ತ್ರಿಪುರಾದಲ್ಲಿ ಬಿಜೆಪಿ ಮೈತ್ರಿಕೂಟದ ಸರ್ಕಾರಕ್ಕೆ ಮುಖಭಂಗ: ಚುನಾವಣೆಯಲ್ಲಿ ಸೋಲು
ಅಗರ್ತಲಾ, ಏಪ್ರಿಲ್ 10: ತ್ರಿಪುರಾದಲ್ಲಿ ಬುಡಕಟ್ಟು ಕೌನ್ಸಿಲ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರಪಕ್ಷಕ್ಕೆ ತೀವ್ರ ಮುಖಂಭಂಗ ಉಂಟಾಗಿದೆ.
ತ್ರಿಪುರಾದ ಸ್ವಾಯತ್ತ ಜಿಲ್ಲಾ ಕೌನ್ಸಿಲ್ಗೆ ನಡೆದ ನಿರ್ಣಾಯಕ ಚುನಾವಣೆಯಲ್ಲಿ ಹೊಸ ಸಂಘಟನೆ ತಿಪ್ರಾ (ದಿ ಇಂಡಿಜೀನಿಯಸ್ ಪ್ರೋಗ್ರೆಸಿವ್ ರೀಜನಲ್ ಅಲೈಯನ್ಸ್) 28 ಸೀಟುಗಳ ಪೈಕಿ 18ರಲ್ಲಿ ಗೆಲ್ಲುವ ಮೂಲಕ ಅಧಿಕಾರ ಹಿಡಿದಿದೆ. ಬಿಜೆಪಿ ಹಾಗೂ ಅದರ ಮಿತ್ರಪಕ್ಷ ಐಪಿಎಫ್ಟಿ (ಇಂಡಿಜೀನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ) ಕೇವಲ ಒಂಬತ್ತು ಸೀಟುಗಳಲ್ಲಿ ಜಯಗಳಿಸಿವೆ. ಇನ್ನು ಒಂದು ಸೀಟು ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ಹಿಂದಿನ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಎಡರಂಗ ಮತ್ತು ಕಾಂಗ್ರೆಸ್ ಒಂದೂ ಸೀಟುಗಳಲ್ಲಿ ಗೆಲುವು ಕಂಡಿಲ್ಲ.
ಕಾಂಗ್ರೆಸ್ನ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಪ್ರದ್ಯೋತ್ ಮಾಣಿಕ್ಯ ದೇಬ್ ಬರ್ಮನ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳನ್ನು ನಿಭಾಯಿಸಿದ ವಿಚಾರದಲ್ಲಿ ಪಕ್ಷದೊಳಗೆ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ತೊರೆದು ತಿಪ್ರಾವನ್ನು (ಟಿಐಪಿಆರ್ಎ) ಸ್ಥಾಪಿಸಿದ್ದರು.
ಸ್ವಾಯತ್ತ ಜಿಲ್ಲಾ ಸಮಿತಿಯಲ್ಲಿ 30 ಸೀಟುಗಳಿದ್ದು, ಅವುಗಳಲ್ಲಿ 28 ಚುನಾಯಿತ ಮತ್ತು ಎರಡು ರಾಜ್ಯಪಾಲರಿಂದ ನಾಮನಿರ್ದೇಶನಗೊಳ್ಳುವ ಸೀಟುಗಳಿವೆ. ಈ 30 ಸೀಟುಗಳು 20 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹರಡಿವೆ. 2015ರಲ್ಲಿ ನಡೆದ ಸ್ವಾಯತ್ತ ಜಿಲ್ಲಾ ಸಮಿತಿ ಚುನಾವಣೆಯಲ್ಲಿ ಸಿಪಿಐಎಂ ನೇತೃತ್ವದ ಎಡರಂಗ 25 ಸೀಟುಗಳಲ್ಲಿ ಗೆದ್ದು ಭರ್ಜರಿ ಬಹುಮತ ಪಡೆದಿತ್ತು.
2018ರಲ್ಲಿ ನಡೆದ ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಐಪಿಎಫ್ಟಿ ಮೈತ್ರಿಕೂಟ ಬುಡಕಟ್ಟು ಸಮಿತಿ ಕ್ಷೇತ್ರಗಳಿರುವ 20 ವಿಧಾನಸಭೆ ಕ್ಷೇತ್ರಗಳ ಪೈಕಿ 18ರಲ್ಲಿ ಗೆಲುವು ಕಂಡಿದ್ದವು. ಈಗ ಈ ಕ್ಷೇತ್ರಗಳಲ್ಲಿ ಸೋಲು ಕಂಡಿರುವುದು ಅಡಳಿತಾರೂಢ ಮಿತ್ರಪಕ್ಷಗಳಿಗೆ ಮುಜುಗರ ಉಂಟುಮಾಡಿದೆ.