಾ ಕಾಂಗ್ರೆಸ್ ಖಾತೆಗಳನ್ನು ಅನ್ಲಾಕ್ ಮಾಡಲಾಗಿದೆ. ಅನ್ಲಾಕ್ ಮಾಡಲು ಯಾವುದೇ ಕಾರಣವನ್ನು ಟ್ವಿಟರ್ ನೀಡಿಲ್ಲ," ಎಂದು ಸಾಮಾಜಿಕ ಮಾಧ್ಯಮ ಖಾತೆಗಳ ಕಾಂಗ್ರೆಸ್ ಉಸ್ತುವಾರಿ ರೋಹನ್ ಗುಪ್ತಾ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರ ಫೋಟೋ ಇದ್ದ ರಾಹುಲ್ ಟ್ವೀಟ್ ತೆಗೆದು ಹಾಕಿದ ಟ್ವಿಟ್ಟರ್
ಈ ಹಿಂದೆ, ವರದಿಯಾದ ಪ್ರಕಾರ ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರ ಚಿತ್ರಗಳನ್ನು ಹಂಚಿಕೊಳ್ಳುವುದು ಅದರ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಟ್ವಿಟ್ಟರ್ ಪರಿಗಣಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಮಾಜಿ ಕಾಂಗ್ರೆಸ್ ಮುಖ್ಯಸ್ಥರು, ಟ್ವಿಟ್ಟರ್ ವಿರುದ್ದ ವಾಕ್ ಪ್ರಹಾರ ನಡೆಸಿದ್ದರು. ಹಾಗೆಯೇ ಟ್ವಿಟ್ಟರ್ ಕಾಂಗ್ರೆಸ್ ನಾಯಕರುಗಳ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಿರುವುದು "ದೇಶದ ಪ್ರಜಾಪ್ರಭುತ್ವ ರಚನೆಯ ಮೇಲೆ ದಾಳಿ" ಎಂದು ಹೇಳಿದರು.
"ಟ್ವಿಟ್ಟರ್ನ ಅಪಾಯಕಾರಿ ಆಟ" ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೋ ಹೇಳಿಕೆಯಲ್ಲಿ ರಾಹುಲ್ ಗಾಂಧಿ, ಮೈಕ್ರೋಬ್ಲಾಗಿಂಗ್ ತಾಣವು ತಟಸ್ಥ ಮತ್ತು ವಸ್ತುನಿಷ್ಠ ವೇದಿಕೆಯಲ್ಲ ಮತ್ತು "ಸರ್ಕಾರಕ್ಕೆ ಬದ್ಧವಾಗಿದೆ" ಎಂದು ಆರೋಪಿಸಿದ್ದಾರೆ. ಟ್ವಿಟ್ಟರ್ ತನ್ನ ಖಾತೆಯನ್ನು ಲಾಕ್ ಮಾಡಿದ್ದನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, "ಟ್ಟಿಟ್ಟರ್ ಲಕ್ಷಾಂತರ ಫಾಲೋವರ್ಗಳ ಅಭಿಪ್ರಾಯದ ಹಕ್ಕನ್ನು ಅನ್ಯಾಯವಾಗಿ ನಿರಾಕರಿಸಿದ್ದಾರೆ," ಎಂದು ಹೇಳಿದರು. "ಟ್ವಿಟರ್ ವಾಸ್ತವವಾಗಿ ಒಂದು ತಟಸ್ಥ, ವಸ್ತುನಿಷ್ಠ ವೇದಿಕೆಯಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಇದು ಪಕ್ಷಪಾತದ ವೇದಿಕೆಯಾಗಿದೆ. ಇದು ಆ ದಿನದ ಸರ್ಕಾರ ಹೇಳುವುದನ್ನು ಕೇಳುತ್ತದೆ," ಎಂದು ಗಂಭೀರ ಆರೋಪ ಮಾಡಿದ್ದರು.
