ಅಮಿತ್ ಮಾಳವೀಯ ಪೋಸ್ಟ್ಗೆ 'ಸುಳ್ಳು ಸುದ್ದಿ' ಮುದ್ರೆ ಒತ್ತಿದ ಟ್ವಿಟ್ಟರ್
ನವದೆಹಲಿ, ಡಿಸೆಂಬರ್ 2: ರಾಜಕೀಯ ಧ್ರುವೀಕರಣದ ನಡುವೆ ಟ್ವಿಟ್ಟರ್ ಸುಳ್ಳು ಸುದ್ದಿಗಳ ಹರಡುವಿಕೆಗೆ ಕಡಿವಾಣ ಹಾಕುವುದನ್ನು ತೀವ್ರಗೊಳಿಸಿದೆ. ಇತ್ತೀಚೆಗೆ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಪೋಸ್ಟ್ ಮಾಡಿದ್ದ ವಿಡಿಯೋವನ್ನು ತಪ್ಪು ಮಾಹಿತಿಯನ್ನು ಹರಡುತ್ತಿರುವ ಕಾರಣಕ್ಕೆ 'ತಿರುಚಿದ ಮಾಧ್ಯಮ' ಎಂದು ಟ್ವಿಟ್ಟರ್ ಗುರುತಿಸಿದೆ.
ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪೊಲೀಸರು ಹಿರಿಯ ರೈತನತ್ತ ಲಾಠಿ ಬೀಸುತ್ತಿರುವ ಫೋಟೊವೊಂದನ್ನು ಹಂಚಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ಆ ಘಟನೆಯ ಸಂಪಾದಿತ ವಿಡಿಯೋ ಪೋಸ್ಟ್ ಮಾಡಿದ್ದ ಅಮಿತ್ ಮಾಳವೀಯ, 'ಭಾರತವು ಸುದೀರ್ಘ ಸಮಯದಿಂದ ಕಂಡ ಅತ್ಯಂತ ನಂಬಲನರ್ಹ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ' ಎಂದು ಟೀಕಿಸಿದ್ದರು.
Fact Check: ರೈತರಿಗೆ ಪೊಲೀಸರು ಹೊಡೆದೇ ಇಲ್ಲವೇ? ಅವರು ಖಲಿಸ್ತಾನ ಉಗ್ರರೇ?
ಸಿಂಘು ಗಡಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ವೃದ್ಧ ರೈತನತ್ತ ಪೊಲೀಸ್ ಸಿಬ್ಬಂದಿ ಲಾಠಿ ಬೀಸುವುದು ಈ ಫೋಟೊದಲ್ಲಿ ಸೆರೆಯಾಗಿತ್ತು. 'ಇದು ಬಹಳ ದುಃಖ ಉಂಟುಮಾಡುವ ಚಿತ್ರ. ಜೈ ಜವಾನ್ ಜೈ ಕಿಸಾನ್ ಎನ್ನುವುದು ನಮ್ಮ ಘೋಷಣೆ. ಆದರೆ ಇಂದು ಪ್ರಧಾನಿ ಮೋದಿ ಅವರ ದರ್ಪವು ಜವಾನರು ಕೂಡ ರೈತರ ವಿರುದ್ಧ ನಿಲ್ಲುವಂತೆ ಮಾಡಿದೆ' ಎಂದು ರಾಹುಲ್ ಗಾಂಧಿ ಬರೆದಿದ್ದರು.
ಇದನ್ನು ಹಂಚಿಕೊಂಡಿದ್ದ ಅಮಿತ್ ಮಾಳವೀಯ, 'ಪ್ರಚಾರ Vs ವಾಸ್ತವ' ಎಂದು ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದರು. ಪೊಲೀಸ್ ಸಿಬ್ಬಂದಿ ಬೀಸಿದ್ದ ಲಾಠಿ ರೈತನಿಗೆ ತಗುಲಿಯೂ ಇರಲಿಲ್ಲ ಎಂದು ಪ್ರತಿಪಾದಿಸಿದ್ದರು. ಆದರೆ ಅವರು ಹಂಚಿಕೊಂಡಿದ್ದು ವಾಸ್ತವ ವಿಡಿಯೋದ ಕತ್ತರಿಸಿದ ಒಂದು ತುಣುಕನ್ನಷ್ಟೇ. ಅದೇ ರೈತನಿಗೆ ಮತ್ತೊಬ್ಬ ಪೊಲೀಸ್ ಸೆಕೆಂಡುಗಳ ಮುಂಚೆಯಷ್ಟೇ ಲಾಠಿಯಿಂದ ಬಾರಿಸಿದ್ದು ಮೂಲ ವಿಡಿಯೋದಲ್ಲಿ ಸೆರೆಯಾಗಿತ್ತು.
Rahul Gandhi must be the most discredited opposition leader India has seen in a long long time. https://t.co/9wQeNE5xAP pic.twitter.com/b4HjXTHPSx
— Amit Malviya (@amitmalviya) November 28, 2020
ಈಗ ಟ್ವಿಟ್ಟರ್ ಈ ವಿಡಿಯೋವನ್ನು ವಿರೂಪಗೊಳಿಸಿದ ವಿಡಿಯೋ ಎಂದು ಗುರುತಿಸಿದೆ. ಈ ಮೂಲಕ ಅದು ವಾಸ್ತವ ವಿಡಿಯೋವಲ್ಲ ಎಂದು ತಿಳಿಸಿದೆ.
'ಟ್ವಿಟ್ಟರ್ ಈಗ ಭಾರತದಲ್ಲಿ ಕೂಡ ಸುಳ್ಳು ಸುದ್ದಿಗಳನ್ನು ಗುರುತಿಸುವುದನ್ನು ಆರಂಭಿಸಿದೆ. ಭಾರತದಲ್ಲಿ ಈ ಗೌರವವನ್ನು ಪಡೆದುಕೊಂಡ ವ್ಯಕ್ತಿ ಯಾರೆಂದು ಊಹಿಸಿ? ಅದು ಭಾರತದ ಸುಳ್ಳು ಸುದ್ದಿ ಕಾರ್ಖಾನೆಯ ಕಿಂಗ್ ಪಿನ್ ಅಮಿತ್ ಮಾಳವೀಯ. ತಮಾಷೆಯ ದಿನಗಳು ಮುಂಬರಲಿವೆ' ಎಂದು ಕಪಿಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.