ಈಶಾನ್ಯದ ಹೀನಾಯ ಸೋಲು : ರಾಹುಲ್ ಮೇಲೆ ನೆಟ್ ನೋಟ
Recommended Video
ಬೆಂಗಳೂರು, ಮಾರ್ಚ್ 03 : ಈಶಾನ್ಯ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳಲು ಆರಂಭಿಸುತ್ತಿದ್ದಂತೆ, ಮತ್ತೆ ಎಲ್ಲರ ನೋಟ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯತ್ತ ತಿರುಗಿದೆ.
"ರಾಹುಲ್ ಗಾಂಧಿಯವರು ಚುನಾವಣೆಗಳ ಮಾಸ್ಟರ್ ಸ್ಟ್ರಾಟಜಿಸ್ಟ್. ಅವರಿಗೆ ಭಾರತದಿಂದ ಯಾವಾಗ ಓಡಿಹೋಗಬೇಕೆಂಬುದು ಚೆನ್ನಾಗಿ ಗೊತ್ತಿದೆ" ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ವ್ಯಂಗ್ಯವಾಡಿದ್ದು, "ಇಂಥ ಸಮಯದಲ್ಲಿ ಕಾರ್ಯಕರ್ತರನ್ನಷ್ಟೇ ಬಿಟ್ಟು ಯಾರಾದರೂ ದೇಶಬಿಟ್ಟು ಹೋಗುತ್ತಾರಾ" ಎಂದು ಪ್ರಶ್ನಿಸಿದ್ದಾರೆ.
ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಚುನಾವಣೆ: ಇಂದು ಫಲಿತಾಂಶ
ಆಘಾತಕಾರಿ ಸಂಗತಿಯೆಂದರೆ, ತ್ರಿಪುರಾದಲ್ಲಿ 2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ 10 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ಒಂದೂ ಸೀಟು ಗೆಲ್ಲುವ ಲಕ್ಷುವ ಹಾಗೆ ಕಾಣಿಸುತ್ತಿಲ್ಲ. ಸೊನ್ನೆಯನ್ನೇ ಗಿರಗಿರನೆ ಸುತ್ತುತ್ತಿದೆ. ರಾಹುಲ್ ಗಾಂಧಿ ಈ ರಾಜ್ಯದಲ್ಲಿ ಸಾಕಷ್ಟು ಪ್ರಚಾರ ಮಾಡಿದ್ದರೂ ಅವರಿಗೆ ಜನರು ಒಲಿದಿಲ್ಲ.
ತ್ರಿಪುರಾ : ಯುವಜನತೆ ಬಿಜೆಪಿ ಜಯಭೇರಿಯ ರೂವಾರಿ
ಕಾಂಗ್ರೆಸ್ ಮುಕ್ತ ಭಾರತ ಅಭಿಯಾನದ ಹೀರೋಗಳು ನರೇಂದ್ರ ಮೋದಿ, ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ಮಾತ್ರವಲ್ಲ, ಇದರಲ್ಲಿ ರಾಹುಲ್ ಗಾಂಧಿ ಅವರ ಪಾತ್ರವೂ ಇದೆ. ಇವರೇ ಕಾಂಗ್ರೆಸ್ ಮುಕ್ತ ಭಾರತದ ಹೀರೋಗಳು ಎಂದು ಮತ್ತೊಬ್ಬರು ವ್ಯಾಖ್ಯಾನಿಸಿದ್ದಾರೆ. ಎಲ್ಲ ಚುನಾವಣೆಗಳನ್ನು ರಾಹುಲ್ ಸೋತಿದ್ದಾರೆ ಎಂದು ಅಪಹಾಸ್ಯ ಮಾಡಬೇಡಿ, ಏಕೆ ಅವರು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿಲ್ಲವೆ ಎಂದು ಮಗದೊಬ್ಬರು ಹುಳ್ಳಗೆ ನಕ್ಕಿದ್ದಾರೆ.
ರಾಹುಲ್ಗೆ ಈಶಾನ್ಯಕ್ಕಿಂತ ಇಟಲಿಯೇ ಹೆಚ್ಚಾಯಿತೆ?
ಮಮತೆಯ ಸಾಕಾರಮೂರ್ತಿಯಾಗಿರುವ 93 ವರ್ಷದ ಅಜ್ಜಿಯನ್ನು ಭೇಟಿಯಾಗಲು ಹೋಗುವುದಾಗಿ ಹೇಳಿದ್ದ ರಾಹುಲ್ ಗಾಂಧಿ ಅವರ ಮೇಲೆ ವಿರೋಧಿಗಳು ಎಲ್ಲ ರೀತಿಯ ಮಾತಿನ ಅಸ್ತ್ರಗಳನ್ನು ಎಸೆಯುತ್ತಿದ್ದಾರೆ. ರಾಹುಲ್ ಅವರು ಬಹುಶಃ ಇಟಲಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಹೋಗಿರಬಹುದು. ಈಶಾನ್ಯ ರಾಜ್ಯಗಳಿಗಿಂತ ಇಟಲಿಯೇ ಇವರಿಗೆ ಹೆಚ್ಚಾಯಿತೆ ಎಂದು ಶೆಹಜಾದ್ ಅವರು ವ್ಯಂಗ್ಯವಾಡಿದ್ದಾರೆ.
ಆರ್ಯಭಟನಿಗೆ ಸೊನ್ನೆಯ ಮೂಲಕ ಗೌರವ
ತ್ರಿಪುರಾ ಮತ್ತು ನಾಗಾಲ್ಯಾಂಡ್ ನಲ್ಲಿ 'ಸೊನ್ನೆ' ಪಡೆದಿರುವುದು ರಾಹುಲ್ ಗಾಂಧಿಯವರ ಕಠಿಣ ಶ್ರಮದ ಹೆಗ್ಗುರುತು. ಬಹುವರ್ಷಗಳಿಂದ ನಾವು ಇಡೀ ಜಗತ್ತಿಗೆ ಸೊನ್ನೆಯನ್ನು ನೀಡಿದ ಆರ್ಯಭಟನಿಗೆ, ಈ ರೀತಿ ಸಾಧನೆ ಮಾಡಿ ಗೌರವ ನೀಡಬಯಸಿದ್ದೆವು. ಇಂದು ನಾವು ಯಶಸ್ವಿಯಾಗಿದ್ದೇವೆ. ಇದಕ್ಕೆಲ್ಲ ರಾಹುಲ್ ಅವರೇ ಕಾರಣ ಎಂದು ಸುರ್ಜೇವಾಲಾ ಅವರ ಹೆಸರು ಹಾಕಿಕೊಂಡು ಟ್ವಿಟ್ಟರ್ ನಲ್ಲಿ ಕಾಲೆಳೆಯಲಾಗುತ್ತಿದೆ.
ಅಧ್ಯಕ್ಷರಾದ ನಂತರ ಸೋತಿದ್ದು ಎಷ್ಟನೇ ಚುನಾವಣೆ?
ವಾಸ್ತವದ ಸಂಗತಿಯೆಂದರೆ, ರಾಹುಲ್ ಗಾಂಧಿಯವರು ಎಐಸಿಸಿ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ಸೋಲುತ್ತಿರುವ ಐದನೇ ಚುನಾವಣೆಯಿದು. ಡಿಸೆಂಬರ್ ನಲ್ಲಿ ಗುಜರಾತ್, ಹಿಮಾಚಲ ಪ್ರದೇಶ, ಫೆಬ್ರವರಿಯಲ್ಲಿ ತ್ರಿಪುರಾ ಮತ್ತು ನಾಗಾಲ್ಯಾಂಡ್. ಮೇಘಾಲಯದಲ್ಲಿ ಹೆಚ್ಚು ಸ್ಥಾನ ಗಳಿಸುವ ಲಕ್ಷಣ ಕಂಡುಬಂದಿದೆಯಾದರೂ, ಅತಂತ್ರ ಸ್ಥಿತಿ ನಿರ್ಮಾಣವಾಗುವ ಹಂತದಲ್ಲಿದೆ. ಎನ್ಪಿಪಿ ಕಾಂಗ್ರೆಸ್ಸಿಗಿಂತ ಮೇಘಾಲಯದಲ್ಲಿ ಮುಂದಿದೆ.
ಆದರೆ, ಉಪಚುನಾವಣೆಯಲ್ಲಿ ಗೆಲುವಿನ ಸಿಹಿ
ರಾಹುಲ್ ಅವರ ನಾಯಕತ್ವದಲ್ಲಿ ಮಧ್ಯಪ್ರದೇಶ, ರಾಜಸ್ತಾನದಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆಗಳಲ್ಲಿ ಜಯಗಳಿಸಿದ್ದಾರಾದರೂ, ತ್ರಿಪುರಾ ಮತ್ತು ನಾಗಾಲ್ಯಾಂಡ್ ನಲ್ಲಿ ಸೋತಿರುವ ರೀತಿ ಮುಟ್ಟಿಕೊಂಡು ನೋಡುವಂತಿದೆ. ಇದು ಮೇನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪರಿಣಾಮ ಬೀರುವುದಾ? ಕಾಲವೇ ಉತ್ತರಿಸಲಿದೆ.
LIVE: ತ್ರಿಪುರಾದಲ್ಲಿ ಅಭೂತಪೂರ್ವ ಜಯದತ್ತ ಬಿಜೆಪಿ