ಉತ್ತರ ಪ್ರದೇಶ: 26 ಬಾಲಕಿಯರನ್ನು ರಕ್ಷಿಸಿತು ಯುವಕನ ಒಂದು ಟ್ವೀಟ್!
ಲಖನೌ, ಜುಲೈ 7: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಸಮಯಪ್ರಜ್ಞೆಯಿಂದ ಮಾಡಿದ ಟ್ವೀಟ್ ಮಾನವ ಕಳ್ಳಸಾಗಣೆ ಕೂಪಕ್ಕೆ ಸಿಲುಕುತ್ತಿದ್ದ 26 ಬಾಲಕಿಯರನ್ನು ರಕ್ಷಿಸಿದೆ.
ಅವಧ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ ಆದರ್ಶ್ ಶ್ರೀವಾಸ್ತವ, ತಮ್ಮ ಕೋಚ್ನಲ್ಲಿದ್ದ ಬಾಲಕಿಯರ ವರ್ತನೆ ಕಂಡು ಅನುಮಾನಗೊಂಡರು.
ಸಿಟಿ ರೈಲು ನಿಲ್ದಾಣದ ಬಳಿ ಪಾದಚಾರಿ ಸೇತುವೆ ಶೀಘ್ರ ಬಳಕೆಗೆ
ಈ ಬಾಲಕಿಯರು ಅಭದ್ರತೆಯಿಂದ ಕಂಗಾಲಾಗಿರುವಂತೆ ಮತ್ತು ಕೆಲವರು ಅಳುತ್ತಿರುವುದನ್ನು ಗಮನಿಸಿದ ಆದರ್ಶ್, ಈ ಬಾಲಕಿಯರು ಮಾನವ ಕಳ್ಳಸಾಗಣೆಯ ಬಲಿಪಶುಗಳಾಗಿರಬಹುದು ಎಂದು ಶಂಕಿಸಿ ಟ್ವೀಟ್ ಮಾಡಿದ್ದರು.
ತಮ್ಮ ಟ್ವೀಟ್ನಲ್ಲಿ ಅವರು ರೈಲ್ವೆ ಸಚಿವಾಲಯ, ರೈಲ್ವೆ ಸಚಿವ ಪಿಯೂಷ್ ಗೋಯಲ್, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿದ್ದರು.
|
ಆದರ್ಶ್ ಶ್ರೀವಾಸ್ತವ ಟ್ವೀಟ್
ನಾನು ಅವಧ್ ಎಕ್ಸ್ಪ್ರೆಸ್ನಲ್ಲಿ (19040) ಪ್ರಯಾಣಿಸುತ್ತಿದ್ದೇನೆ. ನನ್ನ s5 ಕೋಚ್ನಲ್ಲಿ ಸುಮಾರು 25 ಹುಡುಗಿಯರಿದ್ದು ಎಲ್ಲರೂ ಅಪ್ರಾಪ್ತ ವಯಸ್ಕರಾಗಿದ್ದಾರೆ.
ಅವರಲ್ಲಿ ಕೆಲವರು ಅಳುತ್ತಿದ್ದು, ಎಲ್ಲರೂ ಭಯಭೀತರಾಗಿದ್ದಾರೆ ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದರು. ಮತ್ತೊಂದು ಟ್ವೀಟ್ನಲ್ಲಿ ಅವರು ಇದು ಮಾನವ ಕಳ್ಳಸಾಗಣೆ ಇರಬಹುದು. ನಾನು ಈಗ ಹರಿನಗರ ಸ್ಟೇಷನ್ನಲ್ಲಿದ್ದು, ಬಾಗಾಹ್ ಮತ್ತು ಗೋರಖ್ಪುರ ಮುಂದಿನ ನಿಲ್ದಾಣಗಳು. ದಯವಿಟ್ಟು ಅವರಿಗೆ ಸಹಾಯ ಮಾಡಿ ಎಂದು ಕೋರಿದ್ದರು.
ರೈಲ್ವೇ ಟಿಕೆಟ್ ರಿಯಾಯಿತಿ ಕೈಬಿಟ್ಟ 42 ಲಕ್ಷ ಹಿರಿಯರು: ಮೋದಿ
|
ಬಾಲಕಿಯರ ರಕ್ಷಣೆ
ಇದಕ್ಕೆ ಕೂಡಲೇ ಸ್ಪಂದಿಸಿದ ಮುಜಫ್ಫರ್ಪುರ್-ಬಾಂದ್ರಾ ಅವಾಧ್ ಎಕ್ಸ್ಪ್ರೆಸ್ನ ಜಿಆರ್ಪಿ ಮತ್ತು ಆರ್ಪಿಎಫ್ನ ಸಿಬ್ಬಂದಿ ಎಲ್ಲ 26 ಬಾಲಕಿಯರನ್ನು ರಕ್ಷಿಸಿದರು.
ಟ್ವೀಟ್ಗೆ ಸ್ಪಂದಿಸಿದ್ದ ವಾರಣಾಸಿ ಮತ್ತು ಲಖನೌದ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ಸಂದೇಶ ಹರಿದಾಡಿದ ಅರ್ಧಗಂಟೆಯಲ್ಲಿಯೇ ಕಾರ್ಯಪ್ರವೃತ್ತರಾಗಿ ತನಿಖೆ ಆರಂಭಿಸಿದ್ದಾರೆ ಎಂದು ರೈಲ್ವೆ ವಕ್ತಾರರೊಬ್ಬರು ತಿಳಿಸಿದ್ದಾರೆ.
ಗೋರಖ್ಪುರದ ಜಿಆರ್ಪಿ ಸಿಬ್ಬಂದಿ ಮಾನವ ಕಳ್ಳಸಾಗಣೆ ನಿಗ್ರಹ ಪೊಲೀಸರು ಮತ್ತು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಅವರ ಸಹಕಾರ ಪಡೆದರು.
ಆರ್ಪಿಎಫ್ನ ಇಬ್ಬರು ಯೋಧರು ಕಪ್ತಗಂಜ್ನಲ್ಲಿ ಸಾಮಾನ್ಯ ದಿರಿಸಿನಲ್ಲಿ ಬಂದು ಗೋರಖ್ಪುರ ನಿಲ್ದಾಣದಲ್ಲಿ ಬಾಲಕಿಯರನ್ನು ಇಳಿಸಿದರು.
ಬಿಹಾರದ ಬಾಲಕಿಯರು
'22 ಮತ್ತು 55 ವರ್ಷದ ಇಬ್ಬರು ಪುರುಷರೊಂದಿಗೆ 26 ಬಾಲಕಿಯರು ಇದ್ದರು. ಅವರೆಲ್ಲರೂ ಬಿಹಾರದ ಪಶ್ಚಿಮ ಚಂಪಾರಣ್ಯದವರು. ಆ ಬಾಲಕಿಯರನ್ನು ನರ್ಕಟಿಕ್ಯಗಂಜ್ನಿಂದ ಈದ್ಗಾಕ್ಕೆ ಕರೆದೊಯ್ಯಲಾಗುತ್ತಿತ್ತು.
ಬಾಲಕಿಯರನ್ನು ಪ್ರಶ್ನಿಸಿದಾಗ ಅವರಿಗೆ ಸಮರ್ಪಕವಾಗಿ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರನ್ನು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಗಿದೆ.
ಈ ಎಲ್ಲ ಬಾಲಕಿಯರೂ 10-14 ವರ್ಷ ವಯಸ್ಸಿನವರು ಎಂದು ಊಹಿಸಲಾಗಿದೆ. ಅವರ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಇಬ್ಬರು ಪುರುಷರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಆರ್ಪಿಎಫ್ ಹೇಳಿಕೆ ತಿಳಿಸಿದೆ.
|
ಆದರ್ಶ್ ಕಾರ್ಯಕ್ಕೆ ಮೆಚ್ಚುಗೆ
ಆದರ್ಶ್ ಶ್ರೀವಾಸ್ತವ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಟ್ವೀಟ್ ಮಾಡಿದ್ದು ಮಾತ್ರವಲ್ಲದೆ, ತಾವು ಇರುವ ಸ್ಥಳ ಹಾಗೂ ಮುಂದಿನ ನಿಲ್ದಾಣಗಳ ಕುರಿತು ನಿಖರ ಮಾಹಿತಿ ನೀಡುವ ಮೂಲಕ ಅವರು ಅಧಿಕಾರಿಗಳಿಗೆ ತಕ್ಷಣ ಕಾರ್ಯಪ್ರವೃತ್ತರಾಗಲು ನೆರವಾಗಿದ್ದಾರೆ.
|
ಗುರುತು ಗೋಪ್ಯ
ಹೌದು ನನ್ನ ಬಳಿ ಇನ್ನೊಂದು ಖಾತೆ ಇದೆ. ಆದರೆ ನಾನು ನನ್ನ ಗುರುತನ್ನು ಬಿಟ್ಟುಕೊಡಲು ಬಯಸುವುದಿಲ್ಲ. ಏಕೆಂದರೆ ನನ್ನ ಕುಟುಂಬದ ಸುರಕ್ಷತೆಗಾಗಿ. ನಾನು ನನ್ನ ಕುಟುಂಬದ ಜತೆ ಪ್ರಯಾಣಿಸುತ್ತಿದ್ದೆ. ನಾನು ಬಿಸಿಎ ವಿದ್ಯಾರ್ಥಿ ಎಂದು ಶ್ರೀವಾಸ್ತವ ಟ್ವೀಟ್ನಲ್ಲಿ ಹೇಳಿದ್ದಾರೆ.