ಹೊಸ ಐಟಿ ನಿಯಮ ಪಾಲಿಸದೆ ಭಾರತದಲ್ಲಿ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡ ಟ್ವಿಟ್ಟರ್
ನವದೆಹಲಿ, ಜೂ.16: ನೂತನ ಐಟಿ ನಿಯಮಗಳನ್ನು ಅನುಸಾರವಾಗಿ ಶಾಸನಬದ್ಧ ಅಧಿಕಾರಿಗಳನ್ನು ನೇಮಕ ಮಾಡಲು ವಿಫಲವಾದ ಕಾರಣ ಟ್ವಿಟ್ಟರ್ ಭಾರತದಲ್ಲಿ ತನ್ನ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸಚಿವಾಲಯದ ಹಲವು ಬಾರಿ ಸೂಚನೆ ನೀಡಿದರೂ ಟ್ವಿಟ್ಟರ್ ನಿಯಮಗಳನ್ನು ಪಾಲಿಸಲಿಲ್ಲ. ಸಾಮಾಜಿಕ ಮಾಧ್ಯಮ ವೇದಿಕೆಯ ಮಧ್ಯವರ್ತಿ ಸ್ಥಾನಮಾನವನ್ನು ತೆಗೆದುಹಾಕಲು ಯಾವುದೇ ಆದೇಶ ಹೊರಡಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಟ್ವಿಟರ್ ಮಂಗಳವಾರ ಭಾರತ ಸರ್ಕಾರದ ಹೊಸ ಐಟಿ ನಿಯಮಗಳನ್ನು ಪಾಲಿಸಿದೆ ಹಾಗೂ ಮಧ್ಯಂತರವಾಗಿ ಅಧಿಕಾರಿಯನ್ನು ನೇಮಿಸಿದೆ ಎಂದು ಹೇಳಿಕೊಂಡಿದೆ.
ಟ್ವಿಟ್ಟರ್ಗೆ ಕೊನೆಯ ಎಚ್ಚರಿಕೆ ನೋಟಿಸ್ ನೀಡಿದ ಕೇಂದ್ರ ಸರ್ಕಾರ
ಈ ಬಗ್ಗೆ ಇಂಡಿಯಾ ಟುಡೆಗೆ ಮಾಹಿತಿ ನೀಡಿದ ವಕ್ತಾರರು, "ನಾವು ಪ್ರಕ್ರಿಯೆಯ ಪ್ರತಿಯೊಂದು ಹಂತದ ಪ್ರಗತಿಯನ್ನು ತಿಳಿಸುತ್ತಿದ್ದೇವೆ. ಮಧ್ಯಂತರ ಮುಖ್ಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಈ ವಿಚಾರವನ್ನು ಶೀಘ್ರದಲ್ಲೇ ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುವುದು. ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟ್ಟರ್ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸಿದೆ," ಎಂದು ತಿಳಿಸಿದ್ದಾರೆ.
ಕಾನೂನಾತ್ಮಕ ರಕ್ಷಣೆ ಎಂದರೇನು?
