ನಾನು ಸಿಎಂ ಆಗಿರಬೇಕೋ ಬೇಡವೋ, ಜನರೇ ಹೇಳಲಿ: ಬಿಜೆಪಿ ಸರ್ಕಾರದಲ್ಲಿ ಮತ್ತೆ ಸಂಘರ್ಷ
ಅಗರ್ತಲಾ, ಡಿಸೆಂಬರ್ 9: ಎರಡು ತಿಂಗಳ ಹಿಂದೆ ತ್ರಿಪುರಾ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ವಿರುದ್ಧ ಉಂಟಾಗಿರುವ ಅಸಮಾಧಾನ ಮತ್ತೆ ಸ್ಫೋಟಗೊಂಡಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಳಿವು ಉಳಿವಿನ ಬಗ್ಗೆ ಹಲವು ಪ್ರಶ್ನೆಗಳು ಉದ್ಭವವಾಗಿವೆ.
ತಾವು ಅಧಿಕಾರದಲ್ಲಿ ಇರಬೇಕೇ ಅಥವಾ ಬೇಡವೇ ಎಂಬುದನ್ನು ಜನರೇ ತೀರ್ಮಾನಿಸಲಿ ಎಂದು ಬಿಪ್ಲಬ್ ಕುಮಾರ್ ಹೇಳಿದ್ದಾರೆ. ಪಕ್ಷದಲ್ಲಿನ ಬಂಡಾಯವನ್ನು ಸರಿಪಡಿಸಲು ಹೈಕಮಾಂಡ್ ಸಾಹಸಪಡುತ್ತಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವುದನ್ನು ಪಕ್ಷದ ನಾಯಕರಿಗೆ ಬಿಟ್ಟುಬಿಡಿ. ನೀವು ಜನರ ಸೇವೆಯನ್ನು ಮುಂದುವರಿಸಿ ಎಂದು ಬಿಜೆಪಿಯ ತ್ರಿಪುರಾ ಉಸ್ತುವಾರಿ ವಿನೋದ್ ಸೋಂಕರ್ ಹೇಳಿದ್ದಾರೆ.
ಬಿಪ್ಲಬ್ ಸರ್ಕಾರದಲ್ಲಿ ವಿಪ್ಲವ, ಸಂತೋಷ್, ಜೆಪಿ ನಡ್ಡಾಗೆ ದೂರು
ಮಂಗಳವಾರ ಮಾಧ್ಯಮದ ಮುಂದೆ ಮಾತನಾಡಿದ್ದ ಬಿಪ್ಲಬ್ ಕುಮಾರ್ ದೇಬ್, ತಾವು ಡಿಸೆಂಬರ್ 13ರಂದು ಅಗರ್ತಲಾದ ವಿವೇಕಾನಂದ ಮೈದಾನಕ್ಕೆ ಹೋಗಲಿದ್ದು, ತಾವು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೇ ಅಥವಾ ಬೇಡವೇ ಎಂದು ಅಲ್ಲಿ ನೆರೆಯುವ ತ್ರಿಪುರಾದ ಜನತೆಯನ್ನು ಕೇಳುವುದಾಗಿ ತಿಳಿಸಿದ್ದಾರೆ. 'ಒಂದು ವೇಳೆ ಜನರು ನನಗೆ ಬೆಂಬಲ ನೀಡದೆ ಹೋದರೆ ನಾನು ಪಕ್ಷದ ಹೈಕಮಾಂಡ್ಗೆ ಮಾಹಿತಿ ನೀಡುತ್ತೇನೆ' ಎಂದು ಹೇಳಿದ್ದಾರೆ.
ತ್ರಿಪುರಾದ ಬಿಜೆಪಿ ಉಸ್ತುವಾರಿಯಾಗಿ ಹೊಸದಾಗಿ ಆಯ್ಕೆಯಾಗಿರುವ ಸೋಂಕರ್ ಅವರು ಇತ್ತೀಚೆಗಷ್ಟೇ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಗುಂಪೊಂದು ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರನ್ನು ಕಿತ್ತುಹಾಕುವಂತೆ ಒತ್ತಾಯಿಸಿ 'ಬಿಪ್ಲಬ್ ಹಠಾವೋ, ಬಿಜೆಪಿ ಬಚಾವೊ' ಎಂಬ ಘೋಷಣೆ ಕೂಗಿದ್ದರು ಎನ್ನಲಾಗಿದೆ.
ಸಾರ್ವಜನಿಕರನ್ನು ಭೇಟಿ ಮಾಡಿ ಅವರ ನಿರ್ಧಾರ ಕೇಳುವುದಾಗಿ ನೀಡಿರುವ ಹೇಳಿಕೆ ಕುರಿತು ಬಿಪ್ಲಬ್ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇಬ್ಬರೊಂದಿಗೂ ಮಾತನಾಡಿದ್ದೇನೆ. ಮುಖ್ಯಮಂತ್ರಿಗಳು ತ್ರಿಪುರಾ ಜನತೆಯ ಸೇವೆಯನ್ನು ಮುಂದುವರಿಸಬೇಕು. ಪಕ್ಷದೊಳಗೆ ಏನೇ ಸಮಸ್ಯೆ ಇದ್ದರೂ ಅದನ್ನು ಪಕ್ಷ ನೋಡಿಕೊಳ್ಳಲಿದೆ ಎಂದು ಸೋಂಕರ್ ಹೇಳಿದ್ದಾರೆ.
ಬಿಪ್ಲಬ್ ವಿರುದ್ಧ ಸಿಡಿದೆದ್ದಿದ್ದ ಬಿಜೆಪಿಯ ಶಾಸಕರ ತಂಡವೊಂದು ಅಕ್ಟೋಬರ್ 13ರಂದು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಕುರಿತು ಅನೇಕ ಆರೋಪಗಳನ್ನು ಮಾಡಿತ್ತು. ಕಳಪೆ ನಾಯಕತ್ವ ಮತ್ತು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಎಂದು ಶಾಸಕರು ದೂರಿದ್ದರು.