ಲಾಲೂಗೆ ಜೈಲು : ವ್ಯಂಗ್ಯ, ಹಾಸ್ಯ, ಭರಪೂರ ವಿಡಂಬನೆ
ರಾಂಚಿ, ಜನವರಿ 06: ಹಲವು ದಿನಗಳಿಂದ ಸತತ ಮುಂದೂಡಲ್ಪಡುತ್ತಿದ್ದ ಮೇವು ಹಗರಣದ ಆರೋಪಿಗಳ ಶಿಕ್ಷೆಯ ಪ್ರಮಾಣ ಪ್ರಕಟಣೆ ಇಂದು ಹೊರಬಿದ್ದಿದೆ. ಆರ್ ಜೆಡಿ ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ 3.5 ವರ್ಷ ಜೈಲು ಶಿಕ್ಷೆ ಮತ್ತು 5 ವರ್ಷ ದಂಡ ವಿಧಿಸಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಆದೇಶ ಹೊರಡಿಸುತ್ತಿದ್ದಂತೆಯೇ ಇತ್ತ ಟ್ವಿಟ್ಟರ್ ನಲ್ಲಿ ಹಲವರು ವ್ಯಂಗ್ಯೋಕ್ತಿಯ ಮಳೆ ಸುರಿಸುತ್ತಿದ್ದಾರೆ.
ಹಲವರು ತೀರ್ಪನ್ನು ಸ್ವಾಗತಿಸಿದ್ದರೆ ಕೆಲವರು, ಕೇವಲ ಮೇವು ಹಗರಣ ಮಾತ್ರವಲ್ಲ, ಈ ದೇಶದಲ್ಲಿ ನಡೆದ ಎಲ್ಲಾ ಹಗರಣಗಳ ಕುರಿತೂ ನ್ಯಾಯಾಲಯ ಹೀಗೇ ತೀರ್ಪು ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮೇವು ಪ್ರಕರಣ: ಲಾಲೂ ಪ್ರಸಾದ್ ಯಾದವ್ ಗೆ 3.5 ವರ್ಷ ಜೈಲು
ರಾಂಚಿ ನ್ಯಾಯಾಲಯದಿಂದ ಲಾಲೂ ಜಾಮೀನು ಪಡೆಯಲೂ ಸಾಧ್ಯವಾಗದ ಕಾರಣ ಅವರು ಜಾಮೀನಿಗೆ ಹೈಕೋರ್ಟ್ ಮೊರೆಹೋಗಬೇಕಾದ ಸಂಕಷ್ಟದಲ್ಲಿದ್ದಾರೆ. ಒಟ್ಟಿನಲ್ಲಿ ಉಪ್ಪು ತಿಂದವನು ನೀರು ಕುಡಿಯುತ್ತಾನೋ ಬಿಡುತ್ತಾನೋ, ಮೇವು ತಿಂದವರಂತೂ ಜೈಲಿನಲ್ಲಿ ರಾಗಿ ಬೀಸೋದು ಅನಿವಾರ್ಯವಾದಂತಾಗಿದೆ!
|
ಈ ಲೆಕ್ಕವನ್ನು ದನಗಳೂ ಇಷ್ಟಪಡೋಲ್ಲ!
ಸೋ... 1997ರಲ್ಲಿ 985 ಕೋಟಿ ರೂ. = 2018 ರಲ್ಲಿ 5 ಲಕ್ಷ ರೂ.+3.5 ವರ್ಷ ಜೈಲು!
ಬಹುಶಃ ತಮ್ಮ ಮೇವಿನ ಬಗ್ಗೆ ಈ ಲೆಕ್ಕವನ್ನು ಸ್ವತಃ ದನಗಳೂ ಒಪ್ಪಿಕೊಳ್ಳೋಲ್ಲ ಎಂದು ಸಿರ್ಫ್ ತುಮಾರಿ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ಮಾಡಿದ್ದುಣ್ಣೋ ಮಾರಾಯ!
