ತ್ರಿಪುರಾ ಚುನಾವಣೆ: ಅಗರ್ತಲಾ ಪಾಲಿಕೆ ಸೇರಿ 12 ಸ್ಥಳೀಯ ಸಂಸ್ಥೆಗಳಿಗೆ ಮತದಾನ
ನವದೆಹಲಿ, ನವೆಂಬರ್ 25: ತ್ರಿಪುರಾದಲ್ಲಿ ರಾಜಕೀಯ ಹಿಂಸಾಚಾರದ ನಡುವೆ ಗುರುವಾರ ನಾಗರಿಕ ಚುನಾವಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ ಈಶಾನ್ಯ ರಾಜ್ಯದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ಸಿಬ್ಬಂದಿ ನಿಯೋಜಿಸಲಾಗಿದೆ.
ತ್ರಿಪುರ ಪೊಲೀಸ್ ಪಡೆ ಮತ್ತು ತ್ರಿಪುರಾ ರಾಜ್ಯ ರೈಫಲ್ಸ್ ಜೊತೆಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮತ್ತು ಗಡಿ ಭದ್ರತಾ ಪಡೆಗಳನ್ನು (ಬಿಎಸ್ಎಫ್) ಸಹ ನಿಯೋಜಿಸಲಾಗುವುದು ಎಂದು ಪೊಲೀಸ್ ಮಹಾನಿರೀಕ್ಷಕ ಅರಿಂದಮ್ ನಾಥ್ ಹೇಳಿದ್ದಾರೆ.
"ಟಿಎಸ್ಆರ್ ಯೋಧರು ಮತ್ತು ಪೊಲೀಸರನ್ನು ಮತದಾನ ಕೇಂದ್ರಗಳಲ್ಲಿ ನಿಯೋಜಿಸಲಾಗುವುದು. ಪ್ರಾದೇಶಿಕ ಪ್ರಾಬಲ್ಯದ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಿಟ್ಟಿನಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗುವುದು" ಎಂದು ನಾಥ್ ತಿಳಿಸಿದ್ದಾರೆ.
ಮತಗಟ್ಟೆಗಳನ್ನು
ವಿಂಗಡಿಸಿ
ಭದ್ರತೆ:
ತ್ರಿಪುರಾದ 20 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ 644 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ದುರ್ಬಲ ಎಂದು ವರ್ಗೀಕರಿಸಲಾಗಿದೆ. ಈ ಮತಗಟ್ಟೆಗಳಿಗೆ ಅನುಗುಣವಾಗಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ಎಂಟು ಜಿಲ್ಲೆಗಳ ಎಲ್ಲಾ 20 ಪೊಲೀಸ್ ಠಾಣೆಗಳಿಗೆ ಮೊಬೈಲ್ ಗಸ್ತು ತಿರುಗಲು ವಾಹನಗಳನ್ನು ಒದಗಿಸಲಾಗಿದೆ.
ಹೆಚ್ಚುವರಿ ಸಿಆರ್ ಪಿಎಫ್ ಪಡೆ:
"ಸುಪ್ರೀಂ ಕೋರ್ಟ್ನ ನಿರ್ದೇಶನಗಳ ನಂತರ, ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (AMC) ಮತ್ತು ಇತರೆ ನಾಗರಿಕ ಸಂಸ್ಥೆಗಳ ಚುನಾವಣೆಗಳಿಗೆ ಹೆಚ್ಚುವರಿಯಾಗಿ 15 ಕೇಂದ್ರೀಯ ಮೀಸಲು ಪೊಲೀಸ್ ಪಡೆಯನ್ನು ಒದಗಿಸಲಾಗಿದೆ.
ರಾಜ್ಯದಲ್ಲಿ ಬಾಕಿ ಉಳಿದಿರುವ ವಾರಂಟ್ಗಳನ್ನು ಕಾರ್ಯಗತಗೊಳಿಸಲು ವಿಶೇಷ ಅಭಿಯಾನ ಪ್ರಾರಂಭಿಸಲಾಗಿದೆ. ಒಟ್ಟು 161 ಬಾಕಿ ಇರುವ ವಾರಂಟ್ಗಳನ್ನು ಕಾರ್ಯಗತಗೊಳಿಸಲಾಗಿದ್ದು, ನಾಗರಿಕ ಚುನಾವಣೆ ಘೋಷಣೆಯ ನಂತರ ಇದುವರೆಗೆ 433 ಆರೋಪಿಗಳನ್ನು ಬಂಧಿಸಲಾಗಿದೆ.
ರಾಜಕೀಯ ಹಿಂಸಾಚರದ ಬಗ್ಗೆ ಪ್ರಕರಣ:
ತ್ರಿಪುರಾದ ನಾಗರಿಕ ಚುನಾವಣೆ ಹೊಸ್ತಿಲಿನಲ್ಲಿ ನಡೆದ ಎಲ್ಲ ರಾಜಕೀಯ ಹಿಂಸಾಚಾರ ಘಟನೆಗಳಿಗೆ ಸಂಬಂಧಿಸಿದಂತೆ ಕಾನೂನು ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕಳೆದ ಅಕ್ಟೋಬರ್ 22ರಂದು ಚುನಾವಣೆ ಘೋಷಣೆಯಾದ ನಂತರದಿಂದ ಈವರೆಗೂ 57 ರಾಜಕೀಯ ಹಿಂಸಾಚಾರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತ್ರಿಪುರಾ ಪೊಲೀಸ್ ಪ್ರಧಾನ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.