ನೂತನ ಐಟಿ ನಿಯಮ ಪಾಲನೆಗೆ ಸರ್ಕಾರದ ಬಳಿ ಸಮಯಾವಕಾಶ ಕೋರಿದ ಟ್ವಿಟ್ಟರ್
ನವದೆಹಲಿ, ಜೂ.08: ಸಾಮಾಜಿಕ ಜಾಲತಾಣ ಭಾರತದ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸಲು ಸರ್ಕಾರದ ಬಳಿ ಹೆಚ್ಚಿನ ಸಮಯಾವಕಾಶ ಕೋರಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಮೈಕ್ರೋ-ಬ್ಲಾಗಿಂಗ್ ಸೈಟ್ ನಿಯಮಗಳನ್ನು ಪಾಲಿಸಲು ಉದ್ದೇಶಿಸಿದೆ. ಆದರೆ ಭಾರತದಲ್ಲಿನ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಹೇಳಿದೆ.
ಈ ಬಗ್ಗೆ ಪಿಟಿಐಗೆ ಮಾಹಿತಿ ನೀಡಿರುವ ಮೂಲಗಳು, "ಐಟಿ ನಿಯಮಗಳನ್ನು ಅನುಸರಿಸಲು ಹೆಚ್ಚಿನ ಸಮಯವನ್ನು ಕೋರಿ ಟ್ವಿಟ್ಟರ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಮ್ಇಐಟಿವೈ) ಪತ್ರ ಬರೆದಿದೆ. ಟ್ವಿಟ್ಟರ್ ನಿಯಮಗಳನ್ನು ಪಾಲಿಸುವ ಉದ್ದೇಶವನ್ನು ವ್ಯಕ್ತಪಡಿಸಿದೆ. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಹೊಸ ನಿಯಮ ಪಾಲನೆ ಮಾಡಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ" ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಕಳೆದ ವಾರ ಹೊಸ ಐಟಿ ನಿಯಮ ಪಾಲಿಸದ ಕಂಪನಿಗಳ ಬಗ್ಗೆ ಸರ್ಕಾರ ಟೀಕೆ ಮಾಡಿದ ನಂತರ ಟ್ವಿಟರ್ನಿಂದ ಈ ಪ್ರತಿಕ್ರಿಯೆ ಬಂದಿದೆ.
ಟ್ವಿಟ್ಟರ್ಗೆ ಕೊನೆಯ ಎಚ್ಚರಿಕೆ ನೋಟಿಸ್ ನೀಡಿದ ಕೇಂದ್ರ ಸರ್ಕಾರ
ಇನ್ನು ಟ್ವಿಟರ್ನ ವಕ್ತಾರರು, "ಟ್ವಿಟರ್ ಭಾರತದ ನಿಯಮಗಳಿಗೆ ಬದ್ಧವಾಗಿದೆ. ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ನಾವು ಭಾರತ ಸರ್ಕಾರಕ್ಕೆ ಭರವಸೆ ನೀಡಿದ್ದೇವೆ. ನಮ್ಮ ಪ್ರಗತಿಯ ಬಗ್ಗೆ ಒಂದು ಅವಲೋಕನವನ್ನು ಶೀಘ್ರವೇ ಹಂಚಿಕೊಳ್ಳುತ್ತೇವೆ. ನಾವು ಭಾರತ ಸರ್ಕಾರದೊಂದಿಗೆ ನಮ್ಮ ರಚನಾತ್ಮಕ ಚರ್ಚೆ ಮುಂದುವರೆಸುತ್ತೇವೆ" ಎಂದು ಹೇಳಿದ್ದಾರೆ.
ತನ್ನ ಸೂಚನೆಯಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿಯಮಗಳನ್ನು ಅನುಸರಿಸಲು ಟ್ವಿಟ್ಟರ್ ನಿರಾಕರಿಸಿ ಮೈಕ್ರೋ ಬ್ಲಾಗಿಂಗ್ ಸೈಟ್ನ "ಬದ್ಧತೆ ಮತ್ತು ಭಾರತದ ಜನರಿಗೆ ಸುರಕ್ಷಿತ ಅನುಭವವನ್ನು ತನ್ನ ವೇದಿಕೆಯಲ್ಲಿ ಒದಗಿಸುವ ಪ್ರಯತ್ನಗಳ ಕೊರತೆ" ಯನ್ನು ತೋರಿಸಿದೆ ಎಂದು ಹೇಳಿತ್ತು. ಹಾಗೆಯೇ "ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಟ್ವಿಟರ್ ಭಾರತದ ಜನರಿಗೆ ವೇದಿಕೆಯಲ್ಲಿ ತಮ್ಮ ಸಮಸ್ಯೆಗಳನ್ನು ಸಮಯೋಚಿತ ಮತ್ತು ಪಾರದರ್ಶಕ ರೀತಿಯಲ್ಲಿ ಮತ್ತು ನ್ಯಾಯಯುತ ಪ್ರಕ್ರಿಯೆಗಳ ಮೂಲಕ ಪರಿಹರಿಸಲು ಅನುವು ಮಾಡಿಕೊಡುವ ಯಾಂತ್ರಿಕ ವ್ಯವಸ್ಥೆಯನ್ನು ರಚಿಸಲು ನಿರಾಕರಿಸಿದೆ ಎಂದು ನಂಬಲು ಸಾಧ್ಯವಿಲ್ಲ" ಎಂದು ಸಚಿವಾಲಯ ಹೇಳಿದೆ.
ಕೊರೊನಾ ಲಸಿಕೆ ಕೊರತೆ ನಡುವೆ ಟ್ವಿಟ್ಟರ್ ನೀಲಿ ಗುರುತಿಗಾಗಿ ಕಾದಾಟ!
ಕಳೆದ ತಿಂಗಳು ಜಾರಿಗೆ ಬಂದ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹೊಸ ಐಟಿ ನಿಯಮಗಳು ಫೇಸ್ಬುಕ್ ಮತ್ತು ಟ್ವಿಟರ್ನಂತಹ ದೊಡ್ಡ ಪ್ಲ್ಯಾಟ್ಫಾರ್ಮ್ಗಳು ಕೆಲವು ನಿಯಮಗಳನ್ನು ಪಾಲಿಸುವಂತೆ ಆದೇಶಿಸುತ್ತದೆ. ಈ ವಿಚಾರದಲ್ಲಿ ಸರ್ಕಾರ ಸಂಸ್ಥೆಗಳಿಗೆ ನೊಟೀಸ್ ನೀಡಿದೆ. ಇನ್ನು ಈಗಾಗಲೇ ವಾಟ್ಸಾಪ್ ಈ ನೂತನ ನಿಯಮದಿಂದ ಜನರ ಗೌಪ್ಯತೆಗೆ ಧಕ್ಕೆ ಉಂಟಾಗುತ್ತದೆ ಎಂದು ಕೋರ್ಟ್ ಮೆಟ್ಟಿಲೇರಿದೆ.
ನಿಯಮಗಳ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವವರು ಕುಂದುಕೊರತೆ ನಿವಾರಿಸುವ ಓರ್ವ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಿಸಬೇಕಿದೆ. ಅಷ್ಟೇ ಅಲ್ಲದೇ ಈ ಮೂವರು ಅಧಿಕಾರಿಗಳು ಭಾರತದ ನಿವಾಸಿಗಳಾಗಿರಬೇಕು. ಇದಲ್ಲದೆ, ಸಾಮಾಜಿಕ ಮಾಧ್ಯಮ ಕಂಪನಿಗಳು ಫ್ಲ್ಯಾಗ್ ಮಾಡಿದ ವಿಷಯವನ್ನು 36 ಗಂಟೆಗಳಲ್ಲಿ ತೆಗೆದುಹಾಕಬೇಕಾಗುತ್ತದೆ. ನಗ್ನತೆ ಮತ್ತು ಅಶ್ಲೀಲತೆಯಂತಹ ಪೋಸ್ಟ್ಗಳನ್ನು ಫ್ಲ್ಯಾಗ್ ಮಾಡಲಾದರೆ ಅದನ್ನು 24 ಗಂಟೆಗಳ ಒಳಗೆ ತೆಗೆದುಹಾಕಬೇಕಾಗುತ್ತದೆ.
ಸಚಿವಾಲಯದ ಸೂಚನೆಯ ಪ್ರಕಾರ, ಮೇ 26, 2021 ರಿಂದ ಈ ನಿಯಮ ಜಾರಿಗೆ ಬಂದರೂ, ಟ್ವಿಟ್ಟರ್ ನಿಯಮಗಳನ್ನು ಪಾಲಿಸದ ಕಾರಣ ಪರಿಣಾಮಗಳು ಎದುರಿಸಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿತ್ತು. ಹಾಗೆಯೇ ಕೇಂದ್ರ ಸರ್ಕಾರವು ಮೇ 26ರಿಂದ ಅನ್ವಯವಾಗುವಂತೆ ರೂಪಿಸಲಾಗಿರುವ ನೂತನ ಐಟಿ ನಿಯಮಯನ್ನು ಟ್ವಿಟ್ಟರ್ ಕೂಡಲೇ ಪಾಲಿಸಬೇಕು, ಇಲ್ಲವಾದರೆ ನೂತನ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಹೇಳಿತ್ತು.
ಮೋಹನ್ ಭಾಗವತ್ ಸೇರಿ ಹಲವು RSS ನಾಯಕರ ಟ್ವಿಟ್ಟರ್ನಲ್ಲೂ ಬ್ಲ್ಯೂಟಿಕ್ ಕಾಣೆ
ಈ ನಡುವೆ ಸಾಮಾಜಿಕ ಜಾಲತಾಣ ಫೇಸ್ಬುಕ್ ಭಾರತದ ಕುಂದುಕೊರತೆ ನಿವಾರಣೆ ಅಧಿಕಾರಿಯಾಗಿ ಸ್ಪೂರ್ತಿ ಪ್ರಿಯಾ ಎಂಬವರನ್ನು ನೇಮಿಸಿದೆ. ಈ ಬಗ್ಗೆ ಕಂಪನಿ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ಇನ್ನು ಇತ್ತೀಚೆಗೆ ಟ್ವೀಟರ್ನಲ್ಲಿ ಹಲವು ನಾಯಕರ ಖಾತೆಯಿಂದ ಬ್ಲೂಟಿಕ್ ಮಾಯವಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈಯಕ್ತಿಕ ಟ್ವಿಟ್ಟರ್ ಖಾತೆಯಿಂದ ಬ್ಲ್ಯೂ ಟಿಕ್ ಮಾರ್ಕ್ ತೆಗೆದು ಹಾಕಿ ಕೆಲವೇ ಗಂಟೆಗಳ ಬಳಿಕ ಮತ್ತೆ ಟಿಕ್ ಮಾರ್ಕ್ ಕಾಣಿಸಿಕೊಂಡಿತ್ತು. ಜುಲೈ 2020ರಿಂದ ಅವರ ವೈಯಕ್ತಿಕ ಟ್ವಿಟ್ಟರ್ ಖಾತೆ ಸಕ್ರಿಯವಾಗಿರಲಿಲ್ಲ ಎನ್ನುವ ಕಾರಣಕೊಟ್ಟು ಟ್ವಿಟ್ಟರ್ ಬ್ಲ್ಯೂ ಟಿಕ್ ಮಾರ್ಕ್ ತೆಗೆದುಹಾಕಿತ್ತು. ಆ ಬಳಿಕ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಸೇರಿ ಹಲವು ಆರ್ಎಸ್ಎಸ್ ನಾಯಕರ ಟ್ವಿಟ್ಟರ್ ಖಾತೆಯಲ್ಲೂ ಬ್ಲ್ಯೂಟಿಕ್ ತೆಗೆಯಲಾಗಿತ್ತು. ಆರ್ಎಸ್ಎಸ್ನ ಪ್ರಮುಖ ಮುಖಂಡರಾದ ಮೋಹನ್ ಭಾಗವತ್, ಸುರೇಶ್ ಜೋಶಿ, ಅರುಣ್ ಕುಮಾರ್, ಕೃಷ್ಣನ್ ಗೋಪಾಲ್ ಮತ್ತಿತರರ ವೈಯಕ್ತಿಕ ಟ್ವಿಟರ್ ಖಾತೆಗೆ ಇದ್ದ ಬ್ಲ್ಯೂಟಿಕ್ಗಳು ಕಾಣೆಯಾಗಿತ್ತು. ಈ ವಿಚಾರದಲ್ಲೂ ಅದೇ ಕಾರಣವನ್ನು ಆರ್ಎಸ್ಎಸ್ ನೀಡಿತ್ತು. ಈಗ ಮತ್ತೆ ಈ ಖಾತೆಗಳಲ್ಲಿ ಬ್ಲೂಟಿಕ್ ಕಾಣಿಸಿಕೊಂಡಿದೆ.
(ಒನ್ಇಂಡಿಯಾ ಸುದ್ದಿ)