'ಮಧ್ಯವರ್ತಿ' ಸ್ಥಾನಮಾನವು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ನಿರ್ವಹಿಸುವ ಯಾವುದೇ ಮೂರನೇ ವ್ಯಕ್ತಿಯ ಡೇಟಾದ ಮೇಲೆ ಹೊಣೆಗಾರಿಕೆಗಳಿಂದ ವಿನಾಯಿತಿ ನೀಡುತ್ತದೆ. ಸಾಮಾಜಿಕ ಮಾಧ್ಯಮ ಕಾನೂನು ವ್ಯಾಪ್ತಿ ಅಥವಾ ಕಾನೂನಾತ್ಮಕ ರಕ್ಷಣೆ ಕಳೆದುಕೊಳ್ಳುವ ಪರಿಣಾಮಗಳು ಗಂಭೀರವಾಗಿದೆ. ಟ್ವಿಟ್ಟರ್ ಕಾನೂನಿನ ನಿಬಂಧನೆಗಳಿಗೆ ಒಳಗೊಳ್ಳದಿದ್ದರೆ ಅಂದರೆ ಕಾನೂನಾತ್ಮಕ ರಕ್ಷಣೆ ಹೊಂದಿಲ್ಲದಿದ್ದರೆ ಎಲ್ಲಾ ಟ್ವೀಟ್ಗಳಿಗೂ ಟ್ವಿಟ್ಟರ್ ಸಂಸ್ಥೆಯೇ ಹೊಣೆಯಾಗಿರುತ್ತದೆ. ಇದರಿಂದಾಗಿ ಆಕ್ಷೇಪಾರ್ಹ ಟ್ವೀಟ್ಗಳ ಹೊಣೆಯೂ ಟ್ವಿಟ್ಟರ್ ಸಂಸ್ಥೆಯ ಮೇಲೆ ಇರಲಿದೆ. ಸೈಬರ್ ಕಾನೂನು ತಜ್ಞರ ಪ್ರಕಾರ, ''ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 79 ರ ಕಾನೂನಾತ್ಮಕ ರಕ್ಷಣೆ ಹೋದ ನಂತರ ಈ ವೇದಿಕೆಯಲ್ಲಿ ಮಾಡಲಾಗುವ ಯಾವುದೇ ಆಕ್ಷೇಪಾರ್ಹ ಪೋಸ್ಟ್ಗಳಿಗೆ ಸಂಸ್ಥೆಯ ಮುಖ್ಯಸ್ಥರಿಂದ ಹಿಡಿದು ಎಲ್ಲಾ ಸಿಬ್ಬಂದಿಗಳು ಹೊಣೆಯಾಗಲಿದ್ದಾರೆ.'' ಹಾಗಾಗಿ ಟ್ವಿಟ್ಟರ್ ಕಾನೂನು ರಕ್ಷಣೆ ಕಳೆದುಕೊಂಡ ನಂತರ ಎಲ್ಲಾ ಟ್ವೀಟ್ಗಳಿಗೆ ಸಂಸ್ಥೆಯೇ ಹೊಣೆಯಾಗಲಿದೆ.
ಸಮಸ್ಯೆ ಏನು?
ಫೆಬ್ರವರಿಯಲ್ಲಿ ಸರ್ಕಾರ ಘೋಷಿಸಿದ ಹೊಸ ಐಟಿ ನಿಯಮಗಳಂತೆ ವಾಟ್ಸಾಪ್, ಫೇಸ್ಬುಕ್, ಗೂಗಲ್ ಮತ್ತು ಇತರರು ಸೇರಿದಂತೆ ಭಾರತದ ಟೆಕ್ ಕಂಪೆನಿಗಳು ದೇಶದಲ್ಲಿ ಮುಖ್ಯ ಅನುಸರಣೆ ಅಧಿಕಾರಿಯನ್ನು, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆಗಳ ಬಗ್ಗೆ ನೋಡಿಕೊಳ್ಳಲು ಓರ್ವ ಅಧಿಕಾರಿಯನ್ನು ನೇಮಕ ಮಾಡಬೇಕಾಗಿತ್ತು. ಈ ಮೂವರೂ ಅಧಿಕಾರಿಗಳು ಭಾರತೀಯರು ಮತ್ತು ಕಂಪನಿಗಳ ಉದ್ಯೋಗಿಗಳಾಗಿರಬೇಕು ಎಂದು ನಿಯಮಗಳು ತಿಳಿಸಿವೆ. ಹೊಸ ಐಟಿ ನಿಯಮಗಳನ್ನು ಪಾಲಿಸದಿರುವ ಸಂಸ್ಥೆಗಳು ಮಧ್ಯವರ್ತಿ ಸ್ಥಾನಮಾನವನ್ನು ಕಳೆದುಕೊಳ್ಳಬಹುದು. ಹಾಗೆಯೇ ಯಾವುದೇ ದೂರು ಬಂದಲ್ಲಿ ಕ್ರಿಮಿನಲ್ ಕ್ರಮ ಎದುರಿಸಬೇಕಾಗಬಹುದು ಎಂದು ಕೇಂದ್ರ ಹೇಳಿದೆ.
