ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರ
ನವದೆಹಲಿ, ಡಿಸೆಂಬರ್ 27 : ಕೇಂದ್ರ ಸರ್ಕಾರದ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ತ್ರಿವಳಿ ತಲಾಖ್ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಕಾಂಗ್ರೆಸ್ ಮಸೂದೆಗೆ ಭಾರೀ ವಿರೋಧ ವ್ಯಕ್ತಪಡಿಸಿ, ಕಲಾಪದಿಂದ ಹೊರ ನಡೆಯಿತು.
ಗುರುವಾರ ಮಧ್ಯಾಹ್ನ ತ್ರಿವಳಿ ತಲಾಖ್ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಲಾಯಿತು. ಸಂಜೆಯ ತನಕ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆ ಬಗ್ಗೆ ಕಾವೇರಿದ ಚರ್ಚೆ ನಡೆಯಿತು. ಅಂತಿಮವಾಗಿ ಧ್ವನಿ ಮತದ ಮೂಲಕ ಮಸೂದೆ ಅಂಗೀಕಾರವಾಯಿತು.
ಏನಿದು ತ್ರಿವಳಿ ತಲಾಖ್ ಕಾಯ್ದೆ: ಪ್ರಸ್ತುತ ತಿದ್ದುಪಡಿಯಲ್ಲೇನಿದೆ?
ತ್ರಿವಳಿ ತಲಾಖ್ ವಿಧೇಯಕದ ಪರವಾಗಿ 245 ಮತ್ತು ವಿರುದ್ಧವಾಗಿ ಕೇವಲ 11 ಮತಗಳು ಚಲಾವಣೆಯಾದವು. ಕಾಂಗ್ರೆಸ್ ಮತ್ತು ಎಐಎಡಿಎಂಕೆ ಪಕ್ಷದ ಸಂಸದರು ಕಲಾಪವನ್ನು ಬಹಿಷ್ಕಾರ ಮಾಡಿ ಹೊರ ನಡೆದರು. ಬಳಿಕ ಮಸೂದೆ ಪರವಾಗಿ ಮತದಾನ ನಡೆಯಿತು.
ತ್ರಿವಳಿ ತಲಾಖ್ ಅಪರಾಧ, ಕೇಂದ್ರದಿಂದ ಸುಗ್ರೀವಾಜ್ಞೆ
ತ್ರಿವಳಿ ತಲಾಖ್ ನಿಷೇಧಿಸುವ ಸಂಬಂಧ ಹಿಂದೆಯೇ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಅನುಮೋದನೆ ಸಿಗದ ಕಾರಣ ಕಾಯ್ದೆಯಾಗಿ ರೂಪಗೊಂಡಿರಲಿಲ್ಲ. ಆದ್ದರಿಂದ, ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತಂದಿತ್ತು. ಸುಗ್ರಿವಾಜ್ಞೆಗೆ ಎರಡೂ ಸದನಗಳ ಒಪ್ಪಿಗೆ ಬೇಕಾದ ಕಾರಣ ಗುರುವಾರ ಲೋಕಸಭೆಯಲ್ಲಿ ಮಂಡನೆ ಮಾಡಲಾಯಿತು.
ತ್ರಿವಳಿ ತಲಾಖ್ : ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ
ಮಸೂದೆ ಮಂಡನೆ ಮಾಡಿದ ಬಳಿಕ ಲೋಕಸಭೆಯಲ್ಲಿ ಮಾತನಾಡಿದ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು, 'ತ್ರಿವಳಿ ತಲಾಖ್ ತಡೆ ಕಾಯ್ದೆಯು ಯಾವುದೇ ಧರ್ಮ ಅಥವ ಸಮುದಾಯದ ವಿರೋಧಿಯಲ್ಲ. ಮಹಿಳೆಯರ ರಕ್ಷಣೆ ಮತ್ತು ಗೌರವದ ಪ್ರತೀಕವಾಗಿದೆ. ಹೀಗಿರುವಾರ ಎಲ್ಲರೂ ಅದನ್ನು ಬೆಂಬಲಿಸಬೇಕು' ಎಂದು ಮನವಿ ಮಾಡಿದರು.
ಕಾಂಗ್ರೆಸ್ನ ಸುಷ್ಮಿತಾ ದೇವ್ ಅವರು ಮಾತನಾಡಿ, 'ತ್ರಿವಳಿ ತಲಾಖ್ನಿಂದ ಮುಸ್ಲಿಂ ಮಹಿಳೆಯರಿಗೆ ಪ್ರಯೋಜನವಾಗುವುದಿಲ್ಲ. ಪುರುಷನಿಗೆ ದಂಡ ಮಾತ್ರ ವಿಧಿಸಲಾಗುತ್ತದೆ. ಅದರ ಹೊರತು ವಿಚ್ಛೇಧನ ಲಭಿಸುವುದರಿಂದ ಯಾವುದೇ ಮಹತ್ವದ ಬದಲಾವಣೆ ಆಗುವುದಿಲ್ಲ. ಆದ್ದರಿಂದ ಮಸೂದೆ ಬೆಂಬಲಿಸುವುದಿಲ್ಲ' ಎಂದು ಹೇಳಿದರು.