ರಣದೀಪ್ ಸುರ್ಜೇವಾಲಾ ಸೇರಿ ಕಾಂಗ್ರೆಸ್ನ 5 ಹಿರಿಯ ನಾಯಕರ ಟ್ವಿಟ್ಟರ್ ಲಾಕ್
ಫೋಟೋ ಹಾಕಿದ್ದಕ್ಕೆ ನನ್ನ ಅಭ್ಯಂತರವಿಲ್ಲ ಎಂದ ಸಂತ್ರಸ್ತೆಯ ತಾಯಿ
''ಯಾವುದೇ ಟ್ವೀಟ್ ಅಥವಾ ಫೋಟೋ ಹಾಕುವುದಕ್ಕೆ ನಮ್ಮ ವಿರೋಧವಿಲ್ಲ,'' ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ರಾಹುಲ್ ಗಾಂಧಿ ಸಂತ್ರಸ್ತೆಯ ಹೆತ್ತವರ ಚಿತ್ರವನ್ನು ಟ್ವೀಟ್ ಮಾಡಿದ ನಂತರ ಟ್ವಿಟರ್ನಲ್ಲಿ ವಿವಾದ ಭುಗಿಲೆದ್ದ ಹಿನ್ನೆಲೆ ಸಂತ್ರಸ್ತೆಯ ತಾಯಿ ಈ ಹೇಳಿಕೆಯನ್ನು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಿದ ನಂತರ 5 ಮಂದಿ ಕಾಂಗ್ರೆಸ್ ಹಿರಿಯ ನಾಯಕರ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಲಾಗಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಅಜಯ್ ಮಾಕೆನ್, ಮಾಣಿಕ್ಕಂ ಟಾಗೋರ್, ಜಿತೇಂದ್ರ ಸಿಂಗ್, ಸುಶ್ಮಿತಾ ದೇವ್ ಅವರ ಟ್ವಿಟ್ಟರ್ ಲಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ಗುರುವಾರ ತಿಳಿಸಿತ್ತು.
Satyameva Jayate
— Congress (@INCIndia) August 14, 2021
'ಭಾರತದ ರಾಜಕೀಯದಲ್ಲಿ ಟ್ವಿಟ್ಟರ್ ಹಸ್ತಕ್ಷೇಪ': ತನ್ನ ಖಾತೆ ನಿರ್ಬಂಧಕ್ಕೆ ರಾಹುಲ್ ಕಿಡಿ
ಈ ನಡುವೆ ಕಾಂಗ್ರೆಸ್ ಜೊತೆಗಿನ ಘರ್ಷಣೆಯ ಹಿನ್ನೆಲೆಯಲ್ಲಿ, ಟ್ವಿಟ್ಟರ್ ತನ್ನ ಭಾರತದ ಮುಖ್ಯಸ್ಥ ಮನೀಶ್ ಮಾಹೇಶ್ವರಿಯನ್ನು ವರ್ಗಾವಣೆ ಮಾಡಿದೆ. ಮಹೇಶ್ವರಿ ವಿರುದ್ದ ದ್ವೇಷದ ಅಪರಾಧದ ವಿಡಿಯೋ ವಿಚಾರದಲ್ಲಿ ತನಿಖೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನು ಕಂಪನಿಯು ಈ ಬದಲಾವಣೆಗೆ ಯಾವುದೇ ಕಾರಣವನ್ನು ನಿರ್ದಿಷ್ಟಪಡಿಸದಿದ್ದರೂ, ಮಹೇಶ್ವರಿ ಹಿರಿಯ ನಿರ್ದೇಶಕರಾಗಿ (ರೆವೆನ್ಯೂ ಸ್ಟ್ರಾಟಜಿ ಮತ್ತು ಆಪರೇಷನ್ಸ್) ಯುಎಸ್ಗೆ ತೆರಳುತ್ತಾರೆ ಮತ್ತು ಹೊಸ ಪಾತ್ರದಲ್ಲಿ ಹೊಸ ಮಾರುಕಟ್ಟೆಗಳತ್ತ ಗಮನ ಹರಿಸುತ್ತಾರೆ," ಎಂದಷ್ಟೇ ಹೇಳಿಕೊಂಡಿದೆ.
(ಒನ್ಇಂಡಿಯಾ ಸುದ್ದಿ)