ಪ್ರಸಾರವಾಗದ ತ್ರಿಪುರಾ ಸಿಎಂ ಭಾಷಣ, ಪ್ರಸಾರ್ ಭಾರತಿ ವಿರುದ್ಧ ಆಕ್ರೋಶ
ಅಗರ್ತಲ, ಆಗಸ್ಟ್ 16: ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡುವುದಕ್ಕೆ ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋದಿಂದ ನನಗೆ ಅವಕಾಶ ನಿರಾಕರಿಸಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಅಸಹಿಷ್ಣುತೆಯ ನಡೆ ಎಂದು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಆರೋಪಿಸಿದ್ದಾರೆ.
ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋದ ಜವಾಬ್ದಾರಿ ವಹಿಸಿರುವ ಪ್ರಸಾರ್ ಭಾರತಿಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗಸ್ಟ್ ಹನ್ನೆರಡರಂದು ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋದಿಂದ ಮಾಣಿಕ್ ಸರ್ಕಾರ್ ಅವರ ಭಾಷಣವನ್ನು ರೆಕಾರ್ಡ್ ಮಾಡಿಕೊಳ್ಳಲಾಗಿತ್ತು ಎಂದು ತ್ರಿಪುರಾ ಸರಕಾರ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದೆ.
ಆ ಭಾಷಣದಲ್ಲಿ ಕೆಲ ಬದಲಾವಣೆಗಳನ್ನು ಮಾಡದಿದ್ದರೆ ಅದನ್ನು ಪ್ರಸಾರ ಮಾಡಲು ಸಾಧ್ಯವಿಲ್ಲ ಎಂದು ಸೋಮವಾರ ರಾತ್ರಿ ಏಳು ಗಂಟೆಗೆ ಮುಖ್ಯಮಂತ್ರಿ ಕಚೇರಿಗೆ ಪತ್ರದ ಮೂಲಕ ತಿಳಿಸಲಾಗಿದೆ.
"ಮುಖ್ಯಮಂತ್ರಿಗಳ ಸಂದೇಶವನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಸದ್ಯಕ್ಕಿರುವ ರೀತಿಯಲ್ಲಿ ಈ ಸಂದರ್ಭಕ್ಕೆ ಅನುಗುಣವಾಗಿ ಪ್ರಸಾರ ಮಾಡಲು ಸಾಧ್ಯವಿಲ್ಲ. ನೀತಿ ಸಂಹಿತೆಗೆ ತಕ್ಕಂತೆ ಇಲ್ಲದಿರುವುದರಿಂದ ಜವಾಬ್ದಾರಿಯುತ ಮಾಧ್ಯಮವಾಗಿ ಪ್ರಸಾರ ಮಾಡಲು ಆಗಲ್ಲ" ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಆದರೂ ಮುಕ್ಯಮಂತ್ರಿಗಳು ಅದನ್ನು ಬದಲಾಯಿಸಿಕೊಳ್ಳಲು ಒಪ್ಪಿದರೆ, ಈ ಸಂದರ್ಭಕ್ಕೆ ತಕ್ಕಂತೆ ಇದ್ದು, ಜನರ ಭಾವನೆಗಳಿಗೆ ಧಕ್ಕೆಯಾಗದಂತಿದ್ದರೆ ಅದನ್ನು ಪ್ರಸಾರ ಮಾಡಲು ಸಂತೋಷಿಸುತ್ತೇವೆ ಎಂದು ಕೂಡ ಹೇಳಲಾಗಿದೆ. ಆದರೆ ಈ ಕ್ರಮದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.