ಹಿಂದೂತ್ವದ ಪಾಠ ಮಾಡಲು ಬಂದ ರಮ್ಯಾಗೆ ಟ್ವಿಟ್ಟಿಗರ ತಿರುಗೇಟು
ಬೆಂಗಳೂರು, ಮಾರ್ಚ್ 23 : "ಸ್ಮೃತಿ ಇರಾನಿ ಅವರು ಪ್ರತಿ ಮಹಿಳೆಯರಲ್ಲಿ ಹೊಲಸು ಹುಡುಕುತ್ತಾರೆ. ಹಾರ ಒಬ್ಬ ಮಹಿಳೆಯನ್ನು ಸ್ಪರ್ಶಿಸಿದ ಮಾತ್ರಕ್ಕೆ ಅದು ಮಲಿನವಾಗುವುದಿಲ್ಲ" ಎಂದು ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಹೆಡ್ ರಮ್ಯಾ ಅವರು ತತ್ತ್ವಜ್ಞಾನಿಯಂತೆ ಮಾತನಾಡಿದ್ದಾರೆ.
ಅವರು ಈ ರೀತಿ ಸ್ಮೃತಿ ಇರಾನಿಯನ್ನು ಟೀಕಿಸಲು ಕಾರಣವೂ ಇದೆ. ಅದೇನೆಂದರೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಪುತ್ಥಳಿಗೆ, ತಮಗೆ ಹಾಕಿದ್ದ ಹಾರವನ್ನು ಹಾಕಿ ಅವಮಾನಿಸಿದ್ದಾರೆ ಎಂದು ಟೀಕಿಸಿದ್ದರು.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಸ್ಮೃತಿ ಇರಾನಿ ಅವರ ಟ್ವೀಟ್ ಗೆ ಉತ್ತರಿಸಿರುವ ರಮ್ಯಾ ಅವರು, "ಮಹಿಳೆಯನ್ನು ಸ್ಪರ್ಶಿಸಿದ ಮಾತ್ರಕ್ಕೆ ಪುತ್ಥಳಿಗೆ ಹಾಕುವ ಹಾರ ಮಲಿನವಾಗುವುದಿಲ್ಲ. ಹಿಂದೂತ್ವ ಏನು ಹೇಳುತ್ತದೆಂದರೆ, ನಮ್ಮ ದೇಹವೇ ದೇಗುಲ (ಬಸವಣ್ಣ ಹೇಳಿದಂತೆ). ದೇವರು ಎಲ್ಲೆಲ್ಲಿಯೂ ನೆಲೆಸಿರುತ್ತಾನೆ. ಹೀಗಿದ್ದ ಮೇಲೆ ಅವಮಾನ ಮಾಡಿದ ಹೇಗಾಯಿತು? ನೀವು ಒಬ್ಬ ಮಹಿಳೆ" ಎಂದು ಟೀಕಾಪ್ರಹಾರ ಮಾಡಿದ್ದಾರೆ.
ನಿದ್ದೆಯಿಂದ ಏಳಬೇಕಾಗಿರುವುದು ಮೋದಿ ಸರಕಾರವೋ, ಕಾಂಗ್ರೆಸ್ ಪಕ್ಷವೋ?
ವಸ್ತುಸ್ಥಿತಿಯೇನೆಂದರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಪ್ರಿಯಾಂಕಾ ವಾದ್ರಾ ಅವರು ಲಾಲ್ ಬಹಾದ್ದೂರ್ ಶಾಸ್ತ್ರೀ ಅವರಿಗೆ ಹಾಕಿದ ಹಾರ, ಅವರ ದೇಹಕ್ಕೆ ಮಾತ್ರ ಸ್ಪರ್ಶವಾಗಿರಲಿಲ್ಲ, ಅವರಿಗೇ ತೊಡಿಸಲಾಗಿತ್ತು. ಅದನ್ನು ತಮ್ಮ ಕುತ್ತಿಗೆಯಿಂದ ತೆಗೆದು ಅವರಿವರೊಂದಿಗೆ ಹರಟೆ ಹೊಡೆಯುತ್ತ, ಅದೇ ಹಾರವನ್ನು ಅವರು ಮಾಜಿ ಪ್ರಧಾನಿಯ ಪುತ್ಥಳಿಗೆ ಹಾಕಿದ್ದರು. ಇದು ತಪ್ಪಲ್ಲವೆ?
