ತ್ರಿಪುರ ಸಿಎಂ ಮಾಣಿಕ್ ಸಾಹಾ ನಾಮಪತ್ರ ಸಲ್ಲಿಕೆ; 3 ದಶಕದಲ್ಲಿ ಮೊದಲ ಬಾರಿಗೆ ನೇರ ಚುನಾವಣೆಗೆ ಸ್ಪರ್ಧೆ
ಗುವಾಹತಿ, ಜೂನ್ 6: ಎರಡು ವಾರಗಳ ಬಳಿಕ ತ್ರಿಪುರಾದಲ್ಲಿ ನಾಲ್ಕು ವಿಧಾನಸಭಾ ಸ್ಥಾನಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಒಟ್ಟು 24 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇವರಲ್ಲಿ ಹಾಲಿ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಕೂಡ ಇದ್ದಾರೆ. ಒಟ್ಟು 8 ಮಂದಿ ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ.
ಸಿಎಂ ಮಾಣಿಕ್ ಸಾಹಾ ಬರ್ದೊವಲಿ (Bardowali) ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಕುತೂಹಲ ಎಂದರೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಮಾಣಿಕ್ ಸಾಹಾ ಇದೇ ಮೊದಲ ಬಾರಿಗೆ ನೇರ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಮೂರು ದಶಕಗಳ ಕಾಲ ರಾಜಕೀಯದಲ್ಲಿದ್ದರೂ ಅವರು ಯಾವತ್ತೂ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದವರಲ್ಲ.
ತ್ರಿಪುರದ ನೂತನ ಸಿಎಂ ಡಾ. ಮಾಣಿಕ್ ಸಾಹಾ ಪರಿಚಯ
ಕಳೆದ ತಿಂಗಳು ನಡೆದ ದಿಢೀರ್ ಬೆಳವಣಿಗೆಯಲ್ಲಿ ಬಿಪ್ಲಬ್ ದೇಬ್ ಅವರ ಸ್ಥಾನಕ್ಕೆ ಸಿಎಂ ಆಗಿ ಮಾಣಿಕ್ ಸಾಹಾ ಅವರನ್ನು ಆರಿಸಲಾಯಿತು. ರಾಜ್ಯಸಭಾ ಸದಸ್ಯರಾಗಿದ್ದ ಸಾಹಾ ಅವರು ಸಿಎಂ ಆಗಿ ಆರು ತಿಂಗಳೊಳಗೆ ವಿಧಾನಸಭೆ ಸದಸ್ಯರಾಗಬೇಕು. ಜೂನ್ 23ಕ್ಕೆ ಮತದಾನ ನಡೆಯಲಿದೆ.
ಸಿಎಂ ಮಾಣಿಕ್ ಸಾಹಾ ಇಂದು ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಅವರ ಜೊತೆ ಮಾಜಿ ಸಿಎಂ ಬಿಪ್ಲಬ್ ದೇವ್ ಹಾಗೂ ಬಿಜೆಪಿಯ ಇತರ ಮುಖಂಡರು ಇದ್ದರೆನ್ನಲಾಗಿದೆ. ಬರ್ದೊವಲಿ ಕ್ಷೇತ್ರದ ಉಪಚುನಾವಣೆಗೆ ಮಾಣಿಕ್ ಸಾಹಾ ಸೇರಿದಂತೆ ಏಳು ಮಂದಿ ನಾಮಪತ್ರ ಸಲ್ಲಿಸಿರುವುದು ತಿಳಿದುಬಂದಿದೆ.
'ನಕಲಿ CIA ವರದಿ'ಯಲ್ಲಿ ಮಾಜಿ ಸಿಎಂ ಬಿಪ್ಲಬ್ ದೇಬ್ ಹೆಸರು, ಪತ್ನಿ ದೂರು
ಕಾಂಗ್ರೆಸ್ನಿಂದ ಆಶಿಶ್ ಕುಮಾರ್ ಸಾಹಾ, ಟಿಎಂಸಿಯಿಂದ ಸಂಹಿತಾ ಭಟ್ಟಾಚಾರ್ಯ ಮತ್ತು ಫಾರ್ವರ್ಡ್ ಬ್ಲಾಕ್ ಪಕ್ಷದಿಂದ ರಘುನಾಥ್ ಸರ್ಕಾರ್ ಅವರು ಮಾಣಿಕ್ ಸಾಹಾಗೆ ಪ್ರಮುಖ ಎದುರಾಳಿಗಳು.
ಮೂವರು ಬಿಜೆಪಿ ಶಾಸಕರ ರಾಜೀನಾಮೆ ಮತ್ತು ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ ಶಾಸಕ ರಮೇಶ್ ಚಂದ್ರ ದೇಬನಾಥ್ ನಿಧನದಿಂದ ತೆರವಾದ ನಾಲ್ಕು ಸ್ಥಾನಗಳಿಗೆ ಈಗ ಉಪಚುನಾವಣೆ ಆಗುತ್ತಿರುವುದು. ಎಲ್ಲಾ ನಾಲ್ಕು ಕ್ಷೇತ್ರಗಳಲ್ಲೂ ಬಹುಪಕ್ಷಗಳ ಪೈಪೋಟಿ ನಡೆಯುತ್ತಿದೆ. ಬಿಜೆಪಿ, ಎಡರಂಗ, ಟಿಎಂಸಿ ಮತ್ತು ಕಾಂಗ್ರೆಸ್ ಈ ನಾಲ್ಕು ಪಕ್ಷಗಳ ನಡುವೆ ಜಿದ್ದಾಜಿದ್ದಿ ಇದೆ.
ಸಿಪಿಐಎಂ ಪಕ್ಷ ಹಲವು ದಶಕಗಳಿಂದ ಇಲ್ಲಿ ಆಡಳಿತ ನಡೆಸಿತ್ತು. ಬಿಜೆಪಿ ಇತ್ತೀಚೆಗೆ ಇಲ್ಲಿ ಬಲವೃದ್ಧಿಸಿಕೊಂಡು ಆಡಳಿತ ನಡೆಸುತ್ತಿದೆ. ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷ ಇತ್ತೀಚೆಗೆ ಇಲ್ಲಿ ತನ್ನ ಪ್ರಭಾವ ಬೀರುತ್ತಿರುವುದು ಹೌದು. ಹೀಗಾಗಿ, ತ್ರಿಪುರಾ ಉಪಚುನಾವಣೆ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿದೆ.
(ಒನ್ಇಂಡಿಯಾ ಸುದ್ದಿ)
Recommended Video