ನೂತನ ಐಟಿ ನಿಯಮ ಪಾಲನೆಗೆ ಸರ್ಕಾರದ ಬಳಿ ಸಮಯಾವಕಾಶ ಕೋರಿದ ಟ್ವಿಟ್ಟರ್
ಮೊದಲು ಈ ನಿಯಮಗಳು ಗೌಪ್ಯೆತೆಗೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿ ಕೋರ್ಟ್ ಮೆಟ್ಟಿಲೇರಿದ್ದ ವಾಟ್ಸಾಪ್ ಮತ್ತು ಫೇಸ್ಬುಕ್ ಬಳಿಕ ಅಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ ಟ್ವಿಟ್ಟರ್ ಮೇ 25 ರಂದು ಜಾರಿಗೆ ಬಂದ ಈ ನಿಯಮ ಪಾಲನೆಗೆ ಹೆಚ್ಚಿನ ಸಮಯವನ್ನು ಕೋರಿದೆ. ಆದರೆ ಕೇಂದ್ರ ಜೂನ್ 5 ರಂದು ಎಲ್ಲಾ ಪ್ಲಾಟ್ಫಾರ್ಮ್ಗಳಿಗೆ ಹೊಸ ಐಟಿ ನಿಯಮಗಳನ್ನು ಅನುಸರಿಸುವಂತೆ ಪತ್ರವೊಂದನ್ನು ನೀಡಿದೆ. ಟ್ವಿಟ್ಟರ್ ನೋಡಲ್ ಮತ್ತು ಕುಂದುಕೊರತೆ ನಿವಾರಣೆ ಅಧಿಕಾರಿಯಾಗಿ ನೇಮಕ ಮಾಡಿರುವುದಾಗಿ ಜೂನ್ 6 ರಂದು ಕೇಂದ್ರಕ್ಕೆ ತಿಳಿಸಿರುವುದಾಗಿ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಈ ವ್ಯಕ್ತಿ ಕಂಪನಿಯ ಗುತ್ತಿಗೆ ನೌಕರ ಎಂದು ಟ್ವಿಟ್ಟರ್ ಕೇಂದ್ರಕ್ಕೆ ತಿಳಿಸಿದೆ. ಸರ್ಕಾರ ಇದಕ್ಕೆ ಒಪ್ಪಿಕೊಂಡಿದೆ. ಆದರೆ ನಿಮಯ ಪ್ರಕಾರ ಕಡ್ಡಾಯವಾಗಿ ಈ ಅನುಸರಣೆ ಅಧಿಕಾರಿಯನ್ನು ನೇಮಿಸಲು ಟ್ವಿಟ್ಟರ್ ವಿಫಲವಾದ ನಂತರ ಭಾರತದಲ್ಲಿ ತನ್ನ ಕಾನೂನಾತ್ಮಕ ರಕ್ಷಣೆಯನ್ನು ಟ್ವಿಟ್ಟರ್ ಕಳೆದುಕೊಂಡಿದೆ.
ಈ ಸಮಸ್ಯೆ ಟ್ವಿಟ್ಟರ್ ನಿಭಾಯಿಸುವುದಾದರೂ ಹೇಗೆ?
ಟ್ವಿಟ್ಟರ್ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಿಸಿದೆ. ಶೀಘ್ರದಲ್ಲೇ ಹೆಸರನ್ನು ಪ್ರಕಟಿಸಲಿದೆ ಎಂಬ ಮಾಹಿತಿ ಬಂದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆದರೆ ಈ ಹೆಸರು ಘೋಷಣೆ ಮಾಡುವವರೆಗೂ ಟ್ವಿಟರ್ ಕಾನೂನಿನ ನಿಬಂಧನೆಗಳಿಂದ ಮುಕ್ತವಾಗಿರುತ್ತದೆ. ಯಾವುದೇ ಕಾನೂನಾತ್ಮಕ ರಕ್ಷಣೆ ಟ್ವಿಟ್ಟರ್ಗೆ ಇರುವುದಿಲ್ಲ.
ಟ್ವಿಟ್ಟರ್ ವಿರುದ್ಧ ಮೊದಲ ಪ್ರಕರಣ ದಾಖಲು
ಈ ಎಲ್ಲಾ ಬೆಳವಣಿಗೆಯ ಮಧ್ಯೆ ಟ್ವಿಟ್ಟರ್ ವಿರುದ್ದ ಮೊದಲ ಪ್ರಕರಣ ದಾಖಲಾಗಿದೆ. ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ಬಳಕೆದಾರ ಮಾಡಿದ ಟ್ವೀಟ್ ಹಿನ್ನೆಲೆ ಟ್ವಿಟ್ಟರ್ ವಿರುದ್ದ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಮೊದಲ ಪ್ರಕರಣ ಮಂಗಳವಾರ ದಾಖಲಿಸಿದೆ. ಆಗಾಗಲೇ ಟ್ವಿಟ್ಟರ್ ತನ್ನ ಕಾನೂನಾತ್ಮಕ ರಕ್ಷಣೆಯನ್ನು ಕಳೆದುಕೊಂಡಾಗಿತ್ತು ಎಂದು ವರದಿ ತಿಳಿಸಿದೆ. ಈ ಟ್ವೀಟ್ "ದಾರಿತಪ್ಪಿಸುತ್ತದೆ ಮತ್ತು ಮಾಹಿತಿ ತಿರುಚಲಾಗಿದೆ" ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)