ಇದೇ ಕೆಲಸವನ್ನು ಬಿಜೆಪಿಯವರು ಮಾಡಿದ್ದರೆ?
ಇದನ್ನು ತಪ್ಪೆಂದು ಮಾಜಿ ಸಂಸದೆ, ಹಾಲಿ ಕಾಂಗ್ರೆಸ್ಸಿನ ಸೋಷಿಯಲ್ ಮೀಡಿಯಾ ಹೆಡ್ ಆಗಿರುವ ರಮ್ಯಾ ಅವರು ಪರಿಗಣಿಸುವುದಿಲ್ಲ. ಇದೇ ಕೆಲಸವನ್ನು ಬಿಜೆಪಿ ನಾಯಕರು ಮಾಡಿದ್ದರೆ ತಪ್ಪೆಂದು ಪರಿಗಣಿಸುತ್ತಿದ್ದರೇನೋ? ತಮ್ಮ ನಾಯಕಿಯ ನಡೆಯನ್ನು ಸಮರ್ಥಿಸಿಕೊಳ್ಳಲು, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೆ ಹೊನ್ನ ಕಲಶವಯ್ಯಾ, ಕೂಡಲಸಂಗಮದೇವಾ... ಎಂಬ ಬಸವಣ್ಣನವರ ನುಡಿಗಳನ್ನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಬಳಸಿಕೊಂಡಿದ್ದಾರೆ.
ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?
|
ಇಟಲಿಯಲ್ಲಿ ಹೇಗೋ ನಮಗೆ ಗೊತ್ತಿಲ್ಲ?
ಇದಕ್ಕೆ ಭರ್ಜರಿಯಾಗಿ ಪ್ರತಿಕ್ರಿಯೆಗಳು ಹರಿದುಬರುತ್ತಿವೆ. ತಾಯಿ, ದೇಹವೇ ದೇಗುಲ ಅಂತ ವಚನ ನಾವೂ ಓದಿದೀವಿ, ನಿಜವೇ. ಆದರೆ, ಒಮ್ಮೆ ಒಂದು ದೇವರಿಗೆ ಮುಡಿಸಿದ ಹೂವನ್ನು ಯಾವತ್ತೂ ಮತ್ತೊಂದು ದೇವರಿಗೆ ಮುಡಿಸೋಲ್ಲ. ಇಟಲಿಯಲ್ಲಿ ಹೇಗೋ ನಮಗೆ ಗೊತ್ತಿಲ್ಲ? ಎಂದು ಲೋಹಿತ್ ಎನ್ನುವವರು ರಮ್ಯಾ ಅವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೋದಿ ಭಕ್ತರನ್ನು ಕೆಣಕಿದ್ದ ರಮ್ಯಾಗೆ ಟ್ವೀಟ್ ಬಾಣ ಬಿಟ್ಟ ಜಗ್ಗೇಶ್
|
ತಲೆಯಲ್ಲಿ ಮಿದುಳಿರುವವರು...
ಸ್ಮೃತಿಯನ್ನು ಬಿಡಿ, ತಲೆಯಲ್ಲಿ ಮಿದುಳಿರುವವರು ಯಾರೇ ಆದರೂ ಅವರು ಇದೇ (ಸ್ಮೃತಿ ಹೇಳಿದ) ಮಾತನ್ನೇ ಹೇಳುತ್ತಿದ್ದರು. ನಾವು ಬಳಸಲಾದ ಹೂವಿನ್ನು ದೇವರಿಗೆ ಅರ್ಪಿಸುತ್ತೇವೆಯೆ? ದೇವರಿರಲಿ, ನೀವಾದರೂ ಬಳಸಲಾದ ಹೂವಿನ ಹಾರವನ್ನು ನಿಮ್ಮ ಚಲನಚಿತ್ರಗಳಲ್ಲಿ ಧರಿಸಲು ಒಪ್ಪುತ್ತೀರಾ? ಇಂಥ ಹೇಳಿಕೆಯನ್ನು ಹಾಕುವ ಮುನ್ನ ನಿಮ್ಮನ್ನು ನೀವೇ ವಿಮರ್ಶೆ ಮಾಡಿಕೊಳ್ಳಿ ಎಂದು ರಘುನಂದನ್ ಅವರು ರಮ್ಯಾ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ರಮ್ಯಾ ಬಳಿ ಉತ್ತರವಿದೆಯೆ?