'ಕರ್ಮ ಯಾವಾಗಲೂ ನಮ್ಮನ್ನು ಅನುಸರಿಸುತ್ತದೆ.. ಅದಕ್ಕೆಂದೇ ಹೇಳೋದು ಒಳ್ಳೆಯ ಕೆಲಸ ಮಾಡಿ ಅಂತ' ಎಂದಿದ್ದಾರೆ ಚೇತನ್ ಎಂ.ಆರ್.
|
ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿಲ್ಲ!
ಲಾಲೂ ಪ್ರಸಾದ್ ಅವರಿಗೆ ಇಷ್ಟು ಕಡಿಮೆ ವರ್ಷ ಶಿಕ್ಷೆ ಸಾಕೇ? ಸಾವಿರಾರು ಕೋಟಿ ರೂ. ಹಣದ ಕತೆಯೇನು? ಅದನ್ನು ಯಾರು ಹಿಂದಿರುಗಿಸುತ್ತಾರೆ? 25 ವರ್ಷದ ನಂತರ ಇಂಥ ತೀರ್ಪು ನೀಡಿದ್ದೇಕೆ? ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ ಎನ್ನುತ್ತಾರೆ ಅಭಯ್ ಸುರ್ಪುಕರ್
|
ಅವರ ಆಸ್ತಿಯನ್ನೆಲ್ಲ ಜಫ್ತಿಮಾಡಿ!
ಇದು ಅತ್ಯಂತ ಕನಿಷ್ಠ ಶಿಕ್ಷೆ. ಅವರ ಮಾಡಿದ ನೂರಾರು ಕೋಟಿ ರೂ. ಮೋಸಕ್ಕೆ ಇಷ್ಟು ಕಡಿಮೆ ಶಿಕ್ಷೆ ಸಾಕೆ? ಮೊದಲು ಅವರ ಎಲ್ಲಾ ಆಸ್ತಿಯನ್ನೂ ಜಫ್ತಿಮಾಡಿ. ಇದು ನ್ಯಾಯಾಂಗದ ವಿಡಂಬನೆ. ಇದು ನ್ಯಾಯವಲ್ಲ.ಸಾಮಾನ್ಯ ಜನರಿಗೆ ನ್ಯಾಯಾಂಗದ ಬಗ್ಗೆ ವಿಶ್ವಾಸ ಹೇಗುಳಿಯುತ್ತದೆ?
|
ರಾಂಚಿ ಜೈಲು ಐಷಾರಾಮಿಯಾಗಿದೆ!
ರಾಂಚಿ ಜೈಲು ಐಷಾರಾಮಿಯಾಗಿದೆ. ಯಾರಿಗೆ ಗೊತ್ತು ಮುಂದೊಮ್ಮೆ ತಾವೇ ಅಲ್ಲಿರಬೇಕಾಗುತ್ತದೆ ಎಂದು ಲಾಲೂ ಪ್ರಸಾದೇ ಅದನ್ನು ಐಷಾರಾಮಿಯಾಗಿ ಮಾಡಿಸಿರಬೇಕು ಎಂದು ಮೊಟಕಿದ್ದಾರೆ ಖುಷ್ಬೂ
|
ಇದು ಲಾಲೂ ಪ್ರಸಾದ್ ಗೆಲುವು!
ಮೊದಲನೇ ಮೇವು ಹಗರಣಕ್ಕೆ 5 ವರ್ಷ ಶಿಕ್ಷೆ 25 ಲಕ್ಷ ದಂಡ. ಎರಡನೆಯದಕ್ಕೆ ಮೂರೂವರೆ ವರ್ಷ ಶಿಕ್ಷೆ, ಐದು ಲಕ್ಷ ದಂಡ. ಇದು ನಿಜಕ್ಕೂ ಲಾಲೂ ಪ್ರಸಾದ್ ಯಾದವ್ ಅವರಿಗೆ ನೈತಿಕ ಗೆಲುವು. ಇದರೊಟ್ಟಿಗೆ ಮತ್ತಷ್ಟು ಮೇವು ಹಗರಣಗಳು ಇನ್ನೂ ನ್ಯಾಯಾಲಯದಲ್ಲೇ ಭದ್ರವಾಗಿವೆ.