ನೆಲದ ಕಾನೂನು ಪಾಲಿಸುವಲ್ಲಿ ಟ್ವಿಟ್ಟರ್ ಸೋತಿದೆ; ಕೇಂದ್ರ
ನವದೆಹಲಿ, ಜುಲೈ 05: "ದೇಶದ ನೂತನ ಐಟಿ ನಿಯಮಗಳನ್ನು ಪಾಲಿಸುವಲ್ಲಿ ಸಾಮಾಜಿಕ ಜಾಲತಾಣ ಕಂಪನಿ ಟ್ವಿಟ್ಟರ್ ಇಂಕ್ ವಿಫಲವಾಗಿದೆ" ಎಂದು ಕೇಂದ್ರ ಸರ್ಕಾರ ಸೋಮವಾರ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
"ಸರ್ಕಾರ ರೂಪಿಸಿರುವ ಐಟಿ ನಿಯಮಗಳು ಈ ನೆಲದ ಕಾನೂನಾಗಿದ್ದು, ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ ಇದರ ಉಲ್ಲಂಘನೆಯಾಗಿದೆ. ಐಟಿ ನಿಯಮಗಳ ಕುರಿತು ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಮೂರು ತಿಂಗಳ ಗಡುವು ನೀಡಲಾಗಿದೆ. ಇದಾಗ್ಯೂ ಟ್ಬಿಟ್ಟರ್ ಈ ನಿಯಮಗಳ ಪಾಲನೆ ಮಾಡುವಲ್ಲಿ ಸೋತಿದೆ" ಎಂದು ಕೇಂದ್ರ ಹೇಳಿದೆ.
'ಶೀಘ್ರದಲ್ಲೇ ಹಂಗಾಮಿ ಕುಂದುಕೊರತೆ ಅಧಿಕಾರಿ ನೇಮಕ': ಹೈಕೋರ್ಟ್ಗೆ ಟ್ವಿಟ್ಟರ್
ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, "ಯಾವುದೇ ನಿಯಮಗಳನ್ನು ಪಾಲಿಸದೇ ಇರುವುದು ಕಾನೂನಿನ ಉಲ್ಲಂಘನೆ. ಇದು ಐಟಿ ಕಾಯ್ದೆಯಡಿ ನೀಡಲಾಗುವ ಪ್ರತಿರಕ್ಷೆಯನ್ನು ಕಳೆದುಕೊಳ್ಳಲು ಟ್ವಿಟ್ಟರ್ಗೆ ಕಾರಣವಾಗಲಿದೆ" ಎಂದು ತಿಳಿಸಿದೆ.
ಜುಲೈ 1ರ ವೇಳೆಗೆ ಟ್ವಿಟ್ಟರ್, ಮುಖ್ಯ ಕುಂದು ಕೊರತೆ ಅಧಿಕಾರಿ, ಅನುಸರಣಾ ಅಧಿಕಾರಿ, ನೋಡಲ್ ಸಂಪರ್ಕಾಧಿಕಾರಿಗಳನ್ನು ನೇಮಿಸಬೇಕಿತ್ತು. ಆದರೆ ನೇಮಿಸಿಲ್ಲ. ಜೊತೆಗೆ ಕಡ್ಡಾಯವಾಗಿ ತನ್ನ ವೆಬ್ಸೈಟ್ನಲ್ಲಿ ಸಂಪರ್ಕ ವಿಳಾಸವನ್ನು ನಮೂದಿಸಬೇಕಿತ್ತು. ಅದು ಕೂಡ ವೆಬ್ಸೈಟ್ನಲ್ಲಿಲ್ಲ. ಈ ನಿಯಮಗಳೆಲ್ಲವೂ ಇಲ್ಲಿನ ನೆಲದ ಕಾನೂನಾಗಿದ್ದು, ಸ್ಯಾನ್ಫ್ರಾನ್ಸಿಸ್ಕೊ ಮೂಲದ ಈ ಕಂಪನಿ ಪಾಲಿಸಲೇಬೇಕಿದೆ ಎಂದು ಅಫಿಡವಿಟ್ನಲ್ಲಿ ಉಲ್ಲೇಖಿಸಿದೆ.
ಐಟಿ ನಿಯಮಗಳ ಕುರಿತಂತೆ ಕೆಲವು ತಿಂಗಳುಗಳಿಂದ ಟ್ವಿಟ್ಟರ್ ಹಾಗೂ ಕೇಂದ್ರ ಸರ್ಕಾರದ ನಡುವೆ ಜಗ್ಗಾಟ ನಡೆಯುತ್ತಿದೆ. ಫೆಬ್ರವರಿ 25ರಂದು ಹೊಸ ಐಟಿ ನಿಯಮಗಳನ್ನು ರೂಪಿಸಲಾಗಿದ್ದು, ಟ್ವಿಟ್ಟರ್ಗೆ ಮೇ 25ರವರೆಗೂ ಗಡುವು ನೀಡಲಾಗಿತ್ತು.
ಜುಲೈ 6ಕ್ಕೆ ವಿಚಾರಣೆ ಮುಂದೂಡಲಾಗಿದೆ.