ಸತ್ಯ ಎಂದಿಗೂ ನಿರ್ಭಯ; ಟೂಲ್ಕಿಟ್ ಆರೋಪಕ್ಕೆ ರಾಹುಲ್ ಎದುರೇಟು
ನವದೆಹಲಿ, ಮೇ 25: ಕೊರೊನಾ ಸೋಂಕು ದೇಶದಲ್ಲಿ ಬಿಕ್ಕಟ್ಟು ತಂದಿರುವ ಈ ಸಮಯದಲ್ಲಿ ಪ್ರಧಾನಿ ಮೋದಿಯವರ ಕುರಿತು ಅಪಪ್ರಚಾರ ಮಾಡಲು ಕಾಂಗ್ರೆಸ್ ಟೂಲ್ಕಿಟ್ ಸಂಚು ಮಾಡಿದೆ ಎಂಬ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪ ಆಕ್ಷೇಪಗಳಿಗೆ ಕಾರಣವಾಗಿದೆ.
ಈ ಸಂಬಂಧ ದೆಹಲಿ ಪೊಲೀಸರು ಸೋಮವಾರ ಟ್ವಿಟ್ಟರ್ ಇಂಡಿಯಾಗೆ ನೋಟೀಸ್ ನೀಡಿದ್ದು, ಟ್ವಿಟ್ಟರ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಸತ್ಯ ಎಂದಿಗೂ ನಿರ್ಭಯ" ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆ ವಿತರಣೆ ಬಗ್ಗೆ ಕೇಂದ್ರದ ದಿವ್ಯನಿರ್ಲಕ್ಷ್ಯ: ರಾಹುಲ್ ಗಾಂಧಿ
ಮಂಗಳವಾರ ರಾಹುಲ್ ಗಾಂಧಿ, ಟೂಲ್ ಕಿಟ್ ಎನ್ನುವ ಹ್ಯಾಷ್ ಟ್ಯಾಗ್ನಲ್ಲಿ ಟ್ವೀಟ್ ಮಾಡಿದ್ದು, "ಸತ್ಯ ಎಂದಿಗೂ ನಿರ್ಭಯ" ಎಂದಿದ್ದಾರೆ.
ದೆಹಲಿ ಮತ್ತು ಗುರುಗ್ರಾಮದಲ್ಲಿನ ಟ್ವಿಟ್ಟರ್ ಕಚೇರಿಗೆ ಪೊಲೀಸರ ಎರಡು ತಂಡಗಳು ಭೇಟಿ ನೀಡಿದ ವಿಚಾರವಾಗಿ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಇದೊಂದು ಹೇಡಿತನದ ದಾಳಿ. ಬಿಜೆಪಿ ನಾಯಕರ ಮೋಸದ ಟೂಲ್ ಕಿಟ್ ಮರೆಮಾಚಲು ದೆಹಲಿ ಪೊಲೀಸರು ಟ್ವಿಟ್ಟರ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಬಿಜೆಪಿಯ ವ್ಯರ್ಥ ಪ್ರಯತ್ನಗಳು ಬಯಲಿಗೆ ಬಂದಿವೆ ಎಂದು ಟೀಕಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಕೊರೊನಾ ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸಿಲ್ಲ ಎಂಬುದಾಗಿ ಅಪಪ್ರಚಾರ ನಡೆಸಲು ಟೂಲ್ ಕಿಟ್ ಸೃಷ್ಟಿಸಲಾಗಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪ ಆರೋಪಿಸಿದ್ದರು. ಆದರೆ ಇದನ್ನು ಕಾಂಗ್ರೆಸ್ ನಿರಾಕರಿಸಿದ್ದು, ಬಿಜೆಪಿಯೇ ಈ ಟೂಲ್ ಕಿಟ್ ಹುಟ್ಟುಹಾಕಿದೆ ಎಂದು ಆರೋಪ ಮಾಡಿತ್ತು.
Truth remains unafraid.
— Rahul Gandhi (@RahulGandhi) May 25, 2021
सत्य डरता नहीं।#Toolkit
ಈ ಕುರಿತು ಪ್ರತಿಕ್ರಿಯಿಸಿದ್ದ ಟ್ವಿಟ್ಟರ್ ಸಂಸ್ಥೆ, ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರ ಟ್ವೀಟ್ ತಿರುಚಿದ ದಾಖಲೆ ಎಂದು ಹೇಳಿತ್ತು. ಈ ಸಂಬಂಧ ಸ್ಪಷ್ಟತೆ ನೀಡುವಂತೆ ನೋಟೀಸ್ ನೀಡಲಾಗಿತ್ತು.