ಕರ್ನಾಟಕದ ಮತದಾರರೆ, ನಿಮ್ಮ ಕ್ಷೇತ್ರ ಯಾವುದು? ಕಳೆದ ಬಾರಿ ಗೆದ್ದವರು, ಸೋತವರು ಯಾರು?
|
ಬೇರೆಯವರಿಗೆ ಕೊಟ್ಟ ಹೂಗುಚ್ಛ ಸ್ವೀಕರಿಸ್ತೀರಾ?
ಹಲೋ ಮೇಡಂ, ಇಲ್ಲಿ ಹಾರ ಮಲಿನವಾಗುತ್ತದೋ ಇಲ್ಲವೋ ಎಂಬುದಲ್ಲ. ಯಾರೊಬ್ಬರು ಹಿರಿಯರು ತೀರಿಕೊಂಡಾಗ ಕೂಡ ಅವರ ಗೌರವಾರ್ಧವಾಗಿ ಬಳಸಲಾದ ಹಾರವನ್ನು ಅವರಿಗೆ ಎಂದೂ ಅರ್ಪಿಸುವುದಿಲ್ಲ. ಬೇರೆ ಯಾರಿಗೋ ಕೊಟ್ಟಂತಹ ಹೂಗುಚ್ಛವನ್ನು ನಿಮ್ಮನ್ನು ಸ್ವಾಗತಿಸಲು ನೀಡಿದರೆ ಅದನ್ನು ನೀವು ಸ್ವೀಕರಿಸುತ್ತೀರಾ? ಎಂದು ಆಯೋಜಕ ಎಂಬ ಟ್ವಿಟ್ಟರ್ ಖಾತೆ ಇರುವವರು ರಮ್ಯಾ ಅವರನ್ನು ಕೇಳಿದ್ದಾರೆ.
|
ಗಾಂಧಿ ಕುಟುಂಬವನ್ನು ಈರೀತಿ ಪೂಜಿಸಬೇಡಿ
ಕೇವಲ ನಿಮ್ಮ ನಾಯಕರನ್ನು ಬೆಂಬಲಿಸುವ ಉದ್ದೇಶದಿಂದ ಹೀಗೆ ಹೇಳಬೇಡಿ. ಒಮ್ಮೆ ಬಳಸಲಾದ ಹೂವನ್ನು ಅಥವಾ ಹಾರವನ್ನೂ ಯಾರೂ ಬಳಸುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ರಾಜಕೀಯದಲ್ಲಿ ಬಳಸಲಾದ ಹಾರವನ್ನೇ ಬೇರೆಯವರಿಗೂ ಬಳಸುವ ಪರಿಪಾಠವಿರಬಹುದು. ಹೀಗಾಗಿ ನೀವು ಹೀಗೆ ನಿಮ್ಮ ಮನಸ್ಥಿತಿಯನ್ನು ತೋರಿಸುತ್ತಿದ್ದೀರಿ. ಗಾಂಧಿ ಕುಟುಂಬವನ್ನು ಈ ರೀತಿ ಪೂಜಿಸುತ್ತ ಮೂರ್ಖರಂತೆ ವರ್ತಿಸಬೇಡಿ ಎಂದು ಬಿಜೋಯ್ ಎಂಬುವವರು ತಿರುಗೇಟು ನೀಡಿದ್ದಾರೆ.
ನಿಮ್ಮ ಜ್ಞಾನವನ್ನು ಸರಿಪಡಿಸಿಕೊಳ್ಳಿ
ಮೊದಲು ಹಿಂದೂತ್ವ ಏನೆಂಬುದನ್ನು ಚೆನ್ನಾಗಿ ತಿಳಿದುಕೊಳ್ಳಿ, ನಂತರ ನಮಗೆ ಬಂದು ಪ್ರವಚನ ನೀಡಿರಿ. ಮಹಿಳಾ ಕಾರ್ಡ್ ಹಿಡಿದುಕೊಂಡು ವಿಷಯಾಂತರ ಮಾಡುತ್ತ, ಪ್ರಿಯಾಂಕಾ ಅವರನ್ನು ಪ್ರಮೋಟ್ ಮಾಡುವುದು ವರ್ಕೌಟ್ ಆಗುವುದಿಲ್ಲ ಮತ್ತು ಈಗಾಗಲೆ ಆಗಿರುವ ಡ್ಯಾಮೇಜ್ ಅನ್ನು ಸರಿಪಡಿಸಲು ಆಗುವುದಿಲ್ಲ. ನಮ್ಮ ಭಾರತದ ಸಂಸೃತಿ ಮತ್ತು ಸಂಪ್ರದಾಯದ ಬಗ್ಗೆ ನಿಮ್ಮ ಜ್ಞಾನವನ್ನು ಸರಿಪಡಿಸಿಕೊಳ್ಳಿ. ಅದನ್ನು ಸಾಧ್ಯವಾಗಿಸಲು ಬರಿ ಪದಗಳಿಂದಲ್ಲ, ಆಂತರಿಕವಾಗಿ ನೀವು ಭಾರತೀಯಳಾಗಿರಬೇಕು ಎಂದು ಎ ವಾರಿಯರ್ ಎಂಬುವವರು ರಮ್ಯಾ ಅವರಿಗೆ ಭಾರತೀಯ ಸಂಸ್ಕೃತಿಯ ಪಾಠ ಮಾಡಿದ್ದಾರೆ.
ಬೇರೆಯವರು ಧರಿಸಿದ ಉಡುಪು ಧರಿಸ್ತೀರಾ?
ಮೊದಲು ವಿಡಿಯೋವನ್ನು ಸರಿಯಾಗಿ ನೋಡಿ. ಹೂವಿನ ಹಾರ ಬರಿ ಪ್ರಿಯಾಂಕಾರನ್ನು ಸ್ಪರ್ಶಿಸಿಲ್ಲ, ಅದನ್ನು ಅವರೇ ಧರಿಸಿದ್ದರು. ಇನ್ನು ಮುಂದೆ ರಮ್ಯಾ ಅವರು ಬೇರೆಯವರು ಬಳಸಿದ ಉಡುಪನ್ನೇ ಧರಿಸುತ್ತಾರೆ, ತಿಂದ ಆಹಾರವನ್ನೇ ಸೇವಿಸುತ್ತಾರೆ. ಬೇರೆಯವರು ಸ್ಪರ್ಶಿಸಿದ ಮಾತ್ರಕ್ಕೆ ಉಡುಪಾಗಲಿ, ಆಹಾರವಾಗಲಿ ಮಲಿನವಾಗುವುದಿಲ್ಲ ಅಲ್ಲವೆ? ಎಂದು ಹರೀಶ್ ಹೊಸಮನೆ ಎಂಬುವವರು ರಮ್ಯಾ ಅವರಿಗೆ ಕೇಳಿದ್ದಾರೆ.
ರಮ್ಯಾ ಅವರಿಗೆ ಆತ್ಮಸಾಕ್ಷಿ ಇದ್ದಿದ್ದರೆ
ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಸಾಲುಸಾಲು ಟ್ವೀಟ್ ಗಳು ರಮ್ಯಾ ಅವರ ಹೇಳಿಕೆಯನ್ನು ಟೀಕಿಸಿವೆ. ರಮ್ಯಾ ಅವರು ಆತ್ಮವಿಮರ್ಶೆ ಮಾಡಿಕೊಂಡಿದ್ದರೆ, ವಿಡಿಯೋವನ್ನು ನೋಡಿ (ನೋಡಿರುತ್ತಾರೆ) ವಸ್ತುನಿಷ್ಠವಾಗಿ ಪರಿಸ್ಥಿತಿಯನ್ನು ಅವಲೋಕಿಸಿದ್ದರೆ, ಆತ್ಮಸಾಕ್ಷಿ ಎಂಬುದಿದ್ದರೆ ಅನಗತ್ಯವಾಗಿ ಪ್ರಿಯಾಂಕಾ ವಾದ್ರಾ ಅವರು ಮಾಡಿರುವ ಕೆಲಸವನ್ನು (ತಾವು ಧರಿಸಿದ ಹಾರವನ್ನು ಲಾಲ್ ಬಹಾದ್ದೂರ್ ಶಾಸ್ತ್ರೀ ಪುತ್ಥಳಿಗೆ ಹಾಕಿದ್ದು) ಸಮರ್ಥಿಸಿಕೊಳ್ಳುತ್ತಿರಲಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದರೆ, ಆಗಿದ್ದು ತಪ್ಪು ಎಂದಿದ್ದರೆ ಬಿಜೆಪಿಯವರು ಕೂಡ ಮೆಚ್ಚುತ್ತಿದ್ದರು. ಆದರೆ, ಈಗ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಕೂಡ ಸಮರ್ಥಿಸಿಕೊಳ್ಳುವುದಿಲ್